ADVERTISEMENT

ವಾಲ್ಮೀಕಿ ಹಗರಣ | ಪತಿ ವಿರುದ್ಧ ಆರೋಪ, ಹೈಕೋರ್ಟ್‌ನಲ್ಲಿ ಪ್ರಶ್ನೆ ಮಾಡುವೆ: ಕವಿತಾ

ಆತ್ಮಹತ್ಯೆ ಮಾಡಿಕೊಂಡ ವಾಲ್ಮೀಕಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಚಂದ್ರಶೇಖರ್ ಪತ್ನಿ ಅಭಿಮತ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2024, 16:21 IST
Last Updated 22 ಆಗಸ್ಟ್ 2024, 16:21 IST

ಶಿವಮೊಗ್ಗ: ‘ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಪತಿಯನ್ನು ತಪ್ಪಿತಸ್ಥರನ್ನಾಗಿಸಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಆರೋಪ ಪಟ್ಟಿ ಸಿದ್ಧಪಡಿಸಿರುವ ಮಾಹಿತಿ ಇದೆ. ಅದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸುವೆ’ ಎಂದು ಆತ್ಮಹತ್ಯೆ ಮಾಡಿಕೊಂಡ ನಿಗಮದ ವ್ಯವಸ್ಥಾಪಕ ಚಂದ್ರಶೇಖರ್ ಅವರ ಪತ್ನಿ ಕವಿತಾ ತಿಳಿಸಿದರು.

ಪ್ರಕರಣದ ತನಿಖೆ ನಡೆಸಿರುವ ವಿಶೇಷ ತಂಡ, 300 ಪುಟಗಳ ಆರೋಪಪಟ್ಟಿಯನ್ನು ಶಿವಮೊಗ್ಗದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಸಲ್ಲಿಸಿರುವ ಹಿನ್ನೆಲೆಯಲ್ಲಿ ಕವಿತಾ ನಗರದಲ್ಲಿ ಗುರುವಾರ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು.

‘ಪತಿ ಚಂದ್ರಶೇಖರ್ ನಿಗಮದ ಹಣ ತಿಂದಿಲ್ಲ. ಹಣ ತಿಂದಿದ್ದರೆ ಏಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ಅವರ ಸಾವಿನ ನಂತರ ಕುಟುಂಬದವರು ಜೀವನ ನಡೆಸಲು ಪರದಾಡುತ್ತಿದ್ದೇವೆ.‌ ತಾಯಿ ಮನೆಯಲ್ಲಿ ವಾಸವಿದ್ದೇವೆ’ ಎಂದು ಹೇಳಿದರು. 

ADVERTISEMENT

‘ಸರ್ಕಾರ ನ್ಯಾಯಯುತವಾಗಿ ತನಿಖೆ ನಡೆಸಲಿ. ತನಿಖೆಯನ್ನು ಸಿಬಿಐಗೆ ವಹಿಸಲಿ. ನಾವೇ ಕೇಸ್ ಕೊಟ್ಟಿದ್ದೇವೆ. ಅವರು ನಮ್ಮ ಮನೆಯವರ ಮೇಲೆ (ಪತಿ) ಆರೋಪ ಹೊರಿಸುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.‌

ಸರ್ಕಾರ ನೆರವು ಕೊಟ್ಟಿಲ್ಲ:

‘ಪತಿ ಆತ್ಮಹತ್ಯೆ ಹಿನ್ನೆಲೆಯಲ್ಲಿ ಕುಟುಂಬಕ್ಕೆ ನೆರವು ನೀಡುವುದಾಗಿ ರಾಜ್ಯ ಸರ್ಕಾರ ಹೇಳಿತ್ತು. ಈವರೆಗೂ ಯಾವುದೇ ಪರಿಹಾರ ನೀಡಿಲ್ಲ. ಪತಿ ಸತ್ತಾಗ ಎಲ್ಲರೂ ಬಂದು ಮಾತನಾಡಿಸಿಕೊಂಡು ಹೋದರು. ಆದರೆ ಮತ್ತೆ ಯಾರು ನಮ್ಮ ಮನೆ ಕಡೆ ಬಂದು ಪರಿಹಾರ ನೀಡಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.