ಶಿವಮೊಗ್ಗ: ನ್ಯಾಯ ದೊರಕುವವರೆಗೂಎಂಪಿಎಂಕಾರ್ಖಾನೆಯ ಟೆಂಡರ್ ಪ್ರಕ್ರಿಯೆ ತಡೆಹಿಡಿಯಬೇಕು ಎಂದು ಆಗ್ರಹಿಸಿ ಎಂಪಿಎಂ ಬ್ಯಾಕ್ಲಾಗ್ ನೌಕರರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಹೈಕೋರ್ಟ್ ಆದೇಶದಂತೆ ಬ್ಯಾಕ್ಲಾಗ್ ವಿಶೇಷ ನೇಮಕಾತಿಯಲ್ಲಿ ಸಮಾಜ ಕಲ್ಯಾಣ ಇಲಾಖೆ ಮೂಲಕಎಂಪಿಎಂಗೆ ನೇಮಕ ಮಾಡಲಾಗಿತ್ತು. ಆದರೆ, ರಾಜ್ಯ ಸರ್ಕಾರದ ಆದೇಶದಂತೆ ಕನಿಷ್ಠ ವೇತನ ಜಾರಿಯಾಗಿಲ್ಲ. ಸೇವಾ ಭದ್ರತೆ ಇಲ್ಲ. ನಿಯೋಜನೆ ಮೇರೆಗೆ ವಿವಿಧ ಇಲಾಖೆಗಳಿಗೆ ಕಳುಹಿಸಲೂ ಇಲ್ಲ.10 ವರ್ಷಗಳಿಂದ ಮುಂಬಡ್ತಿ ನೀಡಿಲ್ಲ. ಭತ್ಯೆ ಸಿಗುತ್ತಿಲ್ಲ. 2012, 2017ರ ವೇತನ ಪರಿಷ್ಕರಣೆ, ಬೋನಸ್ ಸರಿಪಡಿಸುವಂತೆ ಮನವಿ ಸಲ್ಲಿಸಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಈಗ ಕಂಪನಿಯ ಪುನಃಶ್ಚೇತನಕ್ಕಾಗಿ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗಿದೆ. ಬ್ಯಾಕ್ಲಾಗ್ ನೌಕರರಿಗೆ ಆಗಿರುವ ಅನ್ಯಾಯ ಸರಿಪಡಿಸುವ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲ. ಕಾರ್ಮಿಕರನ್ನು ಉಳಿಸಿಕೊಂಡುಕಾರ್ಖಾನೆ ಆರಂಭ ಮಾಡುವ ಭರವಸೆ ಹುಸಿಯಾಗಿದೆ. ಇಲ್ಲಿಯವರೆಗೂ ಇದಕ್ಕೆ ಪೂರಕ ಆದೇಶಗಳು ಬಂದಿಲ್ಲ ಎಂದು ದೂರಿದರು.
ಸಂಘದ ಅಧ್ಯಕ್ಷ ವಿ.ಎನ್.ದೊಡ್ಡಯ್ಯ, ಪ್ರಧಾನ ಕಾರ್ಯದರ್ಶಿ ಅರ್ಜುನ್ ರಾಥೋಡ್, ಆರ್.ನಾಗರಾಜ್, ಮಂಜುಳಾ, ಮಲ್ಲಣ್ಣ ವಠಾರ್, ಎಸ್.ನರಸಿಂಹಪ್ಪ, ಎಸ್.ಓ.ವೆಂಕಟೇಶ್ ನಾಯಕ್, ಸೆಲ್ವಕುಮಾರ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.