ಭದ್ರಾವತಿ: ವಿಐಎಎಲ್ ಕಾರ್ಖಾನೆಯ ಪುನಃಶ್ಚೇತನಕ್ಕೆ ಕೇಂದ್ರ ಸರ್ಕಾರ ಮುಂದಾಗದಿದ್ದರೆ ನಾಡಿನ ಮಠಾಧೀಶರು ಜೋಳಿಗೆ ಹಿಡಿದು ಹಣ ಸಂಗ್ರಹ ಮಾಡುತ್ತೇವೆ ಎಂದು ಹೊಸದುರ್ಗ ಕನಕ ಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ ಹೇಳಿದರು.
ವಿಐಎಸ್ ಎಲ್ ಕಾರ್ಖಾನೆ ಉಳಿಸಿ ಎಂದು ಆಗ್ರಹಿಸಿ ಕಾರ್ಖಾನೆಯ ಆವರಣದಲ್ಲಿ ನಡೆಯುತ್ತಿರುವ ಗುತ್ತಿಗೆ ಕಾರ್ಮಿಕ ಚಳುವಳಿಗೆ ಭಾನುವಾರ 67 ನೇ ದಿನ ತುಂಬಿದೆ. ಅದರ ಅಂಗವಾಗಿ ಆರಂಭಿಸಲಾದ ರಕ್ತ ಪತ್ರ ಚಳವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
‘ಕಾರ್ಖಾನೆಯನ್ನು ಉಳಿಸಿ ಬೆಳೆಸಲು ನಿಯೋಗ ತೆರಳಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡೋಣ. ಅವರು ಸ್ಪಂದಿಸದಿದ್ದರೆ ಮುಂದಿನ ತೀರ್ಮಾನ ಕೈಗೊಳ್ಳೋಣ’ ಎಂದರು.
ಕಾರ್ಖಾನೆ ಉಳಿಸಲು ಎಲ್ಲ ಮಠಾಧೀಶರು ಜೋಳಿಗೆ ಹಿಡಿಯಲಿದ್ದಾರೆ. ಕಾರ್ಖಾನೆಗಾಗಿ ನಡೆಯುತ್ತಿರುವ ಹೋರಾಟ 67 ನೇ ದಿನಕ್ಕೆ ಕಾಲಿಟ್ಟಿದೆ. ಈ ಹೋರಾಟ ಇಷ್ಟೊಂದು ದಿನಗಳ ಕಾಲ ನಿರಂತರವಾಗಿ ನಡೆದರೂ ಸರ್ಕಾರ ಕ್ರಮ ಕೈಗೊಳ್ಳದಿರುವುದು ದುರಂತ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ವಿಐಎಸ್ಎಲ್ ಕಾರ್ಮಿಕರ ಬೇಡಿಕೆಗೆ ಸ್ಪಂದಿಸಿ ಹೋರಾಟಕ್ಕೆ ಇತಿಶ್ರೀ ಹೇಳಲು ಮಧ್ಯಪ್ರವೇಶಿಸಬೇಕು. ಕೇಂದ್ರ ಸರ್ಕಾರ ₹1000 ಕೋಟಿ ಹಣ ನೀಡಿ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಬೇಕು ಎಂದು ಒತ್ತಾಯಿಸಿದರು.
ರಕ್ತದಲ್ಲಿ ಬರೆದು ಕಳಿಸಿದರು: ಕಾರ್ಮಿಕರು ಮತ್ತು ಮಹಿಳೆಯರು ಸಿರಂಜ್ ನಲ್ಲಿ ರಕ್ತ ತೆಗೆದು ಲೋಟದಲ್ಲಿ ಸಂಗ್ರಹಿಸಿ ನಂತರ ಪೋಸ್ಟ್ಕಾರ್ಡ್ನಲ್ಲಿ ‘save VISL’ ಎಂದು ಬರೆದು ರಕ್ತದಲ್ಲಿಯೇ ಹೆಬ್ಬಟ್ಟು ಒತ್ತಿ ಪ್ರಧಾನಿ ನರೇಂದ್ರ ಮೋದಿ ವಿಳಾಸಕ್ಕೆ ಹಾಕಿದರು. ಎಲ್ಲರ ಕಾರ್ಡ್ಗಳನ್ನು ಸಂಗ್ರಹಿಸಿ ಅಂಚೆ ಡಬ್ಬಿಗೆ
ಹಾಕಲಾಯಿತು.
‘Save VISL’ ಎಂದು ಬರೆದು ಫೋಟೊ ತೆಗೆದು ಫೇಸ್ ಬುಕ್ ಮತ್ತು ಟ್ವೀಟರ್ ನಲ್ಲಿ ಹಾಕಿ ಅಭಿಯಾನ ನಡೆಸುವುದಾಗಿ ಕಾರ್ಮಿಕರು ಮಾಧ್ಯಮದವರಿಗೆ ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.