ADVERTISEMENT

ಕಾಶ್ಮೀರ ಭಾರತ ಮಾತೆಯ ಸಿಂಧೂರ, ಮುಟ್ಟಿದರೆ ಹುಷಾರು: ಬಿವೈಆರ್

ವಿಜಯ ತ್ರಿವರ್ಣ ಧ್ವಜಯಾತ್ರೆ, ಪಾಕಿಸ್ತಾನಕ್ಕೆ ಬಿವೈಆರ್ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 20 ಮೇ 2025, 14:18 IST
Last Updated 20 ಮೇ 2025, 14:18 IST
<div class="paragraphs"><p>ಶಿವಮೊಗ್ಗದಲ್ಲಿ ಮಂಗಳವಾರ ನಡೆದ ವಿಜಯ ತ್ರಿವರ್ಣ ಧ್ವಜ ಯಾತ್ರೆಯ ಸಭಾ ಕಾರ್ಯಕ್ರಮದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿದರು</p></div>

ಶಿವಮೊಗ್ಗದಲ್ಲಿ ಮಂಗಳವಾರ ನಡೆದ ವಿಜಯ ತ್ರಿವರ್ಣ ಧ್ವಜ ಯಾತ್ರೆಯ ಸಭಾ ಕಾರ್ಯಕ್ರಮದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿದರು

   

ಶಿವಮೊಗ್ಗ: ‘ಕಾಶ್ಮೀರ ಭಾರತ ಮಾತೆಯ ಸಿಂಧೂರ. ಅದನ್ನು ಮುಟ್ಟಲು ಬಂದರೆ ವಿಶ್ವದ ಭೂಪಟದಿಂದಲೇ ಪಾಕಿಸ್ತಾನ ಮಾಯವಾಗಲಿದೆ ಎಂಬ ಸಂದೇಶ ನಮ್ಮ ಹೆಮ್ಮೆಯ ಭಾರತೀಯ ಸೇನೆ ನೀಡಿದೆ’ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಶಿವಮೊಗ್ಗದ ನಾಗರಿಕ ವೇದಿಕೆಯಿಂದ ಮಂಗಳವಾರ ಹಮ್ಮಿಕೊಂಡಿದ್ದ ವಿಜಯ ತ್ರಿವರ್ಣ ಧ್ವಜಯಾತ್ರೆಯ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ADVERTISEMENT

‘ಆಪರೇಷನ್ ಸಿಂಧೂರ ಕಾರ್ಯಾಚರಣೆ ವೇಳೆ ಹುತಾತ್ಮರಾದ ವೀರ ಸೈನಿಕರಿಗೆ ಮತ್ತು ಪಹಲ್ಗಾಮ್‌ನಲ್ಲಿ ಭಯೋತ್ಪಾದಕರ ದಾಳಿಯಿಂದ ಮೃತಪಟ್ಟ ಪ್ರವಾಸಿಗರ ಕುಟುಂಬಕ್ಕೆ ವಿಶ್ವಾಸ ತುಂಬಲು ಈ ವಿಜಯ ಸಂಕಲ್ಪ ಯಾತ್ರೆ ಹಮ್ಮಿಕೊಂಡಿದ್ದೇವೆ’ ಎಂದರು.

‘2008ರಿಂದ 14ರವರೆಗೆ ದೇಶವನ್ನು ಆಳಿದವರು ಭಯೋತ್ಪಾದಕ ದಾಳಿಯಿಂದ ಸಾವಿರಾರು ನಾಗರಿಕರು ಮತ್ತು ಸೈನಿಕರನ್ನು ಕಳೆದುಕೊಂಡಾಗ ಬರೀ ಶಾಂತಿಮಂತ್ರ ಜಪಿಸುತ್ತಿದ್ದರು. ಆದರೆ, ಇದು ನರೇಂದ್ರ ಮೋದಿ ಯುಗ. ದೇಶದ ಹಿತದ ಪ್ರಶ್ನೆ ಬಂದಾಗ ಎಂತಹದ್ದೇ ಕ್ರಮಕ್ಕೂ ಸಿದ್ಧ ಎಂಬುದನ್ನು ಆಪರೇಷನ್ ಸಿಂಧೂರ ಕಾರ್ಯಾಚರಣೆ ಮೂಲಕ ತೋರಿಸಿಕೊಟ್ಟಿದ್ದಾರೆ’ ಎಂದು ಹೇಳಿದರು.

