ADVERTISEMENT

ಶಿವಮೊಗ್ಗ: 28ಕ್ಕೆ ಲೋಹಿಯಾ ಜನ್ಮಶತಾಬ್ದಿ ಪ್ರತಿಷ್ಠಾನ ದಶಮಾನೋತ್ಸವ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2021, 12:55 IST
Last Updated 22 ಮಾರ್ಚ್ 2021, 12:55 IST

ಶಿವಮೊಗ್ಗ: ಲೋಹಿಯಾ ಜನ್ಮಶತಾಬ್ದಿ ಪ್ರತಿಷ್ಠಾನ ನಗರದ ಆರ್‌ಟಿಒ ರಸ್ತೆಯ ಪ್ರೆಸ್‌ಕ್ಲಬ್‌ ಸಭಾಂಗಣದಲ್ಲಿ ಮಾರ್ಚ್‌ 28ರಂದು ಪ್ರತಿಷ್ಠಾನದ ದಶಮಾನೋತ್ಸವ, ಪುಸ್ತಕಗಳ ಬಿಡುಗಡೆ, ಸಮಾಜವಾದಿ ಸಂಗಮ ಕಾರ್ಯಕ್ರಮ ಹಮ್ಮಿಕೊಂಡಿದೆ.

ಅಂದು ಬೆಳಿಗ್ಗೆ 10ಕ್ಕೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಕಾರ್ಯಕ್ರಮ ಉದ್ಘಾಟಿಸುವರು. ಚಿಂತಕ ಡಿ.ಎಸ್.ನಾಗಭೂಷಣ ಅವರು ಸಂಪಾದಿಸಿರುವ ‘ರಸಿಕರುದ್ರ ತಪಸ್ವಿ ಲೋಹಿಯಾ’ ಮತ್ತು ‘ಸಮಾಜವಾದದ ಸಾಲು ದೀಪಗಳು’ ಪುಸ್ತಕಗಳನ್ನು ಮಾಜಿ ಶಾಸಕ ಕೋಣಂದೂರು ಲಿಂಗಪ್ಪ ಬಿಡುಗಡೆ ಮಾಡುವರು. ದಶಮಾನೋತ್ಸವ ಹಿನ್ನೋಟ ಪುಸ್ತಿಕೆಯನ್ನು ಚನ್ನಪಟ್ಟಣ ಅರಳಾಳುಸಂದ್ರದ ರೈತ ನಾಯಕಿ ಅನಸೂಯಮ್ಮ ಬಿಡುಗಡೆ ಮಾಡುವರು. ಈ ಸಮಯದಲ್ಲಿ ಕುಪ್ಪಳಿ ಕುವೆಂಪು ಪ್ರತಿಷ್ಠಾನದ ಸಮ ಕಾರ್ಯದರ್ಶಿ ಕಡಿದಾಳು ಪ್ರಕಾಶ್, ಗಾಂಧಿಕಥನ ಕೃತಿಯ ಪ್ರಕಾಶಕ ಎಂ.ಸಿ.ನರೇಂದ್ರ, ನಿವೃತ್ತ ಪ್ರಾಧ್ಯಾಪಕ ಜಿ.ಬಿ.ಶಿವರಾಜು, ಪ್ರತಿಷ್ಠಾನದ ಮಾಜಿ ಟ್ರಸ್ಟಿ ಪ್ರತಿಭಾ ಪುಟ್ಟರಾಜು ಅವರಿಗೆ ಗೌರವ ಸಮರ್ಪಣೆ ಇರುತ್ತದೆ. ಬಳ್ಳಾರಿ ಲೋಹಿಯಾ ಪ್ರಕಾಶನದ ಸಿ.ಚನ್ನಬಸವಣ್ಣ ಅಧ್ಯಕ್ಷತೆ ವಹಿಸುವರು.

ಮಧ್ಯಾಹ್ನ 2ಕ್ಕೆ ಸಮಾಜವಾದಿ ಸಂಗಮ. ಮಾಜಿ ಶಾಸಕ ವೈ.ಎಸ್.ವಿ.ದತ್ತ ಆಶಯದ ಮಾತುಗಳಾಡುವರು. ಹಿರಿಯ ಪತ್ರಕರ್ತ ದಿನೇಶ್ ಅಮೀನ್‌ಮಟ್ಟು ಸಮಾಜವಾದಿ ರಾಜಕಾರಣದ ಒಂದು ಹಿನ್ನೋಟ, ನಿವೃತ್ತ ಪ್ರಾಧ್ಯಾಪಕ ರಾಜೇಂದ್ರ ಚೆನ್ನಿ ಮುನ್ನೋಟ ಕುರಿತು ಮಾತನಾಡುವರು. ವಿಧಾನ ಪರಿಷತ್ ಮಾಜಿ ಸಭಾಪತಿ ಬಿ.ಆರ್.ಪಾಟೀಲ್‌ ಅಧ್ಯಕ್ಷತೆ ವಹಿಸುವರು.

ADVERTISEMENT

ಸಂಜೆ 5ಕ್ಕೆ ನಡೆಯುವ ಸಮಾರೋಪದಲ್ಲಿ ಮಾಜಿ ಅಡ್ವೊಕೇಟ್‌ ಜನರಲ್‌ ರವಿವರ್ಮ ಕುಮಾರ್ ಸಮಾರೋಪ ನುಡಿಗಳಾನ್ನಾಡುವರು. ಲೋಹಿಯಾ ಜನ್ಮಶತಾಬ್ದಿ ಪ್ರತಿಷ್ಠಾನದ ಅಧ್ಯಕ್ಷ ಡಿ.ಎಸ್.ನಾಗಭೂಷಣ ಅಧ್ಯಕ್ಷತೆ ವಹಿಸುವರು ಎಂದು ಪ್ರತಿಷ್ಠಾನದ ಟ್ರಸ್ಟಿಗಳಾದ ಎನ್‌.ಎಂ.ಕುಲಕರ್ಣಿ, ರಾಜು ಎಂ, ಸವಿತಾ ನಾಗಭೂಷಣ, ಹೊನ್ನಾಳಿ ಚಂದ್ರಶೇಖರ್ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.