ADVERTISEMENT

ಆರ್ಥಿಕ ದುಸ್ಥಿತಿಯತ್ತ ದೇಶ-: ಆತಂಕ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2013, 8:41 IST
Last Updated 20 ಸೆಪ್ಟೆಂಬರ್ 2013, 8:41 IST

ತುಮಕೂರು: ಭಾರತದ ಅರ್ಥಿಕ ಸ್ಥಿತಿ ತೀರ ಹದಗೆಟ್ಟಿದ್ದು, ವಿದೇಶಿ ವ್ಯಾಮೋಹ, ಕೊಳ್ಳುಬಾಕ ಸಂಸ್ಕೃತಿ­ಯಿಂದ ದೇಶ ಅರ್ಥಿಕ ಗಟ್ಟಿತನ ಕಳೆದುಕೊಳ್ಳುತ್ತಿದೆ ಎಂದು ಅರ್ಥ­ಶಾಸ್ತ್ರಜ್ಞ ಡಾ.ಅಬ್ದುಲ್ ಅಜೀಜ್ ಅಭಿಪ್ರಾಯಪಟ್ಟರು.

ನಗರದ ಶ್ರೀದೇವಿ ಸ್ನಾತಕೋತ್ತರ ಕಾಲೇಜು ಪ್ರಥಮ ವರ್ಷದ ವಿದ್ಯಾರ್ಥಿ­ಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿ, ಯಾರದೋ ಒತ್ತಡಕ್ಕೆ ಒಳಗಾಗಿ ದೇಶದ ಆರ್ಥಿಕ ನೀತಿ ರೂಪಿಸುತ್ತಿದ್ದು, ಈಗಲೇ ಎಚ್ಚೆತ್ತು­ಕೊಳ್ಳದಿದ್ದರೆ ಉಳಿಗಾಲವಿಲ್ಲ ಎಂದು ಎಚ್ಚರಿಸಿದರು.

ದೇಶದ ಅಭಿವೃದ್ಧಿಗೆ ರಾಜಕೀಯ, ಸಾಮಾಜಿಕ ನೀತಿಗಳಿಗಿಂತ ಅರ್ಥಿಕ ನೀತಿ ಮಹತ್ವ ಪಡೆದುಕೊಳ್ಳುತ್ತದೆ. ದೇಶದ ಅರ್ಥಿಕ ಸ್ಥಿತಿಗತಿಯ ಬಗ್ಗೆ ಸ್ಪಷ್ಟ ತಿಳವಳಿಕೆ ಅಗತ್ಯವಿದೆ. ರಾಜಕೀಯ ಲಾಭಕ್ಕಾಗಿ ಅನಗತ್ಯ ಸಬ್ಸಿಡಿ ನೀಡಿ ಜನರ ದುಡಿಯುವ ಶಕ್ತಿ ಕಡಿಮೆ ಮಾಡುವ ಜೊತೆಗೆ ಆದಾಯಕ್ಕಿಂತ ಹೆಚ್ಚಿನ ಖರ್ಚು ಮಾಡಿ ಅರ್ಥಿಕ ಹಿಂಜರಿಕೆಗೆ ಕಾರಣವಾಗುತ್ತಿದ್ದಾರೆ ಎಂದು ಟೀಕಿಸಿದರು.

ಭಾರತ ಅರ್ಥಿಕ ಬಿಕ್ಕಟ್ಟಿನಿಂದ ಹೊರಬರಬೇಕಾದರೆ ಯುವ ಜನರು ಮನಸ್ಸು ಮಾಡಬೇಕು. ಪೆಟ್ರೋ­ಲಿಯಂ ಉತ್ಪನ್ನಗಳ ಬಳಕೆ ಕಡಿಮೆ ಮಾಡಿ ಸಾರ್ವಜನಿಕ ಸಾರಿಗೆ ಬಳಸುವುದು ಅಭ್ಯಾಸ ಮಾಡಿ­ಕೊಳ್ಳ­ಬೇಕು. ಚಿನ್ನದ ಮೇಲಿನ ವ್ಯಾಮೋಹ ಬಿಡಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿ­ಗಳಿಗೆ ಶಿಕ್ಷಕರು ಕೆಲ ಮೌಲ್ಯಗಳನ್ನು ರೂಢಿಸಿಕೊಳ್ಳುವಂತೆ ಮಾಡಬೇಕೆಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.