ADVERTISEMENT

ಕುಪ್ಪಳಿ: 20ರಿಂದ ರಾಷ್ಟ್ರಮಟ್ಟದ ಕಾರ್ಯಾಗಾರ ಆಯೋಜನೆ

ಕುವೆಂಪು ಸಾಹಿತ್ಯ ಮತ್ತು ಸಕಾಲೀನತೆ ಕುರಿತು ವಿಚಾರ ಮಂಡನೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2021, 1:22 IST
Last Updated 17 ಜನವರಿ 2021, 1:22 IST

ತೀರ್ಥಹಳ್ಳಿ: ಕುವೆಂಪು ಕನ್ನಡ ಅಧ್ಯಯನ ಕೇಂದ್ರ ಕುಪ್ಪಳಿ, ಕನ್ನಡ ವಿಶ್ವವಿದ್ಯಾಲಯ ಹಂಪಿ, ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಹಾಗೂ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಸಹಯೋಗದಲ್ಲಿ ಜನವರಿ 20 ಹಾಗೂ 21ರಂದು ಕುಪ್ಪಳಿಯ ಹೇಮಾಂಗಣದಲ್ಲಿ ‘ಕುವೆಂಪು ಸಾಹಿತ್ಯ ಮತ್ತು ಸಮಕಾಲೀನತೆ’ ಕುರಿತು ರಾಷ್ಟ್ರಮಟ್ಟದ ಕಾರ್ಯಾಗಾರ ನಡೆಯಲಿದೆ ಎಂದು ಕಮ್ಮಟದ ನಿರ್ದೇಶಕ ಡಾ.ಬಿ.ಎಂ. ಪುಟ್ಟಯ್ಯ ತಿಳಿಸಿದ್ದಾರೆ.

ಕಾರ್ಯಾಗಾರವನ್ನು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಮನು ಬಳಿಗಾರ್ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಸ.ಚಿ. ರಮೇಶ ವಹಿಸುವರು. ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ್ ಆಶಯ ನುಡಿಗಳನ್ನಾಡುವರು. ಕುವೆಂಪು ಪ್ರತಿಷ್ಠಾನದ ಸಮಕಾರ್ಯದರ್ಶಿ ಕಡಿದಾಳ್ ಪ್ರಕಾಶ್ ಉಪಸ್ಥಿತರಿರುವರು ಎಂದು ಅವರು ತಿಳಿಸಿದ್ದಾರೆ.

ಗೋಷ್ಠಿಯಲ್ಲಿ ‘ಶ್ರೀ ರಾಮಾಯಣ ದರ್ಶನಂ ಸಮಕಾಲೀನ ವಿಚಾರಗಳು’ ಕುರಿತು ಡಾ.ರಾಜೆಂದ್ರ ಬುರಡಿಕಟ್ಟಿ, ‘ಕುವೆಂಪು ಸಾಹಿತ್ಯ ವಿಮರ್ಶೆ’ಕುರಿತು ಡಾ.ಎಚ್. ಶಶಿಕಲಾ, ‘ಕುವೆಂಪು ಕಥೆಗಳ ಮಾದರಿ’ ಬಗ್ಗೆ ಡಾ.ನಾಗಭೂಷಣ ಬಗ್ಗನಡು, ‘ಕುವೆಂಪು ಕಾವ್ಯ: ಸಮಕಾಲೀನತೆ’ ಕುರಿತು ಕಮ್ಮಟ ನಿರ್ದೇಶಕ ಡಾ.ಬಿ.ಎಂ. ಪುಟ್ಟಯ್ಯ, ‘ಕುವೆಂಪು ಸಾಹಿತ್ಯದಲ್ಲಿ ಪರಿಸರ’ದ ಬಗ್ಗೆ ಡಾ.ಲಿಂಗಪ್ಪ ಗೋನಾಳ್ ಹಾಗೂ ‘ಕುವೆಂಪು ನಾಟಕಗಳಲ್ಲಿ ಸಮಕಾಲೀನ ಪ್ರಜ್ಞೆ’ ಕುರಿತು ಡಾ.ಭಾರತೀದೇವಿ ಪಿ. ವಿಷಯ ಮಂಡಿಸುವರು. ನಂತರ ಕಮ್ಮಟಾರ್ಥಿಗಳಿಂದ ಸಾಮೂಹಿಕ ಚರ್ಚೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಜನವರಿ 21ರಂದು ‘ಕುವೆಂಪು ಸಾಹಿತ್ಯ ಮತ್ತು ಸಮಕಾಲೀನ ಬದುಕು’ ಗೋಷ್ಠಿಯಲ್ಲಿ ಸಂವಾದಕರಾಗಿ ಡಾ.ಕಲ್ಪನಾ ಎಚ್.ಕೆ., ಕರಗುಂದ ರಾಮಣ್ಣ, ಶಿವಾನಂದ ಕರ್ಕಿ, ಡಾ.ಬಿ. ಗಣಪತಿ, ಡಾ.ರತ್ನಾಕರ ಸಿ., ಡಾ.ರಾಜಶೇಖರ ಹಳೇಮನೆ, ಡಾ.ಪ್ರಕಾಶ ಮರಗನಹಳ್ಳಿ, ಡಾ.ಕೆ.ಎನ್. ಮಂಜುನಾಥ್ ಹಾಗೂ ಡಾ.ದೊರೇಶ್ ಪಾಲ್ಗೊಳ್ಳುವರು.

ಅಂದು ಸಂಜೆ ನಡೆಯಲಿರುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ ಡಾ.ಎ. ಸುಬ್ಬಣ್ಣ ರೈ ವಹಿಸುವರು. ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ.ಎಚ್.ಎಸ್. ರಘುನಾಥ್ ಸಮಾರೋಪ ಭಾಷಣ ಮಾಡುವರು. ಡಾ.ಬಿ.ಎಂ. ಪುಟ್ಟಯ್ಯ ಉಪಸ್ಥಿತರಿರುವರು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.