ಶಿವಮೊಗ್ಗ: ‘ಆಧುನಿಕತೆಯ ಜಾಡಿನಲ್ಲಿ ಕಾಣಸಿಗುವ ಕಾಲ್ಪನಿಕ ಆಕರ್ಷಣೆಗಳಿಗೆ ಸಿಲುಕಬೇಡಿ’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಎಸ್. ಸಂತೋಷ ವಿದ್ಯಾರ್ಥಿನಿಯರಿಗೆ ಸಲಹೆ ನೀಡಿದರು.
ನಗರದ ಕಮಲಾ ನೆಹರೂ ಸ್ಮಾರಕ ರಾಷ್ಟ್ರೀಯ ಮಹಿಳಾ ಕಾಲೇಜಿನ ವಸತಿನಿಲಯದಲ್ಲಿ ಬುಧವಾರ ಏರ್ಪಡಿಸಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಆಧುನಿಕತೆಯ ಜಾಲತಾಣದಲ್ಲಿ ಕಾಣುವುದೆಲ್ಲವೂ ನಿಜವಲ್ಲ. ವಾಸ್ತವತೆಯ ಜ್ಞಾನ ಪಡೆಯಿರಿ. ಜಾಲತಾಣಗಳು ನಮ್ಮನ್ನು ಅಂಧತ್ವದ ಮೊಹದ ಬಲೆಗೆ ಸಿಲುಕಿಸುತ್ತಿವೆ. ಅಂತಹ ಆಕರ್ಷಣೆಗಳಿಂದ ಎಚ್ಚರದಿಂದಿರಿ. ವಾಸ್ತವತೆ ವಿಮರ್ಶಿಸಲು ಪ್ರಯತ್ನಿಸಿ. ಹಿರಿಯರ ಸಲಹೆಗಳನ್ನು ಕೇಳಿಸಿಕೊಳ್ಳುವ ಸಂಯಮ ಬೇಕು’ ಎಂದು ಹೇಳಿದರು.
ಎನ್ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ‘ಹದಿಹರೆಯದ ವಿದ್ಯಾರ್ಥಿನಿಯರು ಅನೇಕ ಗೊಂದಲದಲ್ಲಿದ್ದಾರೆ. ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ನಾವು ಕೂಡ ಆಧುನಿಕವಾಗಿ ಸಮಾಜಕ್ಕೆ ತೆರೆದುಕೊಳ್ಳಬೇಕು ಎಂಬ ಆತುರ ಶುರುವಾಗಿದೆ. ಹಕ್ಕುಗಳನ್ನು ಬಳಸುವಾಗ ನಿಮ್ಮ ಮೇಲಿನ ಜವಾಬ್ದಾರಿ ಬಗ್ಗೆಯೂ ಅರಿವಿರಬೇಕು’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎನ್ಇಎಸ್ ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್, ನಿರ್ದೇಶಕ ಟಿ.ಆರ್.ಅಶ್ವಥನಾರಾಯಣ ಶೆಟ್ಟಿ, ವಿದ್ಯಾರ್ಥಿ ನಿಲಯದ ಮುಖ್ಯಸ್ಥೆ ಸಂಜಿದಾ ಬಾನು, ದಿವ್ಯಾ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.