ADVERTISEMENT

ಜಿಲ್ಲಾ ಕೇಂದ್ರಕ್ಕಾಗಿ ಸಾಗರದಲ್ಲಿ ಜನಾಂದೋಲನ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2025, 6:15 IST
Last Updated 19 ಸೆಪ್ಟೆಂಬರ್ 2025, 6:15 IST
ಸಾಗರದಲ್ಲಿ ಗುರುವಾರ ಸಾಗರ ಜಿಲ್ಲಾ ಹೋರಾಟ ಸಮಿತಿ ವತಿಯಿಂದ ಜಿಲ್ಲಾ ಕೇಂದ್ರವನ್ನಾಗಿ ಪರಿವರ್ತಿಸಬೇಕು ಎಂದು ಒತ್ತಾಯಿಸಿ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಲಾಯಿತು
ಸಾಗರದಲ್ಲಿ ಗುರುವಾರ ಸಾಗರ ಜಿಲ್ಲಾ ಹೋರಾಟ ಸಮಿತಿ ವತಿಯಿಂದ ಜಿಲ್ಲಾ ಕೇಂದ್ರವನ್ನಾಗಿ ಪರಿವರ್ತಿಸಬೇಕು ಎಂದು ಒತ್ತಾಯಿಸಿ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಲಾಯಿತು   

ಸಾಗರ: ಸಾಗರವನ್ನು ನೂತನ ‘ಮಲೆನಾಡು ಜಿಲ್ಲೆ’ ಎಂದು ಘೋಷಿಸುವಂತೆ ಒತ್ತಾಯಿಸಿ ನಗರದಲ್ಲಿ ಗುರುವಾರ ವಿವಿಧ ರಾಜಕೀಯ ಪಕ್ಷಗಳ, ಸಂಘ– ಸಂಸ್ಥೆಗಳ ಪ್ರಮುಖರು ಸಾಗರ ಜಿಲ್ಲಾ ಹೋರಾಟ ಸಮಿತಿಯ ನೇತೃತ್ವದಲ್ಲಿ ಮೆರವಣಿಗೆ, ಬಹಿರಂಗ ಸಭೆ ನಡೆಸಿದರು.

ಗಾಂಧಿ ಮೈದಾನದಲ್ಲಿ ಆರಂಭಗೊಂಡ ಮೆರವಣಿಗೆಗೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಸಿಗಂದೂರು ಕ್ಷೇತ್ರದ ಧರ್ಮದರ್ಶಿ ರಾಮಪ್ಪ ಚಾಲನೆ ನೀಡಿದರು. ನಂತರ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು.

ಬಹಿರಂಗ ಸಭೆಯಲ್ಲಿ ರಂಗಕರ್ಮಿ ಕೆ.ವಿ.ಅಕ್ಷರ ಮಾತನಾಡಿ, ‘ಜನರು ಸರ್ಕಾರವನ್ನು ಹುಡುಕಿಕೊಂಡು ಹೋಗುವುದು ಒಳ್ಳೆಯ ಆಡಳಿತದ ಲಕ್ಷಣವಲ್ಲ. ಸರ್ಕಾರವೇ ಜನರ ಬಳಿಗೆ ಬರುವುದು ಪರಿಣಾಮಕಾರಿ ಆಡಳಿತಕ್ಕೆ ಒಳ್ಳೆಯ ಮಾರ್ಗ. ಸಾಗರದಂತಹ ಚಿಕ್ಕ ಜಿಲ್ಲೆ ಮಾಡುವ ಅಗತ್ಯತೆಯನ್ನು ಸರ್ಕಾರ ಮನಗಾಣಬೇಕು’ ಎಂದರು.

