ADVERTISEMENT

ಬೆಳೆಗಳಿಗೆ ನ್ಯಾಯಯುತ ಬೆಲೆ ಕೊಡಿ

ರಾಜ್ಯ ರೈತ ಸಂಘ, ಹಸಿರು ಸೇನೆ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2022, 3:14 IST
Last Updated 13 ಆಗಸ್ಟ್ 2022, 3:14 IST
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೇತೃತ್ವದಲ್ಲಿ ರೈತರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ‘ರೈತರ ಉತ್ಪನ್ನಗಳಿಗೆ ಬೆಲೆ ಸ್ವಾತಂತ್ರ್ಯ ಚಳವಳಿ’ ನಡೆಸಿದರು. ಎಚ್.ಆರ್.ಬಸವರಾಜಪ್ಪ ಮಾತನಾಡಿದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೇತೃತ್ವದಲ್ಲಿ ರೈತರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ‘ರೈತರ ಉತ್ಪನ್ನಗಳಿಗೆ ಬೆಲೆ ಸ್ವಾತಂತ್ರ್ಯ ಚಳವಳಿ’ ನಡೆಸಿದರು. ಎಚ್.ಆರ್.ಬಸವರಾಜಪ್ಪ ಮಾತನಾಡಿದರು.   

ಶಿವಮೊಗ್ಗ: ರೈತರ ಬೆಳೆಗಳಿಗೆ ನ್ಯಾಯಯುತ ಬೆಲೆ ಸಿಗಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು‘ರೈತರ ಉತ್ಪನ್ನಗಳಿಗೆ ಬೆಲೆ ಸ್ವಾತಂತ್ರ್ಯ ಚಳವಳಿ’ ನಡೆಸಿದರು. ನಂತರ ಜಿಲ್ಲಾಡಳಿದ ಮೂಲಕ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಿದರು.

76ನೇ ಸ್ವಾತಂತ್ರ್ಯೋತ್ಸವಕ್ಕೆ ದೇಶ ಸಜ್ಜಾಗಿದೆ. ಇದನ್ನು ರೈತರು ಬಿಟ್ಟು ರಾಜಕಾರಣಿಗಳು, ರಾಜಕೀಯ ಕೃಪಾಪೋಷಿತರು, ಕೈಗಾರಿಕೆ ಮಾಲೀಕರು, ವರ್ತಕರು, ನೌಕರಶಾಹಿಗಳು ಸಂಭ್ರಮಿಸುತ್ತಿ
ದ್ದಾರೆ. ಅವರ ಅಗತ್ಯಗಳನ್ನು ರೈತ ಅಗ್ಗದ ಬೆಲೆಯಲ್ಲಿ ಪೂರೈಸಿ ಸಾಲದ ಸುಳಿಗೆ ಸಿಲುಕಿದ್ದಾನೆ ಎಂದು ದೂರಿದರು.

‘ರೈತರಿಗೆ ಮಾತ್ರ ಇದುವರೆಗೂ ನಿಜವಾದ ಸ್ವಾತಂತ್ರ್ಯ ಸಿಕ್ಕಿಲ್ಲ. ರೈತರನ್ನು ಹೊರತುಪಡಿಸಿ ಎಲ್ಲರೂ ಬೆಲೆಗಳ ಲಾಭ ಪ್ರಯೋಜನ ಪಡೆಯುತ್ತಿ‌ದ್ದಾರೆ. ಹಾಗಾಗಿ ನಮ್ಮ ಬೆಳೆಗಳಿಗೆ ಬೆಲೆಯಾದರೂ ಬರಲಿ ಎಂಬ ನಿಟ್ಟಿನಲ್ಲಿ ಬೆಲೆ ಸ್ವಾತಂತ್ರ್ಯ ಚಳವಳಿ ಆರಂಭಿಸಿದ್ದೇವೆ’ ಎಂದರು.

ADVERTISEMENT

ಕಾರ್ಖಾನೆಯ ಉತ್ಪಾದನೆಗಳಂತೆ ರೈತರ ಉತ್ಪನ್ನಗಳಿಗೂ ಬೆಲೆ ಭದ್ರತೆ ಕಾಯ್ದೆ ಜಾರಿಯಾಗಬೇಕು. ಕೃಷಿ ಬೆಲೆ ಆಯೋಗದ ಮಾರ್ಗದರ್ಶಿಯಲ್ಲಿಯೇ ಬೆಲೆ ಭದ್ರತೆ ಕಾಯ್ದೆ ಇರಬೇಕು. ಇಲ್ಲಿವರೆಗೂ ಬೆಲೆಯ ಮೋಸದಿಂದಾಗಿ ರೈತರ ಮೇಲೆ ಬಂದಿರುವ ಎಲ್ಲಾ ಸಾಲಗಳ ಹೊಣೆಗಾರಿಕೆ ಸರ್ಕಾರಗಳೇ ಹೊರಬೇಕು ಎಂದು ಆಗ್ರಹಿಸಿದರು.

ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಎಚ್.ಆರ್. ಬಸವರಾಜಪ್ಪ, ಪ್ರಮುಖರಾದ ಹಿಟ್ಟೂರು ರಾಜು, ಟಿ.ಎಂ.ಚಂದ್ರಪ್ಪ, ಬಿ.ಎಂ.ಚಿಕ್ಕಸ್ವಾಮಿ, ಕೆ.ರಾಘವೇಂದ್ರ, ಎಸ್.ಶಿವಮೂರ್ತಿ, ರುದ್ರೇಶ್, ಸಿ.ಚಂದ್ರಪ್ಪ, ಪಿ.ಡಿ.ಮಂಜಪ್ಪ, ರಾಮ ಚಂದ್ರಪ್ಪ, ಪಂಚಾಕ್ಷರಿ, ಜ್ಞಾನೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.