ಕಾರ್ಗಲ್: ‘ಸ್ಕಾಟ್ಲ್ಯಾಂಡ್ ವಿಜ್ಞಾನಿಗಳು, ಭಾರತೀಯ ವೈದ್ಯಕೀಯ ಸಂಶೋಧನಾ ತಂಡಗಳು ಆರೋಗ್ಯ ಇಲಾಖೆಯ ಕಾರ್ಯಕರ್ತರ ಜತೆ ದಟ್ಟಡವಿಯಲ್ಲಿ ಉಣಗುಗಳನ್ನು ಸಂಗ್ರಹಿಸುತ್ತಿದ್ದು, ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತದೆ’ ಎಂದು ಕ್ಯಾಸನೂರು ಕಾಯಿಲೆಯ ನೋಡೆಲ್ ಅಧಿಕಾರಿ ಡಾ. ಕಿರಣ್ ತೀರ್ಥಹಳ್ಳಿ ತಿಳಿಸಿದರು.
ಕೀಟಾಣು ಪರೀಕ್ಞಾ ತಜ್ಞರ ‘ಆತ್ರೇಯ’ ಮತ್ತು ‘ನಿವೇದಿ’ ತಂಡಗಳು ಸಂಗ್ರಹ ಕಾರ್ಯದಲ್ಲಿ ತೊಡಗಿದ್ದು, ಇವುಗಳೊಂದಿಗೆ ಬೆಳಗಾಂನ ಎನ್ಐಟಿಎಂ, ಚೆನ್ನೈನ ಎನ್ಐಎಪ್ಇ ತಂಡಗಳು ಕೈ ಜೋಡಿಸಿವೆ. ಮಂಗನ ಕಾಯಿಲೆಯ ನಿಯಂತ್ರಣ ಮತ್ತು ಔಷಧೋಪಚಾರಗಳ ಬಗ್ಗೆ ಅಧ್ಯಯನ ನಡೆಸುತ್ತಿವೆ. ಕಾಯಿಲೆಗೆ ಮೂಲವಾದ ಇಲಿಗಳ ಮೈಮೇಲಿನ ಉಣುಗುಗಳ ಪರೀಕ್ಷೆಯನ್ನು ನಡೆಸುತ್ತಿದೆ. ಮಂಗನ ಕಾಯಿಲೆ ಸಾಧ್ಯತೆ ಇರುವ ಪ್ರದೇಶಗಳ ಕನಿಷ್ಠ 20 ಉಣಗುಗಳನ್ನು ಬೇರೆ ಬೇರೆ ಪ್ರದೇಶಗಳಲ್ಲಿ ಸಂಗ್ರಹಿಸುತ್ತಿದೆ.
‘ಬಿಳಿ ಹತ್ತಿ ಬಟ್ಟೆಯನ್ನು ಧ್ವಜದ ಮಾದರಿಯಲ್ಲಿ ಬಳಸಿಕೊಂಡು ನೆಲದಲ್ಲಿ ಬಿದ್ದು ಒಣಗಿರುವ ಸೊಪ್ಪು ಕಡ್ಡಿಗಳು ಮತ್ತು ಗಿಡಗಂಟಿಗಳ ಮೇಲೆ ಹರಿದಾಡಿದಾಗ ಅದಕ್ಕೆ ಅಂಟಿಕೊಳ್ಳುವ ಉಣಗುಗಳನ್ನು ಸಂಗ್ರಹಿಸಲಾಗುತ್ತಿದೆ. ಈ ಉಣಗುಗಳನ್ನು ಪಾರದರ್ಶಕವಾದ ಪ್ಲಾಸ್ಟಿಕ್ ಡಬ್ಬಿಗಳಲ್ಲಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಲಾಗುತ್ತಿದೆ’ ಎಂದರು.
19 ಮಂಗಗಳ ದಹನ:ಶರಾವತಿ ವನ್ಯಜೀವಿ ಅಭಯಾರಣ್ಯದ ಕಾರ್ಗಲ್, ಮೂಲೆಮನೆ ತಿರುವಿನಲ್ಲಿ ಭಾನುವಾರ ಮಂಗಗಳು ಸತ್ತಿದ್ದು, ಅರಣ್ಯ ಇಲಾಖೆ ಕೂಂಬಿಂಗ್ ಕಾರ್ಯಾಚರಣೆ ತಂಡ ಸತ್ತ ಮಂಗಗಳನ್ನು ಸುಟ್ಟು ಹಾಕುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ ಎಂದು ವಲಯಾರಣ್ಯಾಧಿಕಾರಿ ಡಿ.ಆರ್. ಪ್ರಮೋದ್ ತಿಳಿಸಿದರು.
ಪಟ್ಟಣ ಪಂಚಾಯಿತಿ, ಆರೋಗ್ಯ ಇಲಾಖೆ, ಪಶುವೈದ್ಯಕೀಯ ಇಲಾಖೆಯ ಸಹಭಾಗಿತ್ವದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮಂಗನ ಕಾಯಿಲೆ ತಡೆಯುವ ನಿಟ್ಟಿನಲ್ಲಿ ನಡೆಸುತ್ತಿರುವ ಕೂಂಬಿಂಗ್ ಕಾರ್ಯದಲ್ಲಿ ಈವರೆಗೆ 19 ಸತ್ತ ಮಂಗಗಳನ್ನು ಪತ್ತೆ ಹಚ್ಚಿ ಸುಟ್ಟುಹಾಕಲಾಗಿದೆ ಎಂದು ಅವರು ಭಾನುವಾರ ಮಾತನಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.