ಶಿವಮೊಗ್ಗ: ‘ಜಿಲ್ಲೆಯ ಅಂಬಾರಗೋಡ್ಲು-ಕಳಸವಳ್ಳಿ ನಡುವೆ, ಶರಾವತಿ ಹಿನ್ನೀರಿನಲ್ಲಿ ನಿರ್ಮಿಸಿರುವ ನೂತನ ಸೇತುವೆ ಲೋಕಾರ್ಪಣೆಯಾದ ಬಳಿಕ ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗಿದ್ದು, ಭಾನುವಾರ ಸಾವಿರಾರು ಭಕ್ತರು ಭೇಟಿ ನೀಡಿ, ದೇವಿಯ ದರ್ಶನ ಪಡೆದರು.
ಸಿಗಂದೂರು ಸೇತುವೆ ಜುಲೈ 14ರಂದು ಉದ್ಘಾಟನೆಯಾದ ಬಳಿಕ ಇದೇ ಮೊದಲ ವಾರಾಂತ್ಯ ಆಗಿರುವುದರಿಂದ, ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಭಕ್ತರು ಸೇತುವೆಯನ್ನು ಕಣ್ತುಂಬಿಕೊಂಡು, ಸಿಗಂದೂರಿಗೆ ಭೇಟಿ ನೀಡುತ್ತಿದ್ದಾರೆ.
ಸಿಗಂದೂರು ದೇವಾಲಯದ ಸಮೀಪ ಪಾರ್ಕಿಂಗ್ ಸಮಸ್ಯೆಯಿಂದ ವಾಹನ ಸವಾರರು ಪರದಾಡಿದರು. ಸಾವಿರಾರು ವಾಹನಗಳು ಅಂದಾಜು 2 ಕಿ.ಮೀ. ದೂರದವರೆಗೆ ಸಾಲುಗಟ್ಟಿ ನಿಂತಿದ್ದವು.
ಈ ಮೊದಲು ಲಾಂಚ್ ಸೇವೆ ಇದ್ದಾಗ, ಲಾಂಚ್ನಿಂದ ಇಳಿದ ಜನರು ಬಾಡಿಗೆ ವಾಹನಗಳ ಮೂಲಕ ದೇವಸ್ಥಾನಕ್ಕೆ ಆಗಮಿಸುತ್ತಿದ್ದರು. ಈಗ ಸೇತುವೆ ಉದ್ಘಾಟನೆ ಆಗಿರುವುದರಿಂದ ಭಕ್ತರು ಸ್ವಂತ ವಾಹನಗಳಲ್ಲಿಯೇ ದೇಗುಲಕ್ಕೆ ಆಗಮಿಸುತ್ತಿದ್ದಾರೆ. ಇದರಿಂದ, ವಾಹನ ದಟ್ಟಣೆ ಹೆಚ್ಚಾಗಿದೆ.
ಸೇತುವೆ ಮೇಲ್ಭಾಗದಲ್ಲಿ ಪ್ರವಾಸಿಗರು ಸೆಲ್ಫಿ, ಫೋಟೊಗಳನ್ನು ತೆಗೆಸಿಕೊಂಡು ಸಂಭ್ರಮಿಸಿದರು. ಕುಟುಂಬದವರು, ಸ್ನೇಹಿತರೊಂದಿಗೆ ಸಿಗಂದೂರು ದೇವಿ ಸನ್ನಿಧಿಗೆ ತೆರಳುವವರೂ ಸಹ ಸೇತುವೆ ಮೇಲೆ ನಿಂತು ಫೋಟೊ ಕ್ಲಿಕ್ಕಿಸಿಕೊಂಡರು.
Highlights - 2 ಕಿ.ಮೀ.ವರೆಗೆ ಸಾಲುಗಟ್ಟಿದ್ದ ವಾಹನಗಳು ರಾಜ್ಯದ ವಿವಿಧ ಜಿಲ್ಲೆಗಳಿಂದ ಭಕ್ತರ ಆಗಮನ ಸೇತುವೆಯನ್ನು ಕಣ್ತುಂಬಿಕೊಂಡ ಪ್ರವಾಸಿಗರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.