ಶಿವಮೊಗ್ಗ: ಸಾಗರ ತಾಲ್ಲೂಕಿನ ಹೊಸಗುಂದದಲ್ಲಿರುವ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ನವೆಂಬರ್ 16 ರಿಂದ 18ರವರೆಗೆ ‘ಹೊಸಗುಂದ ಉತ್ಸವ’ ನಡೆಯಲಿದೆ ಎಂದು ಉಮಾಮಹೇಶ್ವರ ಸೇವಾ ಟ್ರಸ್ಟ್ ಸಂಸ್ಥಾಪಕ ಸಿ.ಎಂ.ಎನ್. ಶಾಸ್ತ್ರಿ ತಿಳಿಸಿದರು.
16 ರಂದು ಬೆಳಿಗ್ಗೆ 10.30ಕ್ಕೆ ವಿಚಾರ ಸಂಕಿರಣ, ಈ ವರೆಗೆ ಸಂರಕ್ಷಿಸಲ್ಪಟ್ಟ ಪ್ರಾಚೀನ ದೇವಾಲಯಗಳ ಛಾಯಾಚಿತ್ರ ಪ್ರದರ್ಶನ, ಸಂಜೆ 6ಕ್ಕೆ ಜಾನಪದ ಸಂಭ್ರಮ ಹಾಗೂ ಗಂಗಾವತಿ ಪ್ರಾಣೇಶ್ ತಂಡದಿಂದ ನಗೆಹಬ್ಬ ನಡೆಯಲಿದೆ ಎಂದು ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
17 ರಂದು ಬೆಳಿಗ್ಗೆ 10.30ಕ್ಕೆ ಸಾವಯವ ಕೃಷಿ, ಬದುಕು, ಆಹಾರ ಕ್ಷೇತ್ರದಲ್ಲಿ ಸಾವಯವ ಭೋಜನ, ಸಾವಯವ ಕೃಷಿ ಬಗ್ಗೆ ಪ್ರಾತ್ಯಕ್ಷಿಕೆ, ವಿಚಾರ ಸಂಕಿರಣ, ವಿಚಾರ ವಿನಿಮಯ, ಸಾವಯವ ಉತ್ಪನ್ನಗಳ ಪ್ರದರ್ಶನ, ಸಂಜೆ 6ಕ್ಕೆ ಜಾನಪದ ಸಂಭ್ರಮ ಹಾಗೂ ಜೀ ಕನ್ನಡ ಸರಿಗಮ ಖ್ಯಾತಿಯ ಹನುಮಂತ, ಚೆನ್ನಪ್ಪ ಮತ್ತು ಸುಹಾನರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದರು.
18 ರಂದು ಸಸ್ಯ ಸಂಪತ್ತಿನ ಅರಿವು ಮೂಡಿಸಲು ಪರಿಸರ ಪ್ರವಾಸ, ಸಂಜೆ ಜಾನಪದ ಸಂಭ್ರಮ ನಂತರ ಸ್ಯಾಕ್ಸೋಫೋನ್ ಖ್ಯಾತಿಯ ಶ್ರೀಧರ್ ಅವರಿಂದ ವಾದ್ಯ ಸಂಗೀತ ನಂತರ ಯಕ್ಷಗಾನ ನಡೆಯಲಿದೆ. ಅಂದು ಸಂಜೆ 6ಕ್ಕೆ ಲಕ್ಷ ದೀಪೋತ್ಸವ ಕಾರ್ಯಕ್ರಮ ಜರುಗಲಿದೆ ಎಂದು ತಿಳಿಸಿದರು.
ಹೊಸಗುಂದದಲ್ಲಿ 5 ಮಾದರಿಯ ಅಭಿವೃದ್ಧಿ ಪರಿಕಲ್ಪನೆ ಮೈದಳೆದಿದೆ. ಜನ, ಜಾನುವಾರು, ಜಮೀನು, ಜಂಗಲ್ ಮತ್ತು ಜಲ ಇವುಗಳ ಕುರಿತಾದ ಭಾರತೀಯ ಸಂಸ್ಕೃತಿ ಮತ್ತು ತತ್ವ ಸಿದ್ಧಾಂತದ ಅಡಿಯಲ್ಲಿ ಚರ್ಚೆ ನಡೆಯಲಿದೆ. ಸುಮಾರು 600 ಎಕರೆ ವಿಸ್ತಾರವಾದ ಹೊಸಗುಂದದ ಈ ದೇವರ ಕಾಡಿನ ಬಗ್ಗೆ ಎಲ್ಲರಿಗೂ ತಿಳಿಸುವ ಮತ್ತು ಇದರ ಐತಿಹಾಸಿಕ ಮಹತ್ವವನ್ನು ಸಾರುವ ಹಿನ್ನಲೆಯಲ್ಲಿ ಈ ಹೊಸಗುಂದ ಉತ್ಸವ ನಡೆಯಲಿದೆ ಎಂದು ಹೇಳಿದರು.
ಪತ್ರಿಕಾಗೊಷ್ಠಿಯಲ್ಲಿ ಟ್ರಸ್ಟ್ನ ಬಸವರಾಜ ಗೌಡರು, ಡಾಕಪ್ಪ, ಜಂಬೇಕೊಪ್ಪ ರವಿ, ಗಣೇಶ್, ಗಿರೀಶ್ ಕೋವಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.