ರಿಪ್ಪನ್ಪೇಟೆ: ‘ಕನ್ನಡ ಭಾಷೆ ನಮ್ಮ ಅಸ್ಮಿತೆಯ ಸಂಕೇತ. ಕನ್ನಡ ಸಾವಿರಾರು ವರ್ಷಗಳ ಇತಿಹಾಸ ಹೊಂದಿದ ಭಾಷೆ’ ಎಂದು ನಾಡಕಚೇರಿಯ ಉಪ ತಹಶೀಲ್ದಾರ್ ಪ್ರದೀಪ್ ಹೇಳಿದರು.
ಪಟ್ಟಣದ ಭೂಪಾಳಂ ಆರ್. ಚಂದ್ರಶೇಖರಯ್ಯ ಅವರ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ವೈಶಿಷ್ಟ್ಯದಿಂದ ಕೂಡಿದ ವೈಜ್ಞಾನಿಕ ಭಾಷೆ ಕನ್ನಡ. ಸಂಸ್ಕೃತಕ್ಕಿಂತಲೂ ಪರಿಪಕ್ವ ಭಾಷೆ ಇದು. ನಾಡು–ನುಡಿಗಾಗಿ ಹೋರಾಡಿದವರನ್ನು ಸದಾ ಸ್ಮರಿಸುವ ಔದಾರ್ಯ ನಮ್ಮದಾಗಿರಬೇಕು’ ಎಂದರು.
ಮುಖಂಡರಾದ ತಿ.ರಾ. ಕೃಷ್ಣಪ್ಪ, ದೇವೇಂದ್ರಪ್ಪಗೌಡ, ಧನಲಕ್ಷ್ಮಿ ಗಂಗಾಧರ, ಆರ್.ಎ. ಚಾಬುಸಾಬ್, ಎಂ.ಬಿ. ಮಂಜುನಾಥ ಮಾತನಾಡಿದರು.
ಪಿಎಸ್ಐ ಪಾರ್ವತಿಬಾಯಿ ಭುವನೇಶ್ವರಿ ಭಾವಚಿತ್ರದ ಶೋಭಾಯಾತ್ರೆಗೆ ಚಾಲನೆ ನೀಡಿದರು. ಸಂಘದ ಮಾಜಿ ಅಧ್ಯಕ್ಷ ಎನ್. ವರ್ತೇಶ್ ಕನ್ನಡ ಧ್ವಜಾರೋಹಣ ನೆರವೇರಿಸಿದರು.
ಕಲಾಕೌಸ್ತುಭ ಕನ್ನಡ ಸಂಘದ ಅಧ್ಯಕ್ಷೆ ಪದ್ಮ ಸುರೇಶ್ ಅಧ್ಯಕ್ಷತೆ ವಹಿಸಿದ್ದರು.
ಊರಿನ ಪ್ರಮುಖ ಬೀದಿಗಳಲ್ಲಿ ನಡೆದ ಶೋಭಾಯಾತ್ರೆಯಲ್ಲಿ ಐತಿಹಾಸಿಕ ನಾಯಕರ ವೇಷ ಧರಿಸಿ ಮಕ್ಕಳು ಸಂಭ್ರಮಿಸಿದರು.
ನಾಗರತ್ನ ದೇವರಾಜ್ ಪ್ರಾರ್ಥಿಸಿದರು. ಉಮಾ ಸುರೇಶ್ ಸ್ವಾಗತಿಸಿದರು. ಎಂ. ಸುರೇಶ್ ಸಿಂಗ್ ನಿರೂಪಿಸಿದರು. ತ.ಮ. ನರಸಿಂಹ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.