ಶಿವಮೊಗ್ಗ: ಸಮಾಜದ ನಾಯಕನಾಗಲು ಉತ್ತಮ ಕೌಶಲ ಹಾಗೂ ಪ್ರಬುದ್ಧತೆ ಬೇಕಾಗಿದ್ದು, ಸಂಸ್ಕಾರ ಅತಿ ಮುಖ್ಯವಾಗಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್ ಅಭಿಪ್ರಾಯಪಟ್ಟರು.
ನಗರದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನಲ್ಲಿ ಕುವೆಂಪು ವಿಶ್ವವಿದ್ಯಾಲಯ, ರಾಷ್ಟ್ರೀಯ ಶಿಕ್ಷಣ ಸಮಿತಿ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಸಂಯುಕ್ತಾಶ್ರಯದಲ್ಲಿ ಬುಧವಾರ ಏರ್ಪಡಿಸಿದ್ದ ನಾಯಕತ್ವ ತರಬೇತಿ ಕಾರ್ಯಾಗಾರದಲ್ಲಿ ಅವರು ಉಪನ್ಯಾಸ ನೀಡಿದರು.
‘ಸಂಸ್ಕಾರದ ತಳಹದಿ ಇರುವುದು ಕುಟುಂಬದಲ್ಲಿ. ನಂತರ ಸಿಗುವುದು ಶಿಕ್ಷಣ ಮತ್ತು ಅನುಭವ ಆಧಾರಿತ ಸಂಸ್ಕಾರ. ಸರಳತೆ, ಸಜ್ಜನಿಕೆ, ಪ್ರಾಮಾಣಿಕತೆ, ಪಾರದರ್ಶಕತೆ, ಸಮಯ ಪಾಲನೆ, ಪ್ರಬುದ್ಧ ಮಾತುಗಾರಿಕೆಯ ಜೊತೆಯಲ್ಲಿ ಸಹನೆ ಮತ್ತು ಅಧ್ಯಯನಶೀಲತೆ ಉತ್ತಮ ನಾಯಕತ್ವಕ್ಕೆ ಅತಿ ಮುಖ್ಯ’ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಎನ್ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ, ‘ಸೇವೆ ಎನ್ನುವುದು ಒಂದು ದಿನಕ್ಕೆ ಸೀಮಿತವಾದ ಪರಿಕಲ್ಪನೆಯಲ್ಲ. ಸಾಮಾಜಿಕ ಬದಲಾವಣೆಗೆ ನಿರಂತರವಾಗಿ ಶ್ರಮಿಸಿದಾಗ ಮಾತ್ರ ನಿಜವಾದ ಸೇವಾ ಮನೋಭಾವ ಸಾಧ್ಯವಾಗುತ್ತದೆ’ ಎಂದು ಹೇಳಿದರು.
ಪ್ರಾಂಶುಪಾಲೆ ಪಿ.ಆರ್.ಮಮತಾ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಕಾರ್ಯಕ್ರಮಾಧಿಕಾರಿ ಮಂಜುನಾಥ ಎನ್., ಸ್ವಯಂ ಸೇವಕರಾದ ಪ್ರಜ್ವಲ್, ಸಿಂಚನಾ, ಪ್ರಿಯಾಂಕಾ, ಇಂದ್ರಸೇನಾ, ಹೇಮಂತ್, ರಶ್ಮಿತಾ, ಅದಿತಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.