ADVERTISEMENT

‘ಜಿಲ್ಲಾ ಕೇಂದ್ರಕ್ಕೆ ಒತ್ತಾಯಿಸಿ ಜಾತಿ, ಧರ್ಮಗಳ ಚೌಕಟ್ಟನ್ನು ಮೀರಿ ಇಲ್ಲಿನ ಜನರು ಒಕ್ಕೊರಲಿನಿಂದ ಬೇಡಿಕೆ ಮಂಡಿಸುತ್ತಿದ್ದಾರೆ. ಸಾಗರ ಸೌಹಾರ್ದದ ನೆಲೆವೀಡು ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಲಿಂಗನಮಕ್ಕಿ ಜಲಾಶಯದ ಮೂಲಕ ನಾಡಿಗೆ ‘ಬೆಳಕು’ ಕೊಟ್ಟಿರುವ ಸಾಗರವನ್ನು ಜಿಲ್ಲಾ ಕೇಂದ್ರ ಮಾಡುವ ಮೂಲಕ ಮಲೆನಾಡನ್ನು ಬೆಳಗುವ ಕೆಲಸವನ್ನು ಸರ್ಕಾರ ಮಾಡಬೇಕು’ ಎಂದು ಮುಸ್ಲಿಂ ಧರ್ಮಗುರು ಅಬ್ದುಲ್ ಖಾದರ್ ಸಖಾಫಿ ಒತ್ತಾಯಿಸಿದರು.

‘ಈ ಭಾಗದ ಆರ್ಥಿಕ, ಆರೋಗ್ಯ, ಶಿಕ್ಷಣ, ಪ್ರವಾಸೋದ್ಯಮ ಮೊದಲಾದ ಕ್ಷೇತ್ರಗಳ ಸಮಗ್ರ ಬೆಳವಣಿಗೆ ದೃಷ್ಟಿಯಿಂದ ಸಾಗರ ಜಿಲ್ಲಾ ಕೇಂದ್ರವಾಗಬೇಕು ಎಂಬ ಬೇಡಿಕೆ ಸಮಂಜಸವಾಗಿದೆ. ಜನರ ಭಾವನೆಗಳನ್ನು ಸರ್ಕಾರ ಗೌರವಿಸಬೇಕು’ ಎಂದು ಫಾದರ್ ವಿನುತ್ ಬಾಲುಕುಮಾರ್ ಅಭಿಪ್ರಾಯಪಟ್ಟರು.

‘ಸಾಗರ ಜಿಲ್ಲಾ ಕೇಂದ್ರವಾಗುವ ಎಲ್ಲಾ ಅರ್ಹತೆಯನ್ನು ಹೊಂದಿದೆ. ಶಾಸಕ ಗೋಪಾಲಕೃಷ್ಣ ಬೇಳೂರು ಈ ಬೇಡಿಕೆಗೆ ಬೆಂಬಲ ಸೂಚಿಸಿರುವುದು ಸ್ವಾಗತಾರ್ಹ. ಆದರೆ. ಅವರು ಕೇವಲ ಮುಖ್ಯಮಂತ್ರಿಗಳಿಗೆ ಪತ್ರ ಬರೆದರೆ ಸಾಲದು. ಸಾಗರವನ್ನು ಜಿಲ್ಲಾ ಕೇಂದ್ರ ಮಾಡುವಂತೆ ಖುದ್ದಾಗಿ ಸಿ.ಎಂ ಭೇಟಿಯಾಗಿ ಚರ್ಚಿಸಬೇಕು’ ಎಂದು ಜಿಲ್ಲಾ ಹೋರಾಟ ಸಮಿತಿಯ ಪ್ರಮುಖರಾದ ತೀ.ನ.ಶ್ರೀನಿವಾಸ್ ಒತ್ತಾಯಿಸಿದರು.

ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್, ಬಿಜೆಪಿಯ ದೇವೇಂದ್ರಪ್ಪ ಯಲಕುಂದ್ಲಿ, ಟಿ.ಡಿ.ಮೇಘರಾಜ್, ಕಾಂಗ್ರೆಸ್ ನ ಕಲಸೆ ಚಂದ್ರಪ್ಪ, ವಕೀಲರ ಸಂಘದ ಅಧ್ಯಕ್ಷ ಎಂ.ಬಿ.ಗಿರೀಶ್ ಗೌಡ, ಶಂಕರ ಮಠದ ಧರ್ಮದರ್ಶಿ ಅಶ್ವಿನಿಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಅನಿತಾ ಕುಮಾರಿ, ತುಕಾರಾಂ ಶಿರವಾಳ , ಡಾ.ರಾಜನಂದಿನಿ ಕಾಗೋಡು, ಮಂಜಪ್ಪ ಹಿರೇನೆಲ್ಲೂರು, ಪರಮೇಶ್ವರ ದೂಗೂರು, ಕನ್ನಪ್ಪ ಬೆಳಲಮಕ್ಕಿ ಮಾತನಾಡಿದರು.

