ಸೊರಬ: ಮಹಿಳೆಗೆ ಹಲ್ಲೆ ನಡೆಸಿ ದರೋಡೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಸೊರಬ ಪೊಲೀಸರು ಬಂಧಿಸಿದ್ದಾರೆ.
ಪ್ರಶಾಂತ್ ಅಕ್ಕಿಆಲೂರು (20), ಪ್ರಶಾಂತ್ ಜಡೆ(20), ಗಣೇಶ್ ಮೈಸೂರು(22) ಬಂಧಿತ ಆರೋಪಿಗಳು. ಇನ್ನು ನಾಲ್ವರು ಪರಾರಿಯಾಗಿದ್ದಾರೆ.
ತಾಲ್ಲೂಕಿನ ಛತ್ರದಹಳ್ಳಿ ಗ್ರಾಮದಲ್ಲಿ ಒಂಟಿಮನೆಯಲ್ಲಿ ಲಲಿತಮ್ಮ ಅವರ ಪತಿ ಮತ್ತು ಮಗನ ಜತೆಗೆ ವಾಸವಾಗಿದ್ದರು. ಅ.14ರಂದು ಮಗ ಹೊರಗೆ ಹೋಗಿದ್ದರು. ಪತಿ ಮನೆಯೊಳಗೆ ಇದ್ದರು. ಈ ಸಂದರ್ಭದಲ್ಲಿ ಆರೇಳು ಮಂದಿ ಇದ್ದ ತಂಡವೊಂದು ಬಂದಿದ್ದು, ‘ಮಾರಾಟ ಮಾಡುವ ಹಸುಗಳಿವೆಯೇ’ ಎಂದು ಕೇಳಿದ್ದರು. ‘ಇಲ್ಲ’ ಎಂದು ಪ್ರತಿಕ್ರಿಯಿಸಿ ಲಲಿತಮ್ಮ ಹೊರಗೆ ಬರುತ್ತಿದ್ದಂತೆ ಹಲ್ಲೆ ನಡೆಸಿ ಮೈ ಮೇಲಿದ್ದ ಚಿನ್ನಾಭರಣಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದರು.
ಸೊರಬ ಠಾಣೆಯ ಸಿಪಿಐ ಮರುಳಸಿದ್ಧಪ್ಪ ಹಾಗೂ ಪಿಎಸ್ ಐ ಡಿ.ಬಿ.ಪ್ರಶಾಂತ್ ಕುಮಾರ್ ಅವರ ತಂಡ ತನಿಖೆ ಆರಂಭಿಸಿತ್ತು. ತಾಲ್ಲೂಕಿನ ಸಂಪಗೋಡು ಗ್ರಾಮದ ಬಳಿ ಅನುಮಾನಾಸ್ಪದವಾಗಿ ನಿಂತಿದ್ದ ಆಮ್ನಿ ವಾಹನದಲ್ಲಿ ಕುಳಿತಿದ್ದ ಮೂವರನ್ನು ವಿಚಾರಣೆ ಮಾಡಿದಾಗ ಈ ಪ್ರಕರಣದ ಬಗ್ಗೆ ಬಾಯಿ ಬಿಟ್ಟಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನಾಯಾಂಗ ಬಂಧನ ವಿಧಿಸಲಾಗಿದೆ. ಉಳಿದ ನಾಲ್ವರು ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.