ADVERTISEMENT

ವರ್ಗೀಸ್‍ ಕುರಿಯನ್ ಸ್ಮರಣಾರ್ಥ ಅಂಚೆ ಚೀಟಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2021, 4:22 IST
Last Updated 3 ಆಗಸ್ಟ್ 2021, 4:22 IST
ಡಾ. ವರ್ಗೀಸ್‍ ಕುರಿಯನ್
ಡಾ. ವರ್ಗೀಸ್‍ ಕುರಿಯನ್   

ಶಿವಮೊಗ್ಗ: ಭಾರತದ ಕ್ಷೀರ ಕ್ರಾಂತಿಯ ಪಿತಾಮಹ ಡಾ.ವರ್ಗೀಸ್‍ ಕುರಿಯನ್‍ ಅವರ ಜನ್ಮ ಶತಮಾನೋತ್ಸವ ಅಂಗವಾಗಿ ಅಂಚೆ ಚೀಟಿ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಸಹಮತ ವ್ಯಕ್ತಪಡಿಸಿದೆ.

ಡಾ. ವರ್ಗೀಸ್‍ ಕುರಿಯನ್ ಭಾವಚಿತ್ರವುಳ್ಳ ಅಂಚೆ ಚೀಟಿ ಬಿಡುಗಡೆಗೆ ಸತತ 3 ವರ್ಷಗಳಿಂದ ಪ್ರಯತ್ನಿಸುತ್ತಿದ್ದ ಶಿವಮೊಗ್ಗ ಹಾಲು ಒಕ್ಕೂಟದ ನಿವೃತ್ತ ಡೇರಿ ಎಂಜಿನಿಯರ್ ಡಿ.ವಿ.ಮಲ್ಲಿಕಾರ್ಜುನ್‍ ಮತ್ತು ಗುಜರಾತ್‍ ಕೋ–ಆಪರೇಟಿವ್ ಮಾರ್ಕೆಟಿಂಗ್ ಫೆಡರೇಷನ್ ಸಂಸ್ಥೆಯ (ಅಮುಲ್) ನಿರ್ವಾಹಕ ನಿರ್ದೇಶಕ ಡಾ. ಆರ್.ಎಸ್.ಸೋದಿ ಅವರ ಪ್ರಯತ್ನಕ್ಕೆ ಈಗ ಫಲ ಸಿಕ್ಕಿದೆ.

2017ರಲ್ಲಿ ಅಮೆರಿಕದ ಮಿಚಿಗನ್ ವಿಶ್ವವಿದ್ಯಾಲಯದ ಆವರಣದಲ್ಲಿ ಡಿ.ವಿ.ಮಲ್ಲಿಕಾರ್ಜುನ್‍ ಅವರ ಆಸಕ್ತಿಯಿಂದ ಡಾ.ವರ್ಗೀಸ್‍ ಕುರಿಯನ್ ಪುತ್ಥಳಿ ಸ್ಥಾಪನೆ ಮಾಡಲಾಗಿತ್ತು. ಅದಾದ ಬಳಿಕ ಕೇಂದ್ರ ಸರ್ಕಾರ ಕುರಿಯನ್ ಅಂಚೆ ಚೀಟಿ ಹೊರತರಬೇಕೆಂದು ಮಲ್ಲಿಕಾರ್ಜುನ್ ಪತ್ರ ವ್ಯವಹಾರ ನಡೆಸಿದ್ದರು. ಅಂಚೆ ಚೀಟಿ ಬಿಡುಗಡೆಗಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಪ್ರಧಾನಮಂತ್ರಿ ಡಾ.ಮನ್‍ಮೋಹನ್ ಸಿಂಗ್, ಕೇಂದ್ರದ ಮಾಜಿ ಸಚಿವ ದಿವಂಗತ ಅನಂತ್‍ಕುಮಾರ್, ಡಿ.ವಿ.ಸದಾನಂದಗೌಡ ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಅವರಿಗೆ ಈ ಸಂಬಂಧ ಕೇಂದ್ರ ಸರ್ಕಾರದೊಂದಿಗೆ ಪತ್ರ ವ್ಯವಹಾರವನ್ನು ಮಾಡಿಸಿದ್ದರು.

ADVERTISEMENT

ಯಾವುದೇ ವ್ಯಕ್ತಿಯ ಜನ್ಮದಿನದ ಶತಮಾನೋತ್ಸವ ಸಂದರ್ಭದಲ್ಲಿ ಮಾತ್ರ ಅಂಚೆ ಚೀಟಿ ಬಿಡುಗಡೆ ಮಾಡಲು ಅವಕಾಶವಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿತ್ತು. ಕಳೆದೆರಡು ವರ್ಷಗಳಿಂದ ಕೇಂದ್ರ ಸರ್ಕಾರ ಹಾಗೂ ಗುಜರಾತ್‍ ಕೋ–ಆಪರೇಟಿವ್ ಮಾರ್ಕೆಟಿಂಗ್ ಫೆಡರೇಷನ್ ಸಂಸ್ಥೆಯ ನಿರ್ವಾಹಕ ನಿರ್ದೇಶಕ ಡಾ.ಆರ್.ಎಸ್.ಸೋದಿ ಅವರೊಂದಿಗೆ ಸಂಯುಕ್ತವಾಗಿ ಸಂವಹನ ನಡೆಸಿದ ಪರಿಣಾಮ ಕೇಂದ್ರ ಸರ್ಕಾರ ಅಂಚೆ ಚೀಟಿ ಬಿಡುಗಡೆಗೆ ಒಪ್ಪಿಗೆ ನೀಡಿದೆ. ನವೆಂಬರ್ 26ರಂದು ಅಂಚೆ ಚೀಟಿ ಬಿಡುಗಡೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.