ADVERTISEMENT

ಶಿವಮೊಗ್ಗ: ಸಮಾಜದಲ್ಲಿ ಮಠಗಳ ಪಾತ್ರ ಮಹತ್ವದ್ದು- ಸಿದ್ಧಲಿಂಗ ಸ್ವಾಮೀಜಿ

ರುದ್ರಮುನಿ ಶಿವಯೋಗಿಗಳ 33ನೇ ಪುಣ್ಯಸ್ಮರಣೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2021, 7:11 IST
Last Updated 22 ಅಕ್ಟೋಬರ್ 2021, 7:11 IST
ಶಿಕಾರಿಪುರ ತಾಲ್ಲೂಕಿನ ಕಾಳೇನಹಳ್ಳಿ ಗ್ರಾಮದ ಶಿವಯೋಗಾಶ್ರಮದಲ್ಲಿ ಗುರುವಾರ ನಡೆದ ರುದ್ರಮುನಿ ಶಿವಯೋಗಿಗಳ 33ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಶಿವಯೋಗಾಶ್ರಮದ ಪೀಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿದರು.
ಶಿಕಾರಿಪುರ ತಾಲ್ಲೂಕಿನ ಕಾಳೇನಹಳ್ಳಿ ಗ್ರಾಮದ ಶಿವಯೋಗಾಶ್ರಮದಲ್ಲಿ ಗುರುವಾರ ನಡೆದ ರುದ್ರಮುನಿ ಶಿವಯೋಗಿಗಳ 33ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಶಿವಯೋಗಾಶ್ರಮದ ಪೀಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿದರು.   

ಕಾಳೇನಹಳ್ಳಿ (ಶಿಕಾರಿಪುರ):ಆಧ್ಯಾತ್ಮಿಕ ಶಕ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಕಾಳೇನಹಳ್ಳಿ ಶಿವಯೋಗಾಶ್ರಮದ ಪೀಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿಹೇಳಿದರು.

ತಾಲ್ಲೂಕಿನ ಕಾಳೇನಹಳ್ಳಿ ಗ್ರಾಮದ ಶಿವಯೋಗಾಶ್ರಮದಲ್ಲಿ ಗುರುವಾರ ನಡೆದ ಕಾಳೇನಹಳ್ಳಿ ಶಿವಯೋಗಾಶ್ರಮ ಪ್ರಥಮ ಪೀಠಾಧ್ಯಕ್ಷ ರುದ್ರಮುನಿ ಶಿವಯೋಗಿಗಳ 33ನೇ ಪುಣ್ಯಸ್ಮರಣೆ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.

‘ಜಗತ್ತಿನಲ್ಲಿಯೇ ನಮ್ಮ ದೇಶ ಆಧ್ಯಾತ್ಮಿಕ ಸಂಪತ್ತಿನಿಂದ ಗುರುತಿಸಿಕೊಂಡಿದೆ. ಆಧ್ಯಾತ್ಮಿಕ ಶಕ್ತಿ ಸಮಾಜದಲ್ಲಿ ಪರಿವರ್ತನೆ ತರುತ್ತದೆ. ಉತ್ತರ ಕರ್ನಾಟಕದಲ್ಲಿ ಪ್ರತಿ ಮನೆಯಲ್ಲಿ ಹಾನಗಲ್ ಕುಮಾರಸ್ವಾಮಿಗಳ ಭಾವಚಿತ್ರ ಇದೆ. ಕುಮಾರಸ್ವಾಮಿಗಳು ಆರಂಭಿಸಿದ ಶಿವಯೋಗಮಂದಿರದ ನೆಲದಲ್ಲಿ ಅದ್ಭುತ ಶಕ್ತಿ ಇದೆ. ಪೀಠಾಧ್ಯಕ್ಷರಾಗಿದ್ದ ರುದ್ರಮುನಿ ಸ್ವಾಮೀಜಿ, ರೇವಣಸಿದ್ದ ಸ್ವಾಮೀಜಿ ಅವರಿಂದ ದೀಕ್ಷೆ ಪಡೆದವರು ಉನ್ನತ ಮಟ್ಟಕ್ಕೆ ಹೋಗಿದ್ದಾರೆ’ ಎಂದರು.

