ಹುನಗುಂದ: ‘ಈ ಬಾರಿಯ ಮುಂಗಡ ಪತ್ರದಲ್ಲಿ (ಬಜೆಟ್) ರಾಜ್ಯ ಸರ್ಕಾರ ಕ್ಷೌರಿಕ ಸಮುದಾಯವನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ. ಮುಂದಿನ ದಿನಗಳಲ್ಲಿ ಸಮಾಜಕ್ಕೆ ನ್ಯಾಯ ಒದಗಿಸದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು’ಎಂದು ತಂಗಡಗಿಯ ಅನ್ನದಾನಿ ಹಡಪದ ಅಪ್ಪಣ್ಣ ಮಹಾಸ್ವಾಮಿಗಳು ಎಚ್ಚರಿಸಿದರು.
ಇಲ್ಲಿನ ನಿರೀಕ್ಷಣಾ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಜೆಟ್ನಲ್ಲಿ ವಿವಿಧ ಸಮುದಾಯಗಳಿಗೆ ನೂರಾರು ಕೋಟಿ ಅನುದಾನ ನೀಡಲಾಗಿದೆ. ಆದರೆ ನಮ್ಮ ಸಮುದಾಯಕ್ಕೆ ನಯಾಪೈಸೆ ನೀಡಿಲ್ಲ. ರಾಜ್ಯದಲ್ಲಿ 18 ಲಕ್ಷದಷ್ಟು ಜನಸಂಖ್ಯೆ ಹೊಂದಿರುವ ಕ್ಷೌರಿಕ ಸಮಾಜದವರ ಹಿತರಕ್ಷಣೆಗೆ ನಿಗಮ ಮಂಡಳಿ ಸ್ಥಾಪನೆ ಮಾಡಲು ಕೋರಿದ್ದೆವು. ಹಡಪದ ಸಮಾಜವನ್ನು ಪ್ರವರ್ಗ 1 ರಲ್ಲಿ ಸೇರಿಸುವಂತೆ ಹಲವು ಬಾರಿ ಮುಖ್ಯಮಂತ್ರಿ ಅವರನ್ನು ಖುದ್ದಾಗಿ ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ಹಾಗಿದ್ದರೂ ಮನವಿಗೆ ಸ್ಪಂದಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಬಸವ ತತ್ವದಲ್ಲಿ ನಂಬಿಕೆಯಿಟ್ಟು ಕಾಯಕದಲ್ಲಿ ನಿರತರಾದವರು ನಾವು. ಹೀನ ಕಾರ್ಯದಲ್ಲಿ ನಮ್ಮನ್ನು ತೋಡಗಿಸಿಕೊಂಡಿದ್ದರೂ ನಾವು ಸೌಲಭ್ಯದಿಂದ ವಂಚಿತರಾಗಿದ್ದೇವೆ. ನಾವು ಲಿಂಗಾಯತ ಸಮಾಜವಾಗಿರುವುದು ದುರಂತ ಎಂದರು.
ಪ್ರಸ್ತುತ ದಿನಗಳಲ್ಲಿ ಕೊರೊನಾ ವೈರಸ್ ತನ್ನ ಕಬಂಧಬಾಹುವನ್ನು ಚಾಚಿದ್ದು ಹಡಪದ ಸಮಾಜದವರು ಕ್ಷೌರ ಮಾಡುವಾಗ ಕೈಗೆ ಗ್ಲೌಸ್ ಮತ್ತು ಮಾಸ್ಕ್ ಹಾಕಿಕೊಂಡು ಕೆಲಸ ಮಾಡಬೇಕು. ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳವ ಜೊತಗೆ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕಿವಿಮಾತು ಹೇಳಿದರು.
ಮುಖಂಡರಾದ ಅಮೀನಪ್ಪ ಹಡಪದ, ಮಹಾಂತೇಶ ಕೊಪ್ಪದ, ಮಂಜುನಾಥ ಕಿರಸೂರ, ಅಮರೇಶ ಹಡಪದ ಇತರರು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.