ಶಿವಮೊಗ್ಗ: ನಗರದಲ್ಲಿ ಜ. 4ರಿಂದಒಂದು ವಾರ ನಡೆದ ಸುತ್ತೂರು ಶ್ರೀ ಶಿವರಾತ್ರಿಶ್ವರ ಶಿವಯೋಗಿಗಳ 1,059ನೇ ಜಯಂತಿ ಮಹೋತ್ಸವವು ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿದೆ ಎಂದು ಜಯಂತಿ ಮಹೋತ್ಸವ ಸಮಿತಿಯ ಅಧ್ಯಕ್ಷ ಎಸ್. ರುದ್ರೇಗೌಡ ಹೇಳಿದರು.
ಹಳೇ ಜೈಲು ಆವರಣದಲ್ಲಿ ಒಂದು ವಾರದಿಂದ ಪ್ರತಿದಿನಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಮುಂಜಾನೆ ಸಿದ್ದೇಶ್ವರ ಸ್ವಾಮೀಜಿ ಪ್ರವಚನವನ್ನು ಹೆಚ್ಚಿನ ಸಾರ್ವಜನಿಕರನ್ನು ಸೆಳೆಯಿತು. ಚಳಿಯನ್ನೂ ಲೆಕ್ಕಿಸದೆ ಮುಂಜಾನೆಯೇ ಸಾವಿರಾರೂ ಜನ ಪ್ರವಚನ ಕೇಳಿದ್ದಾರೆ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಶುಭಮಂಗಳ ಸಮುದಾಯ ಭವನದಲ್ಲೂ ಅನುಭಾವ ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿತ್ತು. ಅಲ್ಲದೇ ಸುತ್ತೂರು ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಬೆಳಿಗ್ಗೆ ನಗರದ ಒಂದೊಂದು ಕೊಳೆಗೇರಿಯಲ್ಲಿ ಪಾದಯಾತ್ರೆ ನಡೆಸಿ ಅಲ್ಲಿನ ಜನರಲ್ಲಿ ಆತ್ಮವಿಶ್ವಾಸ, ಬದುಕಿನ ಪ್ರೀತಿಯನ್ನು ಹೆಚ್ಚಿಸಿದರು. ಸೋಮಿನಕೊಪ್ಪದಲ್ಲಿ ನಡೆದ ಪಾದಯಾತ್ರೆಯಲ್ಲಿ ಇಸ್ಲಾಂ ಧರ್ಮಗುರು, ರಾಗಿಗುಡ್ಡದಲ್ಲಿ ಕ್ರೈಸ್ತ ಧರ್ಮಗುರು ಭಾಗವಹಿಸಿದ್ದರು. ಹೀಗೆ ಧರ್ಮಗಳನ್ನು ತಬ್ಬಿಕೊಂಡ ಕ್ಷಣಗಳು ಪುನೀತ ಭಾವಕ್ಕೆ ನಾಂದಿ ಹಾಡಿದವು ಎಂದರು.
ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಬೆಕ್ಕಿನ ಕಲ್ಮಠ ಶ್ರೀಗಳು, ಬಸವ ಮರುಳಸಿದ್ದ ಸ್ವಾಮೀಜಿ, ವಿರಕ್ತಮಠದ ಸ್ವಾಮೀಜಿ, ಜಡೆ ಸಂಸ್ಥಾನದ ಶ್ರೀಗಳು ಹೀಗೆ ಹಲವು ಸ್ವಾಮೀಜಿಗಳು ಕಾರ್ಯಕ್ರಮಗಳಲ್ಲಿ ಸಾನ್ನಿಧ್ಯ ವಹಿಸುವ ಮೂಲಕ ಜಯಂತಿಯಮೆರುಗು ಹೆಚ್ಚಿಸಿದರು.ಜ. 11ರಂದು ಬೆಳಿಗ್ಗೆ 8ಕ್ಕೆ ಉತ್ಸವ ಮೂರ್ತಿಯ ಬಿಳ್ಕೋಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಪ್ರಧಾನ ಕಾರ್ಯದರ್ಶಿಎನ್.ಜೆ. ರಾಜಶೇಖರ್, ಪ್ರಧಾನ ಸಂಚಾಲಕ ಕೆ.ಜಿ. ನಿಂಗಪ್ಪ, ನಾಗರಾಜ್ ತಮ್ಮಡಿಹಳ್ಳಿ,ಬಾರಂದೂರು ಪ್ರಕಾಶ್, ಹಿರಣಯ್ಯ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.