ಪ್ರಮುಖರಾದ ಎಂ.ಖಾಸಿಂ, ಮಧುಮಾಲತಿ, ಮಲ್ಲಿಕಾರ್ಜುನ ಹಕ್ರೆ, ರಾಜಶೇಖರ ಗಾಳಿಪುರ, ಕೆ.ಆರ್.ಗಣೇಶ್ ಪ್ರಸಾದ್, ಸವಿತಾ ವಾಸು, ರವಿಕುಗ್ವೆ, ಆರ್.ಶ್ರೀನಿವಾಸ್, ಸುಂದರ್ ಸಿಂಗ್, ಹೊಳಿಯಪ್ಪ ಹಾಜರಿದ್ದರು. ಎಚ್.ಬಿ.ರಾಘವೇಂದ್ರ ನಿರೂಪಿಸಿದರು.

ಬಹಿರಂಗ ಸಭೆಯಲ್ಲಿ ರಂಗಕರ್ಮಿ ಕೆ.ವಿ.ಅಕ್ಷರ ಮಾತನಾಡಿದರು
ಪ್ರತಿಭಟನೆಯಲ್ಲಿ ಜಾಗಟೆ ಸದ್ದು
ಸಾಗರವನ್ನು ಜಿಲ್ಲಾ ಕೇಂದ್ರವೆಂದು ಘೋಷಿಸಲು ಒತ್ತಾಯಿಸಿ ನಡೆದ ಮೆರವಣಿಗೆಯಲ್ಲಿ ಜಾಗಟೆ ಸದ್ದು ಕೇಳಿ ಬಂದಿದ್ದು ವಿಶೇಷವಾಗಿತ್ತು. ಸರ್ಕಾರಕ್ಕೆ ಜಾಗಟೆಯ ಧ್ವನಿ ಮುಟ್ಟಲಿ ಎಂಬ ಉದ್ದೇಶದಿಂದ ಈ ರೀತಿ ಮಾಡಲಾಗಿದೆ ಎಂದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸಾಮಾಜಿಕ ಕಾರ್ಯಕರ್ತ ಡಿ.ದಿನೇಶ್ ತಿಳಿಸಿದರು.
ಸಾಗರದಲ್ಲಿ ನಡೆದ ಬಹಿರಗ ಸಭೆಯಲ್ಲಿ ಸೇರಿದ್ದ ಜನಸ್ತೋಮ
‘ಜಿಲ್ಲಾ ಕೇಂದ್ರದ ಅನಿವಾರ್ಯತೆ ಇದೆ’
‘ಮಲೆನಾಡಿನ ಜ್ವಲಂತ ಸಮಸ್ಯೆಗಳ ನಿವಾರಣೆಗೆ ಸಾಗರ ಜಿಲ್ಲಾ ಕೇಂದ್ರವಾಗುವ ಅನಿವಾರ್ಯತೆ ಇದೆ. ಇಲ್ಲಿ 2.80 ಲಕ್ಷ ಅರಣ್ಯಭೂಮಿ ಸಾಗುವಳಿದಾರರ ಪೈಕಿ 2.40 ಲಕ್ಷ ಜನರ ಸಕ್ರಮೀಕರಣದ ಅರ್ಜಿ ತಿರಸ್ಕೃತಗೊಂಡಿದೆ. ಮಲೆನಾಡು ಅಭಿವೃದ್ಧಿ ಮಂಡಳಿ ಇದ್ದರೂ ಅದಕ್ಕೆ ಅಗತ್ಯ ಅನುದಾನವಿಲ್ಲದಾಗಿದೆ’ ಎಂದು ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಆರ್.ಜಯಂತ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.