ಸೊರಬ: ‘ಪ್ರಾಕೃತಿಕ ಸಂಪನ್ಮೂಲಗಳಲ್ಲಿ ಒಂದಾದ ದೇವರಕಾಡುಗಳನ್ನು ರಕ್ಷಿಸಿ ಪೋಷಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ’ ಎಂದು ಅದಮ್ಯ ಚೇತನ ಪ್ರತಿಷ್ಠಾನದ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ತಿಳಿಸಿದರು.
ತಾಲ್ಲೂಕಿನ ಕುಪ್ಪೆ ಗ್ರಾಮದ ದೇವರ ಕಾಡು ಸೀತಾರಾಮಾಂಜನೇಯ ದೇವಾಲಯದ ಕಲ್ಯಾಣಿಗೆ ಪೂಜೆ ಸಲ್ಲಿಸುವ ಮೂಲಕ ಗ್ರಾಮ ನೈಸರ್ಗಿಕ ಭೂಮಿ ಸಂರಕ್ಷಣಾ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಅಭಿವೃದ್ದಿ ಎಂದರೆ ಕೇವಲ ರಸ್ತೆ, ಕಟ್ಟಡಗಳ ನಿರ್ಮಾಣವಲ್ಲ. ಅರಣ್ಯ ಸಂಪತ್ತನ್ನು ಕಾಪಾವುಡುದೇ ನಿಜವಾದ ಅಭಿವೃದ್ಧಿ. ದೇವರಕಾಡಿನಲ್ಲಿ ಅನೇಕ ಪ್ರಭೇದದ ಸಸ್ಯಗಳಲ್ಲಿ ಔಷಧಿ ಗುಣವಿದ್ದು, ಅವುಗಳನ್ನು ಸಂರಕ್ಷಿಸಬೇಕಿದೆ. ದೇವರ ಕಾಡಿಗೆ ಪ್ರತ್ಯೇಕ ಮಾನ್ಯತೆ ಕೊಡಬೇಕಾಗಿದೆ. ದೇವರ ಕಾಡಿನ ಕುರಿತು ಮೂರು ವರ್ಷಗಳಲ್ಲಿ ತಜ್ಞರ ಸಹಕಾರದೊಂದಿಗೆ ದಾಖಲಾತಿ ಕಾರ್ಯ ಮಾಡಿದ್ದು, ದೇವರ ಕಾಡು ಯೋಜನೆ ಬಜೆಟ್ನಲ್ಲಿ ಸೇರ್ಪಡೆಯಾಗಿದೆ. ವಿವಿಧೆಡೆಗಳಲ್ಲಿ ದೇವರ ಕಾಡು ಸಂರಕ್ಷಣೆಯಲ್ಲಿ ಪ್ರಮುಖ ಹೆಜ್ಜೆ ಇಡಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಕೆಲ ದೇವರ ಕಾಡುಗಳು ಅತಿಕ್ರಮಣಕ್ಕೆ ಒಳಗಾಗಿವೆ. ಅವುಗಳ ರಕ್ಷಣೆ ಆಗಬೇಕಾಗಿದೆ. ಸೀತಾರಾಮಾಂಜನೇಯ ದೇವರಕಾಡು ಸಂರಕ್ಷಿಸಲು ಅರಣ್ಯ ಇಲಾಖೆ ಜತೆ ಚರ್ಚಿಸಲಾಗಿದ್ದು, ಔಷಧಿ ಗುಣುವುಳ್ಳ ಸಸ್ಯ ಪ್ರಭೇದ ಕಾಪಾಡಿಕೊಳ್ಳಲು ಗ್ರಾಮಸ್ಥರು ಮುಂದಾಗಬೇಕಿದೆ’ ಎಂದರು.
ವಕೀಲ ಎಂ.ಆರ್ ಪಾಟೀಲ್, ಜಯಶೀಲಗೌಡ, ಜಗದೀಶ ಗೌಡ, ಆರ್ಎಫ್ಒ ಜಾವೀದ್ ಅಹ್ಮದ್, ಜಗದೀಶ ಎಂ.ಆರ್, ಮೋಹನ್ ಕುಮಾರ್, ಪಿಡಿಒ ಚೂಡಾಮಣಿ, ಕಾರ್ಯದರ್ಶಿ ಸುಬ್ಬುರಾವ್, ಸುಮನಾ ಮಳಗದ್ದೆ, ಸುಜಾತ ಸೇರಿದಂತೆ ಗ್ರಾಮಸ್ಥರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.