ಹೊಳೆಹೊನ್ನೂರು: ಸರ್ಕಾರದ ಯೋಜನೆಗಳ ಲಾಭವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಶಾಸಕಿ ಶಾರದಾ ಪೂರ್ಯಾನಾಯ್ಕ ತಿಳಿಸಿದರು.
ಸಮೀಪದ ಮಾರಶೆಟ್ಟಿಹಳ್ಳಿಯ ಛತ್ರಪತಿ ಶಿವಾಜಿ ಸಮುದಾಯ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಜನಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಳೆಗಾಲ ಆರಂಭವಾಗಿರುವುದರಿಂದ ಜನರು ಆರೋಗ್ಯದ ಕಾಳಜಿ ವಹಿಸಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಗಳ ಕೊರತೆಯಾಗದಂತೆ ಮುಂಜಾಗ್ರತೆ ವಹಿಸಬೇಕು ಎಂದು ತಾಲ್ಲೂಕು ವೈದ್ಯಾಧಿಕಾರಿಗೆ ಸೂಚಿಸಿದರು.
ಬಡವರು ಸರ್ಕಾರಿ ಕಚೇರಿಗಳಿಗೆ ಅಲೆಯುವುದು ತಪ್ಪಬೇಕು. ಗ್ರಾಮಲೆಕ್ಕಿಗರು ಹಳ್ಳಿಗಳಲ್ಲಿದ್ದು, ಜನರ ಕೆಲಸಗಳನ್ನು ಮಾಡಿಕೊಡಬೇಕು ಎಂದು ಸೂಚಿಸಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಸತೀಶ್, ತಹಶೀಲ್ದಾರ್ ಪರುಶುರಾಮ್, ಉಪವಲಯ ಅರಣ್ಯಾಧಿಕಾರಿ ಉಷಾ, ತಾಲ್ಲೂಕು ವೈದ್ಯಾಧಿಕಾರಿ ಅಶೋಕ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುನಾಥ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಕಿರಣ್ಕುಮಾರ್, ಉಪ ತಹಶೀಲ್ದಾರ್ ವಿಜಯ್, ಕಂದಾಯ ನೀರಿಕ್ಷಕ ರಾಜು, ರವಿಕುಮಾರ್, ಸಿದ್ದಬಸಪ್ಪ, ಓಂಕಾರಮೂರ್ತಿ, ವಿನೋದಮ್ಮ, ಶಿವಾಜಿರಾವ್ ಡಿಸಿಲೆ, ಸೋಮಶೇಖರ್, ಬಸವರಾಜ್ ಉಪಸ್ಥಿತರಿದ್ದರು.
ಅರಣ್ಯ ಇಲಾಖೆಯವರು ರೈತರಿಗೆ ಬೆನ್ನು ಬಿದ್ದ ಬೆತಾಳವಾಗಿ ಕಾಡುತ್ತಿದ್ದಾರೆ. ನೂರಾರು ಎಕರೆ ಸಾಗುವಳಿ ಜಮೀನುಗಳನ್ನು ತೆರವುಗೊಳಿಸಲು 3000 ರೈತರಿಗೆ ನೋಟಿಸ್ ಜಾರಿ ಮಾಡಿ ಕಾನೂನು ಹೋರಾಟ ಆರಂಭಿಸಿದ್ದಾರೆ. ಅರಣ್ಯದಂಚಿನ ಗ್ರಾಮಸ್ಥರು ಭೂಮಿ ಹಕ್ಕು ಉಳಿಸಿಕೊಳ್ಳುವುದು ಸಂಕಷ್ಟವಾಗುತ್ತಿದೆ ಕೆಲ ರೈತರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.