ಸಾಗರ: ಮಧ್ವಾಚಾರ್ಯರ ಗ್ರಂಥಗಳಲ್ಲಿ ಅಧ್ಯಾತ್ಮದ ಸಾರ ಅಡಗಿದೆ. ಅಧ್ಯಾತ್ಮ ಕ್ಷೇತ್ರಕ್ಕೆ ಅವರ ಕೊಡುಗೆ ಮಹತ್ವದ್ದು ಎಂದು ಪಂಡಿತ್ ಕೃಷ್ಣಾಚಾರ್ ಮಣ್ಣೂರು ಹೇಳಿದರು.
ಇಲ್ಲಿನ ಮಾಧ್ವ ಸಂಘ ಮಾಧ್ವ ನವಮಿ ಅಂಗವಾಗಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಲೇಖಕ ವಿ. ಗಣೇಶ್ ಅವರ ‘ಪವನಪುತ್ರ ಹನುಮಂತ’ ಕೃತಿಯನ್ನು ಬಿಡುಗಡೆ ಮಾಡಿ, ಬನ್ನಂಜೆ ಗೋವಿಂದಾಚಾರ್ಯ ನಿರ್ದೇಶನದ ಕವಿ ಸದಾನಂದ ಶರ್ಮ ವಿರಚಿತ ‘ಆಚಾರ್ಯ ಶ್ರೀ ಮಧ್ವ ಚರಿತೆ’ ಯಕ್ಷ ವೈಭವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಧ್ವಾಚಾರ್ಯರು ಅಧ್ಯಾತ್ಮದಲ್ಲಿ ಪರಿಪೂರ್ಣ ಗ್ರಂಥಗಳನ್ನು ನೀಡಿದ್ದಾರೆ. ಸತ್ಯವನ್ನು ಪ್ರಮಾಣೀಕರಿಸಿರುವುದೇ ಅವರ ಗ್ರಂಥಗಳ ವಿಶೇಷತೆ. ಈ ಗ್ರಂಥಗಳ ಬಗ್ಗೆ ಹೆಚ್ಚಿನ ಅಧ್ಯಯನ ನಡೆಯಬೇಕಿದೆ ಎಂದರು.
ಲೇಖಕ ವಿ. ಗಣೇಶ್, ‘ರಾಮಾಯಣದಲ್ಲಿ ಹನುಮಂತನದ್ದು ಪ್ರಮುಖ ಪಾತ್ರ. ಮಹಾ ಪರಾಕ್ರಮಿಯಾಗಿದ್ದ ಹನುಮಂತ ರಾಮನ ಆದೇಶವಿಲ್ಲದೇ ಯಾವ ಕೆಲಸವನ್ನೂ ಮಾಡುತ್ತಿರಲಿಲ್ಲ. ಹನುಮಂತನ ವ್ಯಕ್ತಿತ್ವವನ್ನು ಹಿಡಿದಿಡುವ ಕೆಲಸವನ್ನು ‘ಪವನಪುತ್ರ ಹನುಮಂತ’ ಕೃತಿಯಲ್ಲಿ ಮಾಡಿದ್ದೇನೆ’ ಎಂದು ಹೇಳಿದರು.
‘ಮಧ್ವ ಚರಿತೆ’ ಯಕ್ಷ ವೈಭವದ ಕೃತಿಕಾರ ಸದಾನಂದ ಶರ್ಮ, ‘ಯಕ್ಷ ಪದ್ಯಗಳ ಮೂಲಕ ಮಧ್ವಾಚಾರ್ಯರ ವಿಚಾರಧಾರೆಗಳನ್ನು ಜನರಿಗೆ ತಲುಪಿಸುವ ಪ್ರಯತ್ನ ಇಲ್ಲಿ ನಡೆದಿದೆ. ಇದಕ್ಕೆ ಬನ್ನಂಜೆ ಗೋವಿಂದಾಚಾರ್ಯರೇ ಮುಖ್ಯ ಪ್ರೇರಣೆ’ ಎಂದು ತಿಳಿಸಿದರು.
ಮಾಧ್ವ ಸಂಘದ ಅಧ್ಯಕ್ಷ ಡಾ.ಜಿ.ವಿ. ಕಲ್ಲಾಪುರ, ಅನಂತರಾವ್, ವೆಂಕಟೇಶ್ ಕಟ್ಟಿ, ನಿರ್ಮಲಾ ಗಣೇಶ್, ಎಂ.ಎಲ್. ಹೆಗಡೆ, ಎಚ್.ಎಂ. ತಿಮ್ಮಪ್ಪ ಕಲಸಿ, ಮಂಜುಳಾ ಬದರೀನಾಥ್, ಶ್ರೀದೇವಿ ಮೋಹನ್, ರಮಾದೇವಿ, ಪಿ.ಎಲ್. ಗಜಾನನ ಭಟ್, ರಘುನಂದನ ಪುರೋಹಿತ್, ಎಚ್.ಆರ್. ನಾಗಭೂಷಣ್, ಆನಂದ ಕಲ್ಯಾಣಿ ಇದ್ದರು.
ಭಾಗವತರಾದ ಕೊಳಗಿ ಕೇಶವ ಹೆಗಡೆ ಯಕ್ಷ ವೈಭವ ಕಾರ್ಯಕ್ರಮ ನಡೆಸಿಕೊಟ್ಟರು. ಅರ್ಥಧಾರಿಯಾಗಿ ಸದಾನಂದ ಶರ್ಮ ಇಡುವಾಣಿ ಪಾಲ್ಗೊಂಡಿದ್ದರು. ದೀಪಕ್ ಸಾಗರ್ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.