ಶಿಕಾರಿಪುರದಲ್ಲಿ ಒಣಗುವುದಕ್ಕೆ ಹಾಕಿರುವ ಮೆಕ್ಕೆಜೋಳ ಮಳೆಯಿಂದಾಗಿ ಹಾನಿಗೊಳಗಾಗಿರುವುದು
ಶಿಕಾರಿಪುರ: ತಾಲ್ಲೂಕಿನಾದ್ಯಂತ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ರೈತರ ಮೆಕ್ಕೆಜೋಳ, ಭತ್ತದ ಬೆಳೆ ಕೈಗೆ ಬಂದ ತುತ್ತು ಬಾಯಿಗಿಲ್ಲ ಎನ್ನುವ ಸ್ಥಿತಿ ಒದಗಿದೆ.
ತಾಲ್ಲೂಕಿನಲ್ಲಿ 2,300 ಹೆಕ್ಟೇರ್ ಪ್ರದೇಶದಲ್ಲಿ ಬೇಸಿಗೆ ಬೆಳೆಯಾಗಿ ಮೆಕ್ಕೆಜೋಳ ಬೆಳೆಯಲಾಗಿದ್ದು ಶೇ 50ರಷ್ಟು ಕಟಾವು ಪೂರ್ಣಗೊಂಡಿದ್ದು, ಹಸಿಯಾಗಿರುವ ಮೆಕ್ಕೆಜೋಳ ರೈತರು ಒಣಗಿಸುವ ಕಾರ್ಯದಲ್ಲಿ ತೊಡಗಿದ ದೃಶ್ಯ ತಾಲ್ಲೂಕಿನಲ್ಲಿ ಸಾಮಾನ್ಯವಾಗಿತ್ತು.
ಎಪಿಎಂಸಿ, ಕೆಎಚ್ಬಿ ಕಾಲೊನಿ, ಖಾಸಗಿ ರೈಸ್ಮಿಲ್ ಆವರಣ, ಹೊಸ ಬಡಾವಣೆಗಳಲ್ಲಿ ರೈತರು ಮೆಕ್ಕೆಜೋಳ ಒಣಗಿಸಲು ಹಾಕಿದ್ದು, ಸೋಮವಾರ, ಮಂಗಳವಾರ ಮಳೆ ಬಿಡದೆ ಸುರಿಯುತ್ತಿರುವ ಕಾರಣಕ್ಕೆ ಮೆಕ್ಕೆಜೋಳದ ಮೇಲೆ ಹಾಕಿರುವ ಟಾರ್ಪಲ್ ಒಳಗೂ ನೀರು ನುಗ್ಗಿ ಮೆಕ್ಕೆಜೋಳ ಹಸಿಯಾಗಿವೆ. ಮಳೆ ಮುಂದುವರಿದಲ್ಲಿ ಸಾಕಷ್ಟು ರೈತರು ಸಂಕಷ್ಟಕ್ಕೆ ಒಳಗಾಗಲಿದ್ದಾರೆ.
ತಾಲ್ಲೂಕಿನಲ್ಲಿ 2,100 ಹೆಕ್ಟೇರ್ ಪ್ರದೇಶದಲ್ಲಿ ಬೇಸಿಗೆ ಬೆಳೆಯಾಗಿ ಭತ್ತ ಬೆಳೆಯಲಾಗಿದ್ದು, ಶೇ 20ರಷ್ಟು ಕಟಾವು ಪೂರ್ಣಗೊಂಡಿದೆ. ಕಟಾವಿಗೆ ಸಿದ್ಧವಾಗಿರುವ ಭತ್ತ ಒಣಗಿದ್ದು, ಮಳೆಯಿಂದಾಗಿ ಭತ್ತ ನೆಲಕ್ಕೆ ಬೀಳುತ್ತಿದೆ. ಕಟಾವು ಮಾಡಿದ ಭತ್ತದ ಹುಲ್ಲು ಒಣಗಿಸುವುದಕ್ಕೂ ಆಗದೆ ಗದ್ದೆಯಲ್ಲೇ ಬಿಟ್ಟಿರುವ ದೃಶ್ಯ ಜಕ್ಕನಹಳ್ಳಿ, ಸಂಡ ಭಾಗದಲ್ಲಿ ಕಂಡು ಬರುತ್ತಿದೆ.
ಈಗ ಆಗಿರುವ ಮಳೆಯಿಂದಾಗಿ ಕನಿಷ್ಠ ಒಂದು ವಾರ ಭತ್ತ ಕಟಾವು ಯಂತ್ರ ಗದ್ದೆಗೆ ಇಳಿಯುವುದಕ್ಕೆ ಆಗದ ಸ್ಥಿತಿ ಇದೆ. ನೀರಿಗೆ ಬಾಗಿರುವ ಭತ್ತದ ಬೆಳೆಯಲ್ಲಿ ಕಾಳುಗಳು ಗುಣಮಟ್ಟ ಕಳೆದುಕೊಳ್ಳಲಿದ್ದು, ಉತ್ತಮ ದರವೂ ಸಿಗುವುದಿಲ್ಲ ಎನ್ನುವ ಸ್ಥಿತಿ ಎದುರಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.