ತೀರ್ಥಹಳ್ಳಿ: ತೆನೆ, ಕಾಳು ಕಟ್ಟಿದ ಭೂಮಿ ತಾಯಿಗೆ ಬಯಕೆ ತೀರಿಸುವ ಭೂಮಿ ಹುಣ್ಣಿಮೆ ಹಬ್ಬವನ್ನು ತಾಲ್ಲೂಕಿನಾದ್ಯಂತ ಬುಧವಾರ ರೈತರು ಸಡಗರದಿಂದ ಆಚರಿಸಿದರು.
ತೆನೆ ಜಳ್ಳಾಗದಿರಲಿ ಎಂದು ಹಬ್ಬದ ಹಿಂದಿನ ರಾತ್ರಿ ಜಾಗರಣೆ ಆಚರಿಸಿ ಪೂಜೆ ಸಲ್ಲಿಸಿದರು.
ಸುಗ್ಗಿ ಕಾಲದ ಮುನ್ನ ತುಂಬು ಗರ್ಭಿಣಿ ಭೂ ತಾಯಿಗೆ ಸೀಮಂತ ಕಾರ್ಯ ನೆರವೇರಿಸಿದರು. ಹಚ್ಚಂಬಲಿ ಹಾಲಂಬಲಿ ಬೇಲಿ ಮೇಲಿರೋ ಧಾರೆ ಹೀರೇಕಾಯಿ ಭೂತಾಯಿ ಉಂಡೋಗ ಎಂದು ಸಾಂಪ್ರದಾಯಿಕ ಕೂಗು ಹಾಕುವ ಮೂಲಕ ಬೆರಕೆ ಸೊಪ್ಪಿನ ಪಲ್ಯ ಭೂಮಿಗೆ ತಳಿದು ಬಯಕೆ ತೀರಿಸಿದರು.
ಕೆಸ, ಕೆಂದಾಳ, ಕುನ್ನೇರಲು, ಚಗಟೆ, ಮೀನಿಂಗಿ, ಕೇಸಟ್ಟೆ, ಸಳ್ಳೆ, ಗಿಡಾಬೆ, ಗರ್ಗ, ಕಲ್ಡಿ, ಮುಕ್ಕುಡಕ, ಕರ್ಜಿ, ಬಾಳೆ, ಹಲಸು, ಮುಳ್ಳಿ, ಮತ್ತಿ, ಮಾವು, ಕಬಳೆ, ನೀರಟ್ಟೆ, ಗಂಧ, ನೇರಲು, ಹೈಗ, ಹಾಲುವಾಣ, ಹೊಳೆಲಕ್ಕಿ, ಕಿರಾಲುಬೋಗಿ, ತ್ವಾರಂಗಲು, ಬೋಗಿ, ಕೂಳೆ, ಸದಗ, ಒಂದೆಲಗ, ರತ್ನಗಂಜಿ, ಇಲಿಕಿವಿ, ತಗ್ಗಿ, ತುಂಬೆ, ಅರಮರಲು, ಅತ್ತಿ, ನೆಲ್ಲಿ, ಬಲಿಗೆ, ಬಲಿಗೆ, ಬಗುನೆ, ಕಾಡುಕಿತ್ತಳೆ, ಕಾಕಿ, ಜೀರಿಗೆ, ಮೆಣಸು, ಹೆಡಿಗೆ ಗೆಣಸು ಮುಂತಾದ ಕಾಡು ಜಾರಿಯ ಸೊಪ್ಪು, ಸಸ್ಯಗಳ ಕುಡಿ ಸಂಗ್ರಹಿಸಿ ಬೆರಕೆ ಅಡುಗೆ ಸಿದ್ಧಪಡಿಸಿದರು.
ಭೂಮಿ ಗರ್ಭಿಣಿ ಎಂಬ ವಾಡಿಕೆಯಿಂದ ನಂಜಿನ ಪದಾರ್ಥವನ್ನು ಬಳಸದೆ ಭೂ ತಾಯಿಗೆ ಸೀಮಂತ ಸಂಭ್ರಮ ಆಚರಿಸುವುದು ವಾಡಿಕೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.