ರಿಪ್ಪನ್ಪೇಟೆ: ‘ವರ್ತಮಾನದಲ್ಲಿ ಹವಾಮಾನ ವೈಪರೀತ್ಯ, ಮಾರುಕಟ್ಟೆ ಧಾರಣೆ ಹಾಗೂ ಇಳುವರಿ ಕುಸಿತ ರೈತರಿಗೆ ಶಾಪವಾಗಿದ್ದು, ಆರ್ಥಿಕ ಚೇತರಿಕೆಗೆ ರೈತರು ಬಹು ಬೆಳೆಗಳ ಆಯ್ಕೆ ಮಾಡಿಕೊಳ್ಳುವುದು ಉತ್ತಮ ಮಾರ್ಗ’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ಸಲಹೆ ನೀಡಿದರು.
ರಾಜ್ಯ ಸಹಕಾರಿ ಮಹಾಮಂಡಳ, ಜಿಲ್ಲಾ ಸಹಕಾರಿ ಯೂನಿಯನ್, ಡಿಸಿಸಿ ಬ್ಯಾಂಕ್ ಹಾಗೂ ಸಹಕಾರ ಇಲಾಖೆಗಳ ಸಹಯೋಗದಲ್ಲಿ ಸಮೀಪದ
ದೊಂಬೆಕೊಪ್ಪ ಗ್ರಾಮದ ಪ್ರಗತಿಪರ ಕೃಷಿಕ ಎನ್. ಕುಮಾರ್ ಅವರ ತೋಟದಲ್ಲಿ ಈಚೆಗೆ ಆಯೋಜಿಸಿದ್ದ ‘ಸಮಗ್ರ ಕೃಷಿಯಲ್ಲಿ ಸಹಕಾರಿಗಳ ಪಾತ್ರ’ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಮಲೆನಾಡಿಗೆ ಸೀಮಿತವಾಗಿದ್ದ ಅಡಿಕೆ ಇಂದು ತನ್ನ ಪರಿದಿ ವಿಸ್ತರಿಸಿ ಬಯಲು ಸೀಮೆಗೂ ಕಾಲಿಟ್ಟಿದೆ. ಮುಂದೊಂದು ದಿನ ಬೆಲೆ ಕುಸಿತದ ಆತಂಕ ಕಂಡರೂ ಅಚ್ಚರಿ ಇಲ್ಲ. ಆ ನಿಟ್ಟಿನಲ್ಲಿ ರೈತರು ಪರ್ಯಾಯ ಬೆಳೆಗಳತ್ತ ಗಮನಹರಿಸುವುದು ಸೂಕ್ತ ಎಂದು ಸಲಹೆ ನೀಡಿದರು.
ವಿದೇಶಿ ಬೆಳೆಯನ್ನು ಮಲೆನಾಡಿಗೆ ಪರಿಚಯಿಸುವ ಮೂಲಕ ವಿಶ್ವ ಹಣ್ಣಿನ ತೋಟ ನಿರ್ಮಾಣ ಮಾಡಿರುವ ಸಾಧಕ ಕೃಷಿಕ ರೈತ ಕುಮಾರ ಪರಿಸರ ಪೂರಕ ಕೃಷಿಗೆ ಆದ್ಯತೆ ನೀಡಿರುವುದು ರೈತರ ಅಧ್ಯಯನಕ್ಕೆ ಮಾದರಿ ಎಂದರು.
ಇಂದು ವಾಣಿಜ್ಯ ಬ್ಯಾಂಕುಗಳಲ್ಲಿ ಠೇವಣಿ ಇಟ್ಟವರಿಗೆ ಭದ್ರತೆ ಇಲ್ಲ. ಸಹಕಾರ ಸಂಘ ಮತ್ತು ಬ್ಯಾಂಕ್ಗಳಲ್ಲಿ ಠೇವಣಿ ಇಟ್ಟರೆ ನಿಮ್ಮ ಹಣಕ್ಕೆ ಭದ್ರತೆ ಸಿಗಲಿದೆ ಎಂದು ತಿಳಿಸಿದರು.
ಶಿಮುಲ್ ಅಧ್ಯಕ್ಷ ಎಚ್.ಎನ್. ವಿದ್ಯಾಧರ, ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ವಾಟಗೋಡು ಸುರೇಶ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ವಿ. ಜಯರಾಂ, ಡಿಸಿಸಿ ನಿರ್ದೇಶಕರಾದ ಎಂ.ಎಂ. ಪರಮೇಶ, ಜಿ.ಎನ್. ಸುಧಿ ರ್, ನರೇಗಾ ಸಹಾಯಕ ನಿರ್ದೇಶಕ ರಾಜೇಂದ್ರ ಕುಮಾರ್, ಹರತಾಳು ನಾಗರಾಜ್, ಶಶಿಧರ, ಓಂಕೇಶ್ ಹಾಗೂ ವಿನಯ್ ಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.