ತುಮರಿ:ಇಲ್ಲಿನ ಶ್ರೀಕ್ಷೇತ್ರ ಸಿಗಂದೂರು ಜೌಡೇಶ್ವರಿ ದೇವಿ ದೇವಸ್ಥಾನದಲ್ಲಿ ಶುಕ್ರವಾರ ಮಕರ ಸಂಕ್ರಾಂತಿ ಜಾತ್ರಾ ಮಹೋತ್ಸವ ಸರಳವಾಗಿ ನಡೆಯಿತು.
ಸರ್ಕಾರದ ಮಾರ್ಗಸೂಚಿಯಂತೆ ದೇವರ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿತ್ತು. ದೇವಿಯ ಮೂಲ ಸ್ಥಾನದ ಪೂಜಾ ಕಾರ್ಯಕ್ರಮದಲ್ಲಿ ಧರ್ಮಾಧಿಕಾರಿ ಎಸ್. ರಾಮಪ್ಪ ಅವರ ಕುಟುಂಬಸ್ಥರಿಗೆ ಮಾತ್ರ ಅವಕಾಶ ಕಲ್ಪಿಸಿದ್ದರಿಂದ ಭಕರ ಸಂಖ್ಯೆ ವಿರಳವಾಗಿತ್ತು.
ದೇವಿಯ ಮೂಲ ಸ್ಥಳ ಪೂಜೆಯಲ್ಲಿ ಧರ್ಮಸ್ಥಳದ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಶ್ರೀ ಪಾಲ್ಗೊಂಡಿದ್ದರು. ಧರ್ಮಾಧಿಕಾರಿ ರಾಮಪ್ಪ ಅವರು ಅಖಂಡ ಜ್ಯೋತಿಯನ್ನು ಬೆಳಗುವ ಮೂಲಕ ಸೀಗೆ ಕಣಿವೆಯಿಂದ ಈಗಿನ ದೇವಿಯ ಸನ್ನಿಧಿಯಾದ ಸಿಗಂದೂರಿಗೆ ಜ್ಯೋತಿಯ ರೂಪದಲ್ಲಿ ತಂದು ದೇವಿಗೆ ವಿಶೇಷ ಪೂಜೆ ನೆರವೇರಿಸಿದರು.
ಕೋವಿಡ್ ಕಾರಣ ಭಕ್ತರಿಗೆ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶವಿರಲಿಲ್ಲ. ಸಂಕ್ರಾಂತಿ ಪ್ರಯುಕ್ತ ಕ್ಷೇತ್ರದಲ್ಲಿ ಚಂಡಿಕಾ ಹವನ, ಮಹಾಭಿಷೇಕ, ಅಲಂಕಾರ ಪೂಜೆ, ಗುರು ಪಾದಪೂಜೆನಡೆಯಿತು.
ಸಮೀಪದ ಚಂದ್ರಪ್ಪ ಅಳೂರು ರಚಿಸಿರುವ, ಶ್ರೀಹರ್ಷ ಪ್ರಭಾಕರ ಅವರ ಸಂಗೀತ ಸಂಯೋಜನೆಯ ‘ಮಲೆನಾಡಿನ ನಡೆದಾಡುವ ದೇವರು’ ಎಂಬ ಚೊಚ್ಚಲ ಗೀತೆಯನ್ನು ಧರ್ಮಾಧಿಕಾರಿ ರಾಮಪ್ಪ ಬಿಡುಗಡೆ ಮಾಡಿದರು.
ಮಾಸ್ಕ್ ಧರಿಸದೇ ಬಂದ ಭಕ್ತರಿಗೆ ಪ್ರವೇಶ ನಿರಾಕರಿಸಲಾಯಿತು. ಈ ಬಾರಿ ಯಕ್ಷಗಾನ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳು ಇಲ್ಲದ್ದರಿಂದ ಸ್ಥಳೀಯರು ನಿರಾಸೆಗೊಂಡರು.
ಶಾಸಕ ಎಚ್. ಹಾಲಪ್ಪ ಹರತಾಳು ಕ್ಷೇತ್ರಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು.
ದೇವಾಲಯದ ಕಾರ್ಯದರ್ಶಿ ರವಿಕುಮಾರ್ ಎಚ್.ಆರ್. ಸೇರಿ ಸಮಿತಿಯ ಪದಾಧಿಕಾರಿಗಳು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.