
ಸಾಗರ: ನೈತಿಕತೆ ನಮ್ಮ ಶಿಕ್ಷಣ ಕ್ರಮದ ಪ್ರಮುಖ ಭಾಗವಾಗುವ ಅಗತ್ಯತೆ ಹಿಂದೆಂದಿಗಿಂತಲೂ ಈಗ ಹೆಚ್ಚಿದೆ ಎಂದು ಮಳಲಿ ಮಠದ ಗುರು ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಗಿಣಿವಾರ ಗ್ರಾಮದ ಕೊಡಚಾದ್ರಿ ಶಿಕ್ಷಣ ಸಂಸ್ಥೆಯಲ್ಲಿ ಈಚೆಗೆ ನಡೆದ ಚಿಣ್ಣರ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ ಪಡೆದವರು ನೈತಿಕತೆಯಿಂದ ದೂರಾಗುವುದು ಅಪಾಯಕಾರಿ ಬೆಳವಣಿಗೆ. ಪೋಷಕರು ಯಾವ ರೀತಿಯ ಆದರ್ಶವನ್ನು ಹೊಂದಿರುತ್ತಾರೆಯೊ ಅದೇ ಮಾದರಿಯನ್ನು ಮಕ್ಕಳು ಕೂಡ ಅನುಸರಿಸುತ್ತಾರೆ. ಹೀಗಾಗಿ ಪೋಷಕರು ತಮ್ಮ ಪ್ರತಿಯೊಂದು ನಡೆ ನುಡಿಯಲ್ಲೂ ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರದಂತೆ ಎಚ್ಚರ ವಹಿಸಬೇಕು ಎಂದು ಕಿವಿಮಾತು ಹೇಳಿದರು.
ಸಮಾಜದಲ್ಲಿ ಕಂದಕ ಸೃಷ್ಟಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಮನಸ್ಸುಗಳನ್ನು ಕಟ್ಟುವ ಮೂಲಕ ಕಂದಕಗಳನ್ನು ಮುಚ್ಚುವ ಕೆಲಸವನ್ನು ಶಿಕ್ಷಣ ನೀಡಿದರೆ ಅದರ ಸಾರ್ಥಕತೆ ಬೆಳೆಯುತ್ತದೆ ಎಂದು ನಗರಸಭೆ ಮಾಜಿ ಅಧ್ಯಕ್ಷ ಟಿ.ಡಿ.ಮೇಘರಾಜ್ ಹೇಳಿದರು.
ಕೊಡಚಾದ್ರಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ನವೀನ್ ಜಿ.ವಿ. ಆಪ್ಸ್ ಕೋಸ್ ಅಧ್ಯಕ್ಷ ಬಿ.ಎ.ಇಂದೂಧರ ಬೇಸೂರು, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ವಿ.ಟಿ.ಸ್ವಾಮಿ, ಕೆ.ಎಚ್.ರಾಜಪ್ಪ, ಪಂಚಾಕ್ಷರಯ್ಯ ಇದ್ದರು.
ನಂದಕುಮಾರಿ ಸ್ವಾಗತಿಸಿದರು. ಪ್ರಸನ್ನ ವಂದಿಸಿದರು. ಅಶ್ವಿನಿ ನಿರೂಪಿಸಿದರು.