ADVERTISEMENT

ಜಡೆ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷಮಹಾಂತ ಸ್ವಾಮೀಜಿ, ‘ಸ್ವಾಮೀಜಿಗಳ ವ್ಯಕ್ತಿತ್ವದಿಂದ ಮಠ ಬೆಳೆಯಬೇಕು. ಸಮಾಜ ಆರೋಗ್ಯವಾಗಿರಲು ಮಠದ ಪಾತ್ರ ಮಹತ್ವದ್ದಾಗಿದೆ ಎಂದರು.

ಸಂಸದ ಬಿ.ವೈ. ರಾಘವೇಂದ್ರ, ‘ಪೀಠಾಧ್ಯಕ್ಷರಾದ ರುದ್ರಮುನಿ ಸ್ವಾಮೀಜಿ ಅವರು ಪ್ರಕೃತಿ ಹಾಗೂ ಪ್ರಾಣಿಗಳನ್ನು ಪ್ರೀತಿಸುತ್ತಿದ್ದರು. ರುದ್ರಮುನಿ ಸ್ವಾಮೀಜಿ ಹಾಗೂ ರೇವಣಸಿದ್ಧ ಸ್ವಾಮೀಜಿ ಈ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಮಠದ ಸ್ವಾಮೀಜಿಗಳು ಸಮಾಜದ ಜನರ ಅಭಿವೃದ್ಧಿ ಶ್ರಮಿಸುತ್ತಿರುವುದು ಶ್ಲಾಘನೀಯ’ ಎಂ‌ದರು.

ಅಧ್ಯಕ್ಷತೆ ವಹಿಸಿದ್ದ ಹಾವೇರಿ ಹುಕ್ಕೇರಿ ಮಠದ ಪೀಠಾಧ್ಯಕ್ಷ ಸದಾಶಿವ ಸ್ವಾಮೀಜಿ, ‘ರುದ್ರಮುನಿ ಸ್ವಾಮೀಜಿ ಕಾಯಕಯೋಗಿ ಆಗಿದ್ದರು.ಈಗಿನಪೀಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಮೌನ ತಪಸ್ವಿಯಾಗಿದ್ದಾರೆ’ ಎಂದರು.

ಹರಪನಹಳ್ಳಿ ತಗ್ಗಿನ ಮಠದ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ, ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಪೀಠಾಧ್ಯಕ್ಷ ಚನ್ನಬಸವ ಸ್ವಾಮೀಜಿ, ಬೆಂಗಳೂರು ಸರ್ಪಭೂಷಣ ಮಠದ ಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವ ವಹಿಸಿದ್ದರು.

ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ, ಜೆಡಿಸ್ ಪ್ರಧಾನ ಕಾರ್ಯದರ್ಶಿ ಎಂ. ಶ್ರೀಕಾಂತ್, ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ವೀರಭದ್ರಪ್ಪ, ಗೋಣಿಬೀಡು ಶಿಲಸಂಪಾದನಾಮಠ ಕಾರ್ಯಾಧ್ಯಕ್ಷ ದಯಾಶಂಕರ್, ಸಂಪನ್ಮೂಲ ವ್ಯಕ್ತಿ ಸವಿತಾ, ಅಖಿಲ ಭಾರತ ವೀರಶೈವ ಮಹಾಸಭಾ ತಾಲ್ಲೂಕು ಘಟಕ ಅಧ್ಯಕ್ಷ ಎನ್.ವಿ. ಈರೇಶ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಬಿ. ಚನ್ನವೀರಪ್ಪ, ಶಿವಯೋಗಾಶ್ರಮ ಆಡಳಿತಾಧಿಕಾರಿ ಹಿರೇಮಠ್, ವ್ಯವಸ್ಥಾಪಕ ಅರುಣ್ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.