ADVERTISEMENT

ಮನುಕುಲದ ಏಳಿಗೆಗೆ ಶ್ರಮಿಸಿದ ಮಹನೀಯ ವೇಮನ

ಎಸ್.ಎನ್.ಚನ್ನಬಸಪ್ಪ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2026, 4:25 IST
Last Updated 20 ಜನವರಿ 2026, 4:25 IST
ಶಿವಮೊಗ್ಗ ಕುವೆಂಪು ರಂಗಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ವೇಮನ ಜಯಂತಿ ಕಾರ್ಯಕ್ರಮವನ್ನು ಶಾಸಕ ಎಸ್.ಎನ್. ಚನ್ನಬಸಪ್ಪ ಉದ್ಘಾಟಿಸಿದರು
ಶಿವಮೊಗ್ಗ ಕುವೆಂಪು ರಂಗಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ವೇಮನ ಜಯಂತಿ ಕಾರ್ಯಕ್ರಮವನ್ನು ಶಾಸಕ ಎಸ್.ಎನ್. ಚನ್ನಬಸಪ್ಪ ಉದ್ಘಾಟಿಸಿದರು   

ಶಿವಮೊಗ್ಗ: ಸಮಾಜಮುಖಿ ಚಿಂತಕ ವೇಮನ ಮನುಕುಲದ ಏಳಿಗೆಗಾಗಿ ಶ್ರಮಿಸಿದ ಮಹನೀಯರು. ಇವರ ಸಾಹಿತ್ಯ ಸಾರ್ವಕಾಲಿಕ ಮೌಲ್ಯಗಳನ್ನು ಹೊಂದಿವೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ವತಿಯಿಂದ ಇಲ್ಲಿನ ಕುವೆಂಪು ರಂಗಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ವೇಮನ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಾಸ್ತವ ಬದುಕಿಗೆ ಹತ್ತಿರವಾಗಿದ್ದ ವೇಮನ ಅವರು ಸರಳ ಭಾಷೆಯಲ್ಲಿ ಕವಿತೆಗಳನ್ನು ರಚಿಸಿದ್ದಾರೆ. ಅವರ ಮೌಲ್ಯಯುತ ಸಾಹಿತ್ಯ ದೇಶದ ಬೇರೆಬೇರೆ ಭಾ಼ಷೆಗಳಿಗೆ ಭಾಷಾಂತರಗೊಂಡಿವೆ. ಅದೇ ರೀತಿ ಅಪಾರ ಸಂಖ್ಯೆಯ ಓದುಗರನ್ನು ತಲುಪಿದೆ. ಅವರ ಹಲವು ಪದ್ಯಗಳಲ್ಲಿನ ಬಳಕೆಯಾಗಿರುವ ಭಾಷೆ, ನುಡಿಗಟ್ಟುಗಳು ಓದುಗರನ್ನು ಸೆಳೆಯುತ್ತವೆ. ಅವುಗಳಲ್ಲಿ ವಿಶೇಷವಾಗಿ ಯೋಗ, ಬುದ್ದಿಮತ್ಯೆ ಮತ್ತು ನೈತಿಕತೆಯ ವಿಷಯಗಳು ಒಳಗೊಂಡಿವೆ ಎಂದರು.

ADVERTISEMENT

ಕವಿ ವೇಮನ ಒಂದೆಡೆ ನೆಲಸದೆ ಕಾವ್ಯ ರಚನೆ ಮತ್ತು ಯೋಗದಲ್ಲಿ ಸಾಧನೆ ಮಾಡಿದ್ದರು. ಅವರ ಕವಿತೆಗಳಲ್ಲಿ ದ್ವಂದ್ವ, ಗೂಢಾರ್ಥ ಹಾಗೂ ಧ್ವನ್ಯಾಭಿವ್ಯಕ್ತಿಯನ್ನು ಸೂಕ್ಷ್ಮವಾಗಿ ಗಮನಿಸಬಹುದು. ಕಾವ್ಯಾತ್ಮಕ ಶೈಲಿ ವೇಮನರ ಪದ್ಯಗಳ ಹಲವು ಸಾಲುಗಳು ಪ್ರಸ್ತುತ ಸಂದರ್ಭದಲ್ಲಿ ತೆಲುಗು ಆಡುಭಾಷೆಯ ನುಡಿಗಟ್ಟುಗಳಾಗಿ ಪ್ರಚಲಿತದಲ್ಲಿವೆ ಎಂದು ವಿವರಿಸಿದರು.

ಮಾನವತಾ ಧರ್ಮ, ಅತ್ಯಂತ ಉತ್ಕೃಷ್ಟ ನಿಲುವು, ವಿಶಾಲ ನೋಟ, ಉದಾರ ಚಿಂತನೆ ಹೊಂದಿದ್ದ ವೇಮನರು ವಿಶ್ವಮಾನವತೆ ಕುರಿತ ಸಂದೇಶ ಅವರ ಕೃತಿಗಳಲ್ಲಿ ಕಾಣಬಹುದು. ಸಹೋದರ ಭಾವ, ವಿಶ್ವಕುಟುಂಬ ಮತ್ತು ದೇಶಪ್ರೇಮ, ಮತ-ಭಾಷೆ-ಪಂಥಗಳ ಎಲ್ಲೆ ಮೀರಿದ ಅವರ ಚಿಂತನೆ, ಸ್ಪಷ್ಟ ನಿಲುವು ಅಸಾಮಾನ್ಯ ಎಂದರು.

ರೆಡ್ಡಿ ಸಮಾಜದ ಅಧ್ಯಕ್ಷ ಎಚ್.ಜಿ.ಭೀಮರೆಡ್ಡಿ, ಕಾರ್ಯದರ್ಶಿ ಕೆ.ಜಿ. ಶ್ರೀನಿವಾಸ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಉಮೇಶ್ ಹಾಲಾಡಿ, ನಗರಸಭೆ ಮಾಜಿ ಅಧ್ಯಕ್ಷ ಜ್ಞಾನೇಶ್ವರ್, ಶ್ರೀನಿವಾಸ ರೆಡ್ಡಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.