ಆನಂದಪುರ: ಸಮೀಪದ ಹೊಸಕೊಪ್ಪ ಗ್ರಾಮದಲ್ಲಿ ಪುನೀತ್ ರಾಜ್ಕುಮಾರ್ ಪುತ್ಥಳಿ ಅನಾವರಣ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.
ಗ್ರಾಮದಲ್ಲಿ ಹಣ ಸಂಗ್ರಹಿಸಿ ₹1 ಲಕ್ಷ ವೆಚ್ಚದಲ್ಲಿ ಪುತ್ಥಳಿ ಅನಾವರಣ ಮಾಡಿದ್ದಾರೆ. ಅಲ್ಲದೇ ಕರ್ನಾಟಕ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಎತ್ತಿನಗಾಡಿ ಹಾಗೂ ಬೈಕ್ ರ್ಯಾಲಿಯ ಮೂಲಕ ಪುನೀತ್ ರಾಜ್ಕುಮಾರ್ ಭಾವಚಿತ್ರವನ್ನು ಮೆರ ವಣಿಗೆ ಮೆರವಣಿಗೆ ಮಾಡಲಾಯಿತು.
ಧ್ವಜಾರೋಹಣ ನೆರವೇರಿಸಿದ ಸರ್ವೋದಯ ಸಹಕಾರ ಸಂಘದ ಅಧ್ಯಕ್ಷರಾದ ಎಚ್.ಕೆ. ಬೂದ್ಯಪ್ಪ ಮಾತನಾಡಿ, ‘ಬಹುಮುಖ ಪ್ರತಿಭೆ ಯನ್ನು ಅಗಲಿರುವುದು ಚಿತ್ರರಂಗಕ್ಕೆ ಮಾತ್ರವಲ್ಲದೆ ಇಡೀ ಸಮಾಜಕ್ಕೆ ಅಘಾತ ಉಂಟುಮಾಡಿದೆ. ಕೇವಲ ಚಿತ್ರರಂಗದಲ್ಲಿ ಮಾತ್ರ ತಮ್ಮನ್ನು ತೊಡಗಿಸಿಕೊಳ್ಳದೇ ಬಡ ಕುಟುಂಬಗಳಿಗ ಆಸರೆಯಾಗಿದ್ದರು’ ಎಂದು ಸ್ಮರಿಸಿದರು.
‘ರಾಜಕೀಯವಾಗಿ ಯಾವುದೇ ಪಕ್ಷಗಳ ಜೊತೆ ಗುರುತಿಸಿಕೊಳ್ಳದ ಕಾರಣ ಇಂದು ದೊಡ್ಡಮಟ್ಟದಲ್ಲಿ ಬೆಳೆಯಲು ಹಾಗೂ ಅಭಿಮಾನಿ ಬಳಗವನ್ನು ಹೊಂದಲು ಸಾಧ್ಯವಾಗಿದೆ. ವಿವಿಧ ರಾಜಕೀಯ ಪಕ್ಷಗಳಿಂದ ಆಹ್ವಾನ ಬಂದರೂ ಅವುಗಳನ್ನು ತಿರಸ್ಕರಿಸಿ ಅಪರೂಪದ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ’ ಎಂದರು.
ಗ್ರಾಮದ ಹಿರಿಯರಾದ ಕೌತಿ ನಾಗಪ್ಪ ಮಾತನಾಡಿ, ‘ಯಾರಿಗೂ ತಿಳಿಯದ ಹಾಗೇ ಅವರು ಮಾಡಿರುವ ಸಮಾಜ ಸೇವೆ ನಿಜಕ್ಕೂ ಅವಿಸ್ಮರಣೀಯ. ರಾಜಕೀಯ ವ್ಯಕ್ತಿಗಳು, ಅಧಿಕಾರಿಗಳು ಹಾಗೂ ಸಾಮಾನ್ಯರಾದ ನಾವು ಅವರ ಜೀವನ ತತ್ವವನ್ನು ಅಳವಡಿಸಿಕೊಳ್ಳಬೇಕಾಗಿದೆ. ಸಣ್ಣ ವಯಸ್ಸಿನಲ್ಲಿಯೇ ಆಕಾಶದೆತ್ತರಕ್ಕೆ ಬೆಳೆದಿದ್ದಾರೆ. ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಪುನೀತ್ ಅವರನ್ನು ಜೀವಂತವಾಗಿರಿಸಲು ಪ್ರಯತ್ನಿಸಬೇಕು’ ಎಂದು ಹೇಳಿದರು.
ಪ್ರಕಾಶ್, ಮಧು, ಜಗನ್ನಾಥ್, ರಮೇಶ್ ಬಿ.ಸಿ, ಮಂಜುನಾಥ್ ಜೋಗಿ, ರಾಘವೇಂದ್ರ, ಪ್ರವೀಣ್, ರಂಜೀತ್, ಈಶ್ವರ್, ಮನೋಜ್ ಪಾಂಡುರಂಗ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.