ಭದ್ರಾವತಿ: ‘ವ್ಯಕ್ತಿಗತ ನಡವಳಿಕೆ ಕೌಟುಂಬಿಕ ಜೀವನದ ಆದರ್ಶಗಳನ್ನುವಾಲ್ಮೀಕಿ ಮಹರ್ಷಿ ರಾಮಾಯಣ ಪಾತ್ರಗಳ ಮೂಲಕ ಅದ್ಭುತವಾಗಿ ತೆರೆದಿಟ್ಟಿದ್ದಾರೆ’ ಎಂದು ಶಿವಮೊಗ್ಗ ಸಹ್ಯಾದ್ರಿ ಕಲಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಮೋಹನ್ ಚಂದ್ರಗುತ್ತಿ ಹೇಳಿದರು.
ಹಳೇನಗರ ವೀರಶೈವ ಸಭಾಭವನದಲ್ಲಿ ತಾಲ್ಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ, ವಾಲ್ಮೀಕಿ ಸಮಾಜದ ಆಶ್ರಯದಲ್ಲಿ ಏರ್ಪಡಿಸಿದ್ದ ವಾಲ್ಮೀಕಿ ಜಯಂತಿಯಲ್ಲಿ ಅವರು ಉಪನ್ಯಾಸ ನೀಡಿದರು.
‘ರಾಮಾಯಣದಲ್ಲಿ ದೈವತ್ವದ ಚಿತ್ರಣವನ್ನು ನೀಡದೆ, ಮಾನವ ಬದುಕಿನ ಆದರ್ಶದ ಪ್ರತೀಕವಾಗಿ ಪಾತ್ರಗಳನ್ನು ತೆರೆದಿಟ್ಟಿರುವ ರೀತಿಯೂ ಮಾನವಿಕ ಮೌಲ್ಯವನ್ನು ಸಾರುತ್ತದೆ.ಪ್ರತಿ ಪಾತ್ರದಲ್ಲೂ ಹಿರಿಯರ ಮಾತಿಗೆ ಮನ್ನಣೆ, ಗೌರವ, ಅಧಿಕಾರ ಸಂಪತ್ತಿನ ತ್ಯಾಗದ ಚಿತ್ರಣ ನೀಡುವ ಮೂಲಕ ವ್ಯಾಮೋಹ ರಹಿತ ಬದುಕಿನ ಸಾರವನ್ನು ತಿಳಿಸುವ ಪ್ರಯತ್ನ ವಾಲ್ಮೀಕಿ ರಾಮಾಯಣದಲ್ಲಿ ಇದೆ’ ಎಂದು ಹೇಳಿದರು.
ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಸಿದ್ಧಬಸಪ್ಪ ಮಾತನಾಡಿ, ‘ಮಹಾತ್ಮರ ಬದುಕಿನ ತಿರುಳನ್ನು ಸ್ವಲ್ಪ ಮಟ್ಟಿಗಾದರೂ ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವ ಅಗತ್ಯ’ ಇದೆ ಎಂದರು.
ತಹಶೀಲ್ದಾರ್ ಪ್ರದೀಪ್ ಕಾರ್ಯಕ್ರಮ ಉದ್ಘಾಟಿಸಿದರು. ನಗರಸಭೆ ಅಧ್ಯಕ್ಷೆ ಗೀತಾ ರಾಜಕುಮಾರ್ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಆಯುಕ್ತ ಕೆ. ಪರಮೆಶ್ವರ್, ಉಪಾಧ್ಯಕ್ಷ ಚನ್ನಪ್ಪ, ಸದಸ್ಯರಾದ ಬಿ.ಕೆ. ಮೋಹನ್, ಸಿಪಿಐ ಮಂಜುನಾಥ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಗೋಪಿನಾಥ್, ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ರಂಗಪ್ಪ ಇದ್ದರು.
ಪ್ರಸ್ತುತ ಸಾಲಿನ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ಹಾಗೂ ಕ್ರೀಡೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು, ಸಮಾಜದ ಹಿರಿಯರನ್ನು ಸನ್ಮಾನಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.