ಶಿವಮೊಗ್ಗ: ಸೊರಬ ತಾಲ್ಲೂಕಿನ ಕುರುವಳ್ಳಿಯಲ್ಲಿ ಮಗ ಮಾಡಿದ ತಪ್ಪಿಗೆ ಸಹೋದರಿ ಮತ್ತು ತಾಯಿ ಗ್ರಾಮಸ್ಥರಿಂದ ಬಹಿಷ್ಕಾರ ಶಿಕ್ಷೆಗೊಳಗಾದ ಆರೋಪ ಕೇಳಿಬಂದಿದೆ. ತಮಗೆ ನ್ಯಾಯ ಕೊಡಿಸುವಂತೆ ಸಂತ್ರಸ್ತರು ಮಂಗಳವಾರ ಜಿಲ್ಲಾಧಿಕಾರಿ ಮೊರೆ ಹೋಗಿದ್ದಾರೆ.
ಎರಡು ವರ್ಷಗಳ ಹಿಂದೆ ಭೂಮಿ ಹುಣ್ಣಿಮೆ ದಿನ ಸೊರಬದ ಕುರುವಳ್ಳಿ ಗ್ರಾಮದಲ್ಲಿ ಅಪಘಾತ ನಡೆದು ಟಿವಿಎಸ್ ಸವಾರ ಮಂಜುನಾಥ್ ಸಾವನ್ನಪ್ಪಿದ್ದರು. ಆದರೆ ತನಿಖೆಯ ವೇಳೆ ಪ್ರಕರಣ ತಿರುವು ಪಡೆದು ಅದು ಅಪಘಾತವಲ್ಲ ಕೊಲೆ ಎಂಬುದು ಸಾಬೀತಾಗಿತ್ತು. ಪ್ರಕರಣದಲ್ಲಿ ಮಂಜುನಾಥ್ ಅಳಿಯ ಪ್ರವೀಣ್ ಶಿಕ್ಷೆಗೆ ಒಳಗಾಗಿದ್ದಾನೆ.
ಪ್ರವೀಣ್ ಮಾಡಿದ ತಪ್ಪಿಗೆ ಆತನ ತಾಯಿ ಹಾಗೂ ಸಹೋದರಿ ಕುರುವಳ್ಳಿಯಲ್ಲಿ ಬಹಿಷ್ಕಾರ ಶಿಕ್ಷೆಗೆ ಗುರಿಯಾಗಿದ್ದಾರೆ ಎನ್ನಲಾಗಿದೆ. ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರನ್ನು ಭೇಟಿ ಮಾಡಿದ ಅಮ್ಮ, ಮಗಳು, ‘ತಾವು ಊರಿನಲ್ಲಿ ಯಾರನ್ನಾದರೂ ಮಾತನಾಡಿಸಿದರೆ ₹ 1,000 ದಂಡ ವಿಧಿಸಲಾಗುತ್ತದೆ. ಆ ಬಗ್ಗೆ ದೇವಸ್ಥಾನದಲ್ಲಿ ಗಂಟೆ ಬಾರಿಸಲಾಗಿದೆ. ಜಮೀನಿಗೆ ನೀರು, ವಿದ್ಯುತ್ ಮತ್ತು ಮೂಲ ಸೌಕರ್ಯ ಕಡಿತಗೊಳಿಸಲಾಗಿದೆ’ ಎಂದು ಅಲವತ್ತುಕೊಂಡರು.
‘ಸಂಬಂಧಪಟ್ಟ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಪರಿಶೀಲಿಸುವಂತೆ ಸೂಚಿಸಿದ್ದೇನೆ. ಕುಟುಂಬಕ್ಕೆ ರಕ್ಷಣೆ ನೀಡಲು ಹೇಳಿದ್ದೇನೆ’ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾಧ್ಯಮದವರಿಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.