ಕಾರ್ಗಲ್:ಹೊರ ಜಿಲ್ಲೆಗಳ ಪ್ರವಾಸಿಗರಿಗೆ ಜೋಗ ಜಲಪಾತ ವೀಕ್ಷಣೆ ನಿರ್ಬಂಧಿಸಿ, ಜಲಪಾತ ಬಳಿ ಹೋಟೆಲ್ನಲ್ಲಿ ತಂಗಿದ್ದ ಪ್ರವಾಸಿಗರು ಮತ್ತು ವಾಹನಗಳಿಗೆ ಪ್ರವೇಶ ನೀಡುತ್ತಿರುವುದನ್ನು ಖಂಡಿಸಿ ನೂರಾರು ಪ್ರವಾಸಿಗರು ಶನಿವಾರ ಜೋಗ ಪ್ರಾಧಿಕಾರದ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆಗೆ ಮುಂದಾದರು.
ಹಲ್ಲೆ ಕಾರಣ ಆಗಸ್ಟ್ 15ರವರೆಗೂ ವಾರಾಂತ್ಯದಲ್ಲಿ ಜೋಗ ಜಲಪಾತ ವೀಕ್ಷಣೆ ನಿರ್ಬಂಧಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಜಲಪಾತ ವೀಕ್ಷಣೆಗೆ ಶನಿವಾರನೂರಾರು ಪ್ರವಾಸಿಗರು ಬಂದಿದ್ದರು.ಆದರೆ, ಅಧಿಕಾರಿಗಳುಕೋವಿಡ್ ನೆಗೆಟಿವ್ ವರದಿ ಇದ್ದರೆ ಮಾತ್ರ ಪ್ರವೇಶಾವಕಾಶ ಕಲ್ಪಿಸುವುದಾಗಿ ಹೇಳಿದರು. ಇದಕ್ಕೆಪ್ರವಾಸಿಗರು ಆಕ್ರೋಶ ವ್ಯಕ್ತಪಡಿಸಿದರು. ಭದ್ರತಾ ಸಿಬ್ಬಂದಿ ಯಾರನ್ನೂ ಒಳಗೆ ಬಿಡಲಿಲ್ಲ. ಆದರೆ, ಜಲಪಾತದ ಒಳಗಡೆಯ ಹೋಟೆಲ್ನಲ್ಲಿ ತಂಗಿರುವ ಪ್ರವಾಸಿಗರು ಮತ್ತು ವಾಹನಗಳಿಗೆ ಪ್ರವೇಶ ನೀಡುತ್ತಿರುವುದು ಗಮನಕ್ಕೆ ಬಂದ ಕೂಡಲೇ ಪ್ರವಾಸಿಗರುಭದ್ರತಾ ಸಿಬ್ಬಂದಿ ಮೇಲೆ ಹಲ್ಲೆಗೆ ಮುಂದಾದರು.
ತಕ್ಷಣ ಸ್ಥಳಕ್ಕೆ ಬಂದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ನಿರ್ಮಲಾ ಮತ್ತು ಸಿಬ್ಬಂದಿ ಪರಿಸ್ಥಿತಿಯನ್ನು ಹತೋಟಿಗೆ ತಂದು ಮೇಲಧಿಕಾರಿಗಳಿಗೆ ವಿಷಯ ತಿಳಿಸಿದರು.
‘ವಿಚಾರ ತಿಳಿದ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಶನಿವಾರ ಮತ್ತು ಭಾನುವಾರ ಜಲಪಾತ ವೀಕ್ಷಣೆಗೆ ಸಂಪೂರ್ಣ ನಿಷೇಧ ಹೇರಿ ಆದೇಶ ನೀಡಿದರು’ ಎಂದು ಪ್ರವಾಸೋದ್ಯಮ ಅಧಿಕಾರಿಗಳು ತಿಳಿಸಿದರು.
ಇದರಿಂದ ಕೋವಿಡ್ ನೆಗೆಟಿವ್ ವರದಿ ಇದ್ದ ಪ್ರವಾಸಿಗರಿಗೂ ಪ್ರವೇಶ ಸಿಗದೆ ಬೇಸರಗೊಂಡರು.
‘ಜನಪ್ರತಿನಿಧಿಗಳು ಕ್ರಮ ಕೈಗೊಂಡುಜಲಪಾತ ವೀಕ್ಷಣೆಗೆ ಅವಕಾಶ ನೀಡಬೇಕು’ ಎಂದು ಹುಬ್ಬಳ್ಳಿಯ ಪ್ರವಾಸಿಗ ಮಲ್ಲಪ್ಪ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.