ADVERTISEMENT

ತೀರ್ಥಹಳ್ಳಿ | ವಿಷ ಸೇವಿಸಿದ್ದ ರೌಡಿಶೀಟರ್‌ ಸುಹೇಲ್‌ ‘ಕೋಬ್ರಾ’ ಸಾವು

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2022, 6:58 IST
Last Updated 4 ಡಿಸೆಂಬರ್ 2022, 6:58 IST
ಸುಹೇಲ್
ಸುಹೇಲ್   

ತೀರ್ಥಹಳ್ಳಿ: ಜಿಲ್ಲಾಡಳಿತದಿಂದ ಗಡಿಪಾರು ಶಿಕ್ಷೆಗೆ ಗುರಿಯಾದ ಬೆನ್ನಲ್ಲೇ ನವೆಂಬರ್‌ 25ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಪಟ್ಟಣದ ಬೆಟ್ಟಮಕ್ಕಿಯ ರೌಡಿಶೀಟರ್ ಸುಹೇ‌ಲ್‌ (ನಿಹಾಲ್) ಅಲಿಯಾಸ್‌ ‘ಕೋಬ್ರಾ’ (29) ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ತಡರಾತ್ರಿ ಸಾವನಪ್ಪಿದ್ದಾನೆ.

ಕೊಲೆ, ಸುಲಿಗೆ, ದರೋಡೆ, ಕಳ್ಳತನ, ದೊಂಬಿ, ಗಲಾಟೆ ಸೇರಿ ಜಿಲ್ಲೆಯಲ್ಲಿ ನಡೆದ ವಿವಿಧ ಅಪರಾಧ ಪ್ರಕರಣಗಳಲ್ಲಿ ಸುಹೇಲ್‌ ಭಾಗಿಯಾಗಿದ್ದ. ಶಿರಸಿ ತಾಲ್ಲೂಕಿನ ಬಸವಾಸಿ ಬಳಿ ಅಡಿಕೆ ವ್ಯಾಪಾರಿಯಿಂದ ₹ 50 ಲಕ್ಷ ದರೋಡೆ ಮಾಡಿದ್ದ ಆಸಿಫ್‌ ತಂಡದಲ್ಲೂ ಈತನ ಹೆಸರು ಕೇಳಿ ಬಂದಿತ್ತು.

ಎರಡು ವರ್ಷಗಳ ಅವಧಿಗೆ ಸುಹೇಲ್‌ನನ್ನು ಗಡಿಪಾರು ಮಾಡಿ ಜಿಲ್ಲಾಧಿಕಾರಿ ನವೆಂಬರ್‌ 21ರಂದು ಆದೇಶಿಸಿ, ಈತನ ಮನೆಗೆ ನೋಟಿಸ್‌ ಕಳುಹಿಸಿದ್ದರು. ಇದರಿಂದ ಆತಂಕಕ್ಕೆ ಒಳಗಾಗಿದ್ದ ಆತ ಮನನೊಂದು ವಿಷ ಸೇವಿಸಿದ್ದ ಎನ್ನಲಾಗಿದೆ.

ADVERTISEMENT

ಈತನ ಮನೆಯವರು ಪಟ್ಟಣದ ಜೆಸಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ರಾತ್ರಿ ಮೃತಪಟ್ಟಿದ್ದಾನೆ.

ಸುಹೇಲ್‌ಗೆ ತಂದೆ, ತಾಯಿ, ಪತ್ನಿ ಹಾಗೂ ಎರಡು ವರ್ಷದ ಮಗ ಇದ್ದಾನೆ. ಪತ್ನಿ ಗರ್ಭಿಣಿಯಾಗಿದ್ದಾಳೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.