‘ಆಪರೇಷನ್‌ ಸಿಂಧೂರ ಕಾರ್ಯಾಚರಣೆ ಬಗ್ಗೆ ನಮ್ಮ ಮುಖ್ಯಮಂತ್ರಿ ಹಾಗೂ ಕೋಲಾರದ ಶಾಸಕರೊಬ್ಬರು ಹಗುರವಾಗಿ ಮಾತಾಡಿದ್ದಾರೆ. ಅವರ ಬಾಯಿ ಮುಚ್ಚಿಸುವ ತ್ರಿವರ್ಣ ಧ್ವಜ ಯಾತ್ರೆ ಮಾಡಿದೆ’ ಎಂದು ಹೇಳಿದರು.

ಪ್ರಾಸ್ತಾವಿಕ ಮಾತನಾಡಿದ ಪತ್ರಕರ್ತೆ ಶೋಭಾ, ‘ದೇಶದ ಒಳಗಿರುವ ಉಗ್ರಗಾಮಿಗಳ ಪತ್ತೆ ಮಾಡಿ ಅವರ ವಿರುದ್ಧ ಕ್ರಮ ಕೈಗೊಳ್ಳಲು ಈಗ ಕಾಲ ಕೂಡ ಬಂದಿದೆ. ನಮ್ಮ ಯುದ್ದ ದೇಶದ ಒಳಗಿನ ದ್ರೋಹಿಗಳ ದಮನ ಮಾಡುವುದೇ ಆಗಿದೆ’ ಎಂದರು.

ಪ್ರೊ. ಪುನಿತ್‌ಕುಮಾರ್ ಮಾತನಾಡಿ, ‘ಈ ಹಿಂದೆ ದೇಶದಲ್ಲಿ ಸಿಂಹ ಸ್ವರೂಪಿ ಸೈನ್ಯವೇ ಇದ್ದರೂ ನಾಯಕತ್ವ ಸಿಂಹದ್ದು ಆಗಿರಲಿಲ್ಲ. ಈಗ ನರೇಂದ್ರ ಮೋದಿ ಅವರ ಮೂಲಕ ಸಿಂಹದ ನಾಯಕತ್ವವೇ ಸಿಕ್ಕಿದೆ. ಭಯೋತ್ಪಾದಕ ದಾಳಿಗೆ ಬಡ್ಡಿ ಸಮೇತ ತಕ್ಕ ಉತ್ತರ ನೀಡಲಾಗಿದೆ. ರೆಫೆಲ್ ಯುದ್ಧ ವಿಮಾನ ಖರೀದಿ ಒಪ್ಪಂದ ಆದಾಗ, ಚೌಕಿದಾರ್ ಚೋರ್ ಎಂದವರು ಈಗ ಅದೇ ಚೌಕಿದಾರನ ತಾಕತ್ತು ಕಂಡು ವಿಸ್ಮಯಗೊಂಡಿದ್ದಾರೆ’ ಎಂದರು.

