ರಿಪ್ಪನ್ಪೇಟೆ: ಪಟ್ಟಣ ಸೇರಿ ಗ್ರಾಮೀಣ ಭಾಗದಲ್ಲಿ ಬುಧವಾರ ರೈತರು ಭೂ ತಾಯಿಯ ಸೀಮಂತ ಹಬ್ಬ ಭೂಮಿ ಹುಣ್ಣಿಮೆಯನ್ನು ಸಂಭ್ರಮದಿಂದ ಆಚರಿಸಿದರು.
ಮಲೆನಾಡಿನಲ್ಲಿ ಜನರು ಪೂರ್ವಜರು ಆಚರಿಸಿಕೊಂಡು ಬಂದ ಪದ್ಧತಿಯಂತೆ ಭೂ ರಮೆಯ ಒಡಲು ತುಂಬಿದ ಈ ಹೊತ್ತಿನಲ್ಲಿ
ಬಯಕೆಯನ್ನು ಈಡೇರಿಸಲು ಹೊಲದಲ್ಲಿ ಬೆಳೆದು ನಿಂತ ಫಸಲಿಗೆ ವಿಶೇಷ ಪೂಜೆ ಸಲ್ಲಿಸಿ, ಭೂಮಿ ಹುಣ್ಣಿಮೆ ಆಚರಿಸುವುದು ವಾಡಿಕೆ. ಭೂ ತಾಯಿಗೆ ಪೂಜೆ ಸಲ್ಲಿಸಿದ ರೈತರು ಮಣ್ಣಿನ ಮಕ್ಕಳ ಬದುಕು ಹಸನಾಗಲಿ ಎಂದು ಪ್ರಾರ್ಥಿಸಿದರು.
ರೈತರು ಹೊಲಗದ್ದೆಗಳ ಬದುವಿನ ಅಂಚಿನಲ್ಲಿ ಬೆಳೆದ ವಿವಿಧ ಜಾತಿಯ ಕಾಡು ಸೊಪ್ಪುಗಳನ್ನು ಸಂಗ್ರಹಿಸಿ ಹಿಂದಿನ ದಿನವೇ ಕುಟುಂಬದವರು ಒಟ್ಟಿಗೆ ಕುಳಿತು ಹಲವು ಬಗೆಯ ತರಕಾರಿಗಳನ್ನು ಮಿಶ್ರಣ ಮಾಡಿ ಬೇಯಿಸಿ ತಯಾರಿಸಿದ ಖಾದ್ಯ ( ಚರಗ ) ತಯಾರಿಸುತ್ತಾರೆ.ಅಲಂಕೃತ ಭೂಮಣ್ಣಿ ಬುಟ್ಟಿಯಲ್ಲಿ ಇಟ್ಟು ಹೊತ್ತು ಮೂಡುವ ಮುನ್ನ ಭೂ ತಾಯಿಗೆ ಪೂಜೆ ಸಲ್ಲಿಸಿ ಅದನ್ನು ಗದ್ದೆಯ ಗಡಿ ಅಂಚಿನಲ್ಲಿ ಬೀರುವ ಮೂಲಕ ಉತ್ತಮ ಬೆಳೆ ಸಿಗಲಿ ಎಂದು ಪ್ರಾರ್ಥಿಸಿದರು.
ನಂತರ ಕುಟುಂಬ ಪರಿವಾರದವರು ಒಟ್ಟಿಗೆ ಕುಳಿತು ಭೋಜನ ಸವಿದು ಸಂಭ್ರಮಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.