ತೀರ್ಥಹಳ್ಳಿ: ಪಟ್ಟಣದ ಮೇಲಿನ ಕುರುವಳ್ಳಿಯ ಅಕೇಶಿಯ ತೋಪಿನಲ್ಲಿ ಶನಿವಾರ ಬೆಳಗಿನಜಾವ ಕಾಡಾನೆ ಕಾಣಿಸಿಕೊಂಡಿದೆ. ಇದು ಭಯದ ವಾತಾವರಣ ಸೃಷ್ಟಿಸಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಆನೆ ಹಿಡಿಯಲು ಕಾರ್ಯಾಚರಣೆ ನಡೆಸಿದ್ದಾರೆ.
ಶುಕ್ರವಾರ ರಾತ್ರಿ 10 ಗಂಟೆಗೆ ತಾಲ್ಲೂಕಿನ ಕೆಳಕೆರೆ ಗ್ರಾಮದಲ್ಲಿ ಆನೆ ಕಾಣಿಸಿಕೊಂಡಿದೆ. ನಂತರ ಸುಮಾರು 5 ಕಿ.ಮೀ. ನಡೆದು ಪಟ್ಟಣದ ಕುರುವಳ್ಳಿ, ತುಂಗಾ ನದಿಯ ದಡದ ಮೇಲೆ ನಡೆದು ಹುಣಸವಳ್ಳಿ ಗ್ರಾಮದಲ್ಲಿ ವಿಶ್ರಾಂತಿ ಪಡೆದಿದೆ. ಯಾವುದೇ ಅನಾಹುತ ಸಂಭವಿಸಿಲ್ಲ. ಆನೆ ನೋಡಿದ ಭಯದಲ್ಲಿ ಚರಂಡಿಗೆ ಬಿದ್ದು ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಸುಮಾರು 10 ವರ್ಷದ ಗಂಡು ಆನೆ ಇದಾಗಿದೆ. ಚಿಕ್ಕಮಗಳೂರು ಜಿಲ್ಲೆ ಎನ್.ಆರ್. ಪುರ ಸಮೀಪದ ಭದ್ರಾ ಅಭಯಾರಣ್ಯದಲ್ಲಿ ಗುಂಪಿನಿಂದ ಬೇರ್ಪಟ್ಟು ಆನೆ ಇತ್ತ ಬಂದಿದೆ. ನಾಲ್ಕು ದಿನಗಳ ಹಿಂದೆ ಮೃಗವಧೆ ಬಳಿ ಕಾಣಿಸಿಕೊಂಡಿತ್ತು. ಈಗ ತೀರ್ಥಹಳ್ಳಿ ಪಟ್ಟಣಕ್ಕೆ ಹೊಂದಿಕೊಂಡಿರುವ ಅಕೇಶಿಯಾ ತೋಪಿನಲ್ಲಿ ಆಶ್ರಯ ಪಡೆದಿದೆ ಎಂದು ಡಿಎಫ್ಒ ಶಿವಶಂಕರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಸುತ್ತಲೂ ಜನವಸತಿ ಪ್ರದೇಶ ಇರುವುದರಿಂದ ಅರಿವಳಿಕೆ ನೀಡಿ ಸೆರೆ ಹಿಡಿಯುವ ಕೆಲಸ ಮಾಡಿಲ್ಲ. ಆನೆಯನ್ನು ಬಂದ ಹಾದಿಯಲ್ಲಿಯೇ ವಾಪಸ್ ಕಳಹಿಸುವ ಕಾರ್ಯದಲ್ಲಿ ತೊಡಗಿದ್ದೇವೆ. ಡ್ರೋಣ್ ಕ್ಯಾಮೆರಾ ಮೂಲಕ ಆನೆಯ ಚಲನವಲನದ ಮೇಲೆ ನಿಗಾ ಇಡಲಾಗಿದೆ. ಜನರು ಭಯ ಪಡುವ ಅಗತ್ಯವಿಲ್ಲ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.