ಆರ್‌ಎಸ್‌ಎಸ್‌ ದಕ್ಷಿಣ ಪ್ರಾಂತ ಸಹ ಕಾರ್ಯವಾಹ ಪಟ್ಟಾಭಿರಾಮ್, ಪೂರ್ಣಾ ಭಂಡಾರ್ಕರ್ ಇದ್ದರು. ತ್ರಿವರ್ಣ ಧ್ವಜ ಹಿಡಿದು ಸಾಗಿ ಬಂದವರಲ್ಲಿ ಪಕ್ಷದ ಮುಖಂಡರಾದ ವಿರುಪಾಕ್ಷಪ್ಪ, ಸುರೇಖಾ ಮುರಳೀಧರ್, ಸುನೀತಾ ಅಣ್ಣಪ್ಪ, ಸುವರ್ಣಾ ಶಂಕರ್, ಮಾಲ್ತೇಶ್, ಬಳ್ಳೇಕೆರೆ ಸಂತೋಷ್, ಶಾಂತಾ ಸುರೇಂದ್ರ, ರಶ್ಮಿ ಶ್ರೀನಿವಾಸ್, ರಮೇಶ್ ಹಾಗೂ ನಿವೃತ್ತ ಯೋಧರು, ನಿವೃತ್ತ ಶಾಲಾ– ಕಾಲೇಜುಗಳ ವಿದ್ಯಾರ್ಥಿಗಳು ಸೇರಿದ್ದರು.

ಸುರಿವ ಮಳೆಯಲ್ಲೇ ಹೆಜ್ಜೆ ಹಾಕಿದರು..

ಸುರಿಯುತ್ತಿರುವ ಭಾರೀ ಮಳೆಯನ್ನೂ ಲೆಕ್ಕಿಸದೇ ಸಾವಿರಾರು ಜನರು ತ್ರಿವರ್ಣ ಧ್ವಜ ಹಿಡಿದು ಭಾರತ ಮಾತೆಗೆ ಹಾಗೂ ಭಾರತೀಯ ಸೇನೆಯ ಯೋಧರಿಗೆ ಜಯಘೋಷ ಮಾಡುತ್ತಾ ಹೆಜ್ಜೆ ಹಾಕಿದರು. ಅವರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕ–ಯುವತಿಯರೇ ಇದ್ದರು. ವಿಜಯ ತ್ರಿವರ್ಣಧ್ವಜ ಯಾತ್ರೆ ರಾಮಣ್ಣ ಶೆಟ್ಟಿ ಪಾರ್ಕ್‌ನಿಂದ ಗಾಂಧಿ ಬಜಾರ್ ನೆಹರೂ ರಸ್ತೆ ಮೂಲಕ ಸೀನಪ್ಪ ಶೆಟ್ಟಿ ವೃತ್ತಕ್ಕೆ ಬಂದು ಅಲ್ಲಿ ಸಮಾವೇಶಗೊಂಡಿತು. ಶಾಸಕರಾದ ಎಸ್.ಎನ್.ಚನ್ನಬಸಪ್ಪ ಡಿ.ಎಸ್.ಅರುಣ್ ಡಾ.ಧನಂಜಯ ಸರ್ಜಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್‌.ಕೆ.ಜಗದೀಶ್ ಬಿಜೆಪಿ ಪ್ರಕೋಷ್ಠಗಳ ಅಧ್ಯಕ್ಷ ಎಸ್.ದತ್ತಾತ್ರಿ ಮಾಜಿ ಶಾಸಕ ಕೆ.ಜಿ.ಕುಮಾರಸ್ವಾಮಿ ಜೋರು ಮಳೆಯಲ್ಲಿ ನೆನೆಯುತ್ತಾ ತ್ರಿವರ್ಣ ಧ್ವಜ ಹಿಡಿದು ಸಾಗಿ ಬಂದರು. ಕಾರ್ಯಕ್ರಮ ನಡೆಯುವಾಗಲೂ ಮುಖಂಡರು ವೇದಿಕೆಯ ಮುಂಭಾಗದಲ್ಲಿ ಮಳೆಯನ್ನೂ ಲೆಕ್ಕಿಸದೇ ನೆಲದಲ್ಲಿಯೇ ಕುಳಿತದ್ದು ವಿಶೇಷವಾಗಿತ್ತು.

ಶಿವಮೊಗ್ಗದ ನಾಗರೀಕ ವೇದಿಕೆಯಿಂದ ಮಂಗಳವಾರ ಹಮ್ಮಿಕೊಂಡಿದ್ದ ವಿಜಯ ತ್ರಿವರ್ಣ ಧ್ವಜಯಾತ್ರೆಯ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡವರ ನೋಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.