ಶಿವಮೊಗ್ಗ: ಜಿಲ್ಲೆಯ ಹಲವೆಡೆ ಶನಿವಾರ ರಾತ್ರಿ ಸುರಿದ ಮಳೆಯಿಂದ ವಿದ್ಯುತ್ ಕಂಬಗಳು ಹಾಗೂ ಮರಗಳು ನೆಲಕ್ಕೆ ಉರುಳಿವೆ. ನಗರದ ಗೋಪಾಲಗೌಡ ಬಡಾವಣೆ ಮುಖ್ಯ ರಸ್ತೆಯಲ್ಲಿ ಮರ ಬಿದ್ದು, ವಿದ್ಯುತ್ ಕಂಬ ನೆಲಕ್ಕೆ ಅಪ್ಪಳಿಸಿದೆ. ಬೆಳಿಗ್ಗೆಯಿಂದ ವಿದ್ಯುತ್ ಸಂಪರ್ಕವಿಲ್ಲದೆ ಸ್ಥಳೀಯರು ಪರದಾಡಿದರು.
ಹೊಸನಗರ ತಾಲ್ಲೂಕು ರಿಪ್ಪನ್ ಪೇಟೆಯಲ್ಲಿ 50, ನಗರದಲ್ಲಿ 24 ಸೇರಿ ತಾಲ್ಲೂಕು ವ್ಯಾಪ್ತಿಯಲ್ಲಿ 118ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗೆ ಉರುಳಿವೆ. ತಾಲ್ಲೂಕಿನ ಮುಂಡಕೊಪ್ಪ ಗ್ರಾಮದ ಚಕ್ಕಾರು ಗ್ರಾಮದ ಮುಖ್ಯ ರಸ್ತೆಗೆ ಮರ ಬಿದ್ದು ಸಂಚಾರಕ್ಕೆ ತಡೆ ಉಂಟಾಗಿತ್ತು. ಇಲ್ಲಿನ ಕೆಲವು ಗ್ರಾಮಗಲ್ಲಿ ಕಳೆದ ಎರಡು ದಿನಗಳಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.
ಶಿವಮೊಗ್ಗ ತಾಲ್ಲೂಕಿನ ದೊಡ್ಡಿಮಟ್ಟಿಯಲ್ಲಿ ರಸ್ತೆಯ ಪಕ್ಕದ ಮರ ಬಿದ್ದು, ವಿದ್ಯುತ್ ಕಂಬಕ್ಕೆ ಹಾನಿ ಆಗಿತ್ತು. ಸ್ಥಳೀಯರು ಹಾಗೂ ಮೆಸ್ಕಾಂ ಸಿಬ್ಬಂದಿ ಸೇರಿ ತೆರವುಗೊಳಿಸಿದರು. ಆಯನೂರು ಸಮೀಪ ಸಾಗರ ರಸ್ತೆಗೆ ಮರ ಬಿದ್ದು, ಸಂಚಾರ ದಟ್ಟಣೆ ಉಂಟಾಗಿತ್ತು. ಸ್ಥಳೀಯರು ಹಾಗೂ ಸಂಬಂಧಪಟ್ಟ ಇಲಾಖೆಯವರು ತೆರವುಗೊಳಿಸಿದರು.
ಶಿವಮೊಗ್ಗ - ಭದ್ರಾವತಿ ನಡುವಿನ ಬಿಳಕಿ ಕೊಪ್ಪದಲು ಬಳಿ ರೈಲು ಹಳಿ ಮೇಲೆ ಮರ ಬಿದ್ದ ಪರಿಣಾಮ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿತ್ತು. ಮಧ್ಯಾಹ್ನ 2 ಗಂಟೆಗೆ ಶಿವಮೊಗ್ಗ ತಲುಪಬೇಕಾಗಿದ್ದ ಯಶವಂತಪುರ - ಶಿವಮೊಗ್ಗ ರೈಲು ಎರಡೂವರೆ ಗಂಟೆ ತಡವಾಗಿ ಚಲಿಸಿದೆ. ಇದರ ಪರಿಣಾಮ ಮಧ್ಯಾಹ್ನ 3.45ಕ್ಕೆ ಶಿವಮೊಗ್ಗದಿಂದ ಯಶವಂತಪುರಕ್ಕೆ ಹೊರಡಬೇಕಿದ್ದ ರೈಲು ಸಹ ತಡವಾಗಿ ಸಂಚರಿಸಿದೆ.
ಸೊರಬ ತಾಲ್ಲೂಕಿನಲ್ಲಿ ಕಳೆದ ಎರಡು ದಿನಗಳಿಂದ ಮಳೆಯ ಜತೆ ಗಾಳಿ ಬೀಸಿದ್ದು, ಕ್ಯಾಸನೂರು ಗ್ರಾಮದಲ್ಲಿ ಮರ ಬಿದ್ದು, ಹುಚ್ಚಪ್ಪ ಅವರ ಶೌಚಾಲಯ ಹಾಗೂ ಕಟ್ಟಿಗೆಮನೆ ಸಂಪೂರ್ಣ ಜಖಂಗೊಂಡಿದೆ. ತುಮರಿಯ ಕಣಪಗಾರು ಗ್ರಾಮದ ಕೊಂಜವಳ್ಳಿಯಿಂದ ಕಡಕೋಡು ಸಂಪರ್ಕಿಸುವ ರಸ್ತೆಗೆ ಮಣ್ಣು ಕುಸಿದಿದೆ. 60ಕ್ಕೂ ಹೆಚ್ಚು ಮನೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ.
ವಿದ್ಯುತ್ ಕಂಬ ಮುರಿದಿದ್ದರಿಂದ ವಿದ್ಯುತ್ ತಂತಿಗಳು ರಸ್ತೆಯಲ್ಲಿ ಹರಿದು ಬಿದ್ದಿದ್ದವು. ಯಾವುದೇ ಜೀವ ಹಾನಿ ಸಂಭವಿಸಿಲ್ಲ.
ಇನ್ನೂ ಮೂರು ದಿನಗಳ ಕಾಲ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.