ಶಿವಮೊಗ್ಗ: ತರಕಾರಿ ಮಾರಾಟಕ್ಕೆ ಬೆಳಿಗ್ಗೆ 6ರಿಂದ 7ರವರೆಗೆ ಒಂದು ತಾಸು ಅವಕಾಶ ನೀಡಿರುವ ಜಿಲ್ಲಾಡಳಿತ ನಿರ್ಧಾರ ಖಂಡಿಸಿ ಮಂಗಳವಾರ ಮಾರಾಟಗಾರರು ತರಕಾರಿಗಳನ್ನು ಬೀದಿಗೆ ಚೆಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಮೇ 13ರಿಂದ ನಾಲ್ಕು ದಿನಗಳು ತರಕಾರಿ ಸಗಟು ಮಾರಾಟ ಸಂಪೂರ್ಣ ಸ್ಥಗಿತಗೊಳಿಸಲಾಗಿತ್ತು. ಈಗ ಮಾರಾಟಕ್ಕೆ ಅವಕಾಶ ನೀಡಿದರೂ, ಒಂದು ತಾಸಿಗೆ ಸೀಮಿತಗೊಳಿಸಲಾಗಿದೆ. ಅಷ್ಟು ಕಡಿಮೆ ಅವಧಿಯಲ್ಲಿ ಶೇ 20ರಷ್ಟೂ ತರಕಾರಿ ಮಾರಾಟ ಮಾಡಲು ಸಾಧ್ಯವಿಲ್ಲ. ತಮಿಳುನಾಡು, ಬೆಂಗಳೂರು, ತುಮಕೂರು ಸೇರಿದಂತೆ ಬೇರೆ ಭಾಗಗಳಿಂದ ತರಕಾರಿ ಮಾರುಕಟ್ಟೆಗೆ ಬರುತ್ತದೆ. ಉಳಿದರೆ ಮರು ಬಳಕೆ ಅಸಾಧ್ಯ. ಹಾಗಾಗಿ, ಉಳಿದ ಎಲ್ಲ ತರಕಾರಿ ರಸ್ತೆಗೆ ಎಸೆದಿದ್ದೇವೆ ಎಂದು ವರ್ತಕರು ಆಕ್ರೋಶ ವ್ಯಕ್ತಪಡಿಸಿದರು.
ವಿನೋಬ ನಗರದ ಶಿವಾಲಯದ ಮುಂದೆ, ಕಾಶೀಪುರ, ನವುಲೆ ಕ್ರೀಡಾಂಗಣದ ಎದುರು, ಖಾಸಗಿ ಬಸ್ನಿಲ್ದಾಣ, ತುಂಗಾ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ, ಸೈನ್ಸ್ ಮೈದಾನದಲ್ಲೂ ಚಿಲ್ಲರೆ ತರಕಾರಿ ಮಾರಾಟಕ್ಕೂ ಒಂದು ತಾಸು ಅವಕಾಶ ಕೊಡಲಾಗಿದೆ.
‘ರಾಜ್ಯದ ಎಲ್ಲ ಕಡೆ ತರಕಾರಿ ವಹಿವಾಟಿಗೆ ಬೆಳಿಗ್ಗೆ 6ರಿಂದ 10ರವರೆಗೆ ಅವಕಾಶ ಕಲ್ಪಿಸಲಾಗಿದೆ. ಶಿವಮೊಗ್ಗದಲ್ಲಿ ಒಂದು ತಾಸು ನಿಗದಿ ಮಾಡಲಾಗಿದೆ. ಇದರಿಂದ ರೈತರು, ವರ್ತಕರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಆದೇಶ ಮರುಪರಿಶೀಲಿಸಬೇಕು’ ಎಂದು ಎಪಿಎಂಸಿ ಸಗಟು ವರ್ತಕರ ಸಂಘದ ಅಧ್ಯಕ್ಷ ಎನ್.ರಮೇಶ್ ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.