ಶಿರಾಳಕೊಪ್ಪ: ಪಟ್ಟಣ ಸಮೀಪದ ನೇರಲಗಿ ದೊಡ್ಡಕೆರೆಯಲ್ಲಿ ಅಪಾರ ಪ್ರಮಾಣದ ಮೀನುಗಳು ಸತ್ತಿದ್ದು, ಕೆರೆಯಂಚಿನಲ್ಲಿ ತೇಲುತ್ತಿರುವುದು ಕಂಡು ಬಂದಿದೆ.
ಕಳೆದ ನಾಲ್ಕು ದಿನಗಳಿಂದ ಮೀನು ಸಾಯುತ್ತಿದ್ದು, ಈವರೆಗೆ ಅಂದಾಜು 4 ಕ್ವಿಂಟಾಲ್ನಷ್ಟು ಸತ್ತಿರುವುದಾಗಿ ಮೀನು ಸಾಕಣೆದಾರ ಹನೀಫ್ಸಾಬ್ ಮಾಹಿತಿ ನೀಡಿದರು.
ಕೆರೆ ಮೇಲ್ಭಾಗದಲ್ಲಿ ಒಣಶುಂಠಿ ಒಣಗಿಸುವ ಮೂರು ಕಣಗಳಿವೆ. ಅವುಗಳಿಗೆ ಬಳಸುವ ರಾಸಾಯನಿಕವು ಮಳೆ ನೀರಿನೊಂದಿಗೆ ಕೆರೆ ಸೇರಿರುವ ಸಾಧ್ಯತೆಯಿದೆ. ಕಿಡಿಗೇಡಿಗಳು ವಿಷ ಹಾಕಿರಬಹುದು ಅಥವಾ ಬಿಸಿಲ ಬೇಗೆಯಿಂದಲೂ ಹೀಗಾಗಿರಬಹುದು ಎನ್ನಲಾಗಿದೆ.
‘ಮೀನು ಸಾವಿಗೆ ನಿಖರ ಕಾರಣ ಗೊತ್ತಿಲ್ಲ. ಆದರೆ ಎರಡು ವರ್ಷದಿಂದ ಮೀನು ಹಿಡಿಯದೆ ಹಾಗೆ ಬಿಟ್ಟಿದ್ದೆ. ಮೀನುಗಳು ದೊಡ್ಡ ಗಾತ್ರವಾಗಿದ್ದು ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದಾಗಲೇ ಹೀಗಾಗಿದೆ. ಅಪಾರ ನಷ್ಟ ಆಗಿದ್ದು, ಸರ್ಕಾರ ಪರಿಹಾರ ನೀಡಬೇಕು’ ಎಂದು ಹನೀಫ್ಸಾಬ್ ಆಗ್ರಹಿಸಿದ್ದಾರೆ.
ಕೆರೆ ನೀರಿನ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸುವಂತೆ ಗ್ರಾಮ ಪಂಚಾಯಿತಿ ಆಡಳಿತಕ್ಕೆ ಸೂಚಿಸಿದ್ದೇನೆ. ವರದಿ ಬಂದ ನಂತರ ನಿಖರ ಕಾರಣ ಗೊತ್ತಾಗಬಹುದುವಿನಯ್ ಅನಂತರಾಜು ಸಹಾಯಕ ಮೀನುಗಾರಿಕೆ ನಿರ್ದೇಶಕ ಶಿಕಾರಿಪುರ
ರಾಗಿಕೊಪ್ಪ ತುಂಬುಹೊಂಡ ಕೆರೆಯಲ್ಲೂ ಮೀನುಗಳ ಸಾವು
ಶಿರಾಳಕೊಪ್ಪ: ಸಮೀಪದ ರಾಗಿಕೊಪ್ಪ ಗ್ರಾಮದ ತುಂಬುಹೊಂಡ ಕೆರೆಯಲ್ಲೂ ಈಚೆಗೆ ಮೀನುಗಳು ಸತ್ತು ಕೆರೆಯಂಚಿನಲ್ಲಿ ತೇಲುತ್ತಿರುವುದು ಕಂಡು ಬಂದಿದೆ. ಕಳೆದ ನಾಲ್ಕು ದಿನಗಳಿಂದ ಮೀನುಗಳು ಸಾಯುತ್ತಿದ್ದು ಈವರೆಗೆ ಅಂದಾಜು 1 ಕ್ವಿಂಟಲ್ನಷ್ಟು ಮೃತಪಟ್ಟಿವೆ ಎಂದು ಮೀನು ಸಾಕಾಣಿಕೆಗೆ ಕೆರೆಯನ್ನು ಗುತ್ತಿಗೆ ಪಡೆದಿರುವ ಎಂ.ಕುಮಾರ್ ಹೇಳಿದರು. ಕೆರೆಯಲ್ಲಿ ಮೀನು ಸತ್ತಿರುವ ಕಾರಣಕ್ಕೆ ಕೆರೆ ಸುತ್ತಲೂ ಕೆಟ್ಟ ವಾಸನೆ ಬರುತ್ತಿದ್ದು ಜನರು ಮೂಗುಮುಚ್ಚಿ ಓಡಾಡುವಂತಾಗಿದೆ. ಜಾನುವಾರುಗಳು ನೀರು ಕುಡಿಯಲು ಹಿಂದೇಟು ಹಾಕುತ್ತಿವೆ. ಯಾವ ಕಾರಣಕ್ಕೆ ಮೀನು ಸತ್ತಿವೆ ಎನ್ನುವುದು ಪತ್ತೆಹಚ್ಚಬೇಕಿದೆ ಎಂದು ಅವರು ತಿಳಿಸಿದರು. ‘ದೇವಸ್ಥಾನ ಸಮಿತಿ ವತಿಯಿಂದ ಹರಾಜು ಹಿಡಿದು ಮೀನು ಬೆಳೆಸುವುದಕ್ಕಾಗಿ ಸಾಕಷ್ಟು ಹಣ ವ್ಯಯಿಸಿದ್ದೇನೆ ಇದೀಗ ಮೀನು ಹಿಡಿದು ಮಾರುವ ಹಂತದಲ್ಲಿ ಅವು ಸಾಯುತ್ತಿವೆ. ಸ್ಥಳೀಯರು ಸುತ್ತಲಿನ ಗ್ರಾಮದವರು ಆತಂಕದಿಂದ ಈ ಕೆರೆಯ ಮೀನುಗಳನ್ನು ಖರೀದಿಸಲು ಮುಂದೆ ಬರುತ್ತಿಲ್ಲ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.