
ಭದ್ರಾವತಿ: ಇಲ್ಲಿನ ವಿಐಎಸ್ಎಲ್ ಕಾರ್ಖಾನೆಯ ಪುನಃಶ್ಚೇತನಕ್ಕೆ ₹1 ಕೋಟಿ ದೇಣಿಗೆ ನೀಡುವುದಾಗಿ ಶಾಸಕ ಬಿ.ಕೆ.ಸಂಗಮೇಶ್ವರ ತಮ್ಮ ಬಳಿ ವಾಗ್ದಾನ ಮಾಡಿದ್ದಾರೆ ಎಂದು ಸಿರಿಗೆರೆ ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಭದ್ರಾವತಿಯ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಭಾನುವಾರ ರಾತ್ರಿ ಆಶೀರ್ವಚನದಲ್ಲಿ ಈ ವಿಚಾರ ಪ್ರಸ್ತಾಪಿಸಿದ ಸ್ವಾಮೀಜಿ, ವಿಐಎಸ್ಎಲ್ ಕಾರ್ಖಾನೆಯ ಪುನಶ್ಚೇತನಕ್ಕೆ ಸಿರಿಗೆರೆ ಮಠದಿಂದ ₹5 ಕೋಟಿ ಕೊಡುವುದಾಗಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಹೇಳಿದ್ದೇನೆ. ಅದರಲ್ಲಿ ₹1 ಕೋಟಿ ಕೊಡುವುದಾಗಿ ಬಿ.ಕೆ.ಸಂಗಮೇಶ್ವರ ಹೇಳಿದ್ದಾರೆ. ಉಳಿದ ₹4 ಕೋಟಿ ಹೊಂದಿಸಲು ತರಳಬಾಳು ಹುಣ್ಣಿಮೆಗೆ ಸಂಗ್ರಹಿಸಿದ ದೇಣಿಗೆಯನ್ನು ಬಳಸಲಾಗುವುದು. ಅದರಲ್ಲಿ ಹಣ ಕಡಿಮೆ ಆದಲ್ಲಿ ಜೋಳಿಗೆ ಹಿಡಿದು ಉಳಿದ ಮೊತ್ತ ಸಂಗ್ರಹಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಹುಣ್ಣಿಮೆ ಮಹೋತ್ಸವದ ವೇದಿಕೆಯಲ್ಲಿದ್ದ ಬಿ.ಕೆ.ಸಂಗಮೇಶ್ವರ ಒಪ್ಪಿಗೆ ಸೂಚಿಸಿದರು.
ತರಳಬಾಳು ಹುಣ್ಣಿಮೆಯ ಮೊದಲ ದಿನದ ಕಾರ್ಯಕ್ರಮದಲ್ಲಿ ಶನಿವಾರ ಪಾಲ್ಗೊಂಡಿದ್ದ ಕೇಂದ್ರ ಉಕ್ಕು ಹಾಗೂ ಭಾರಿ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಭಾರತೀಯ ಉಕ್ಕು ಪ್ರಾಧಿಕಾರದಿಂದ ₹5,000 ಕೋಟಿ ವೆಚ್ಚದಲ್ಲಿ ವಿಐಎಸ್ಎಲ್ ಕಾರ್ಖಾನೆ ಪುನಶ್ಚೇತನಗೊಳಿಸುವುದಾಗಿ ಘೋಷಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.