ಹುಳಿಯಾರು: ತಾಂತ್ರಿಕ ದೋಷದಿಂದ ನಿಂತು ಹೋದ ಅಂಗವಿಕಲರ ವೇತನವನ್ನು ಮತ್ತೆ ಪಡೆಯುವುದಕ್ಕಾಗಿ 3 ತಿಂಗಳಿನಿಂದ ಕಚೇರಿಗಳಿಗೆ ಅಲೆದು ಸುಸ್ತಾದ ಅಂಗವಿಕಲನ ವ್ಯಥೆ ಇದು.
ಮೇಲನಹಳ್ಳಿ ಗ್ರಾಮದ ರಾಘವೇಂದ್ರನಿಗೆ ಮಾತು ಬರುವುದಿಲ್ಲ. ಅಲ್ಲದೆ ನಿಲ್ಲಲು ಸ್ವಾಧೀನವೇ ಇಲ್ಲ. ಮನೆಯಲ್ಲಿ ಕಿತ್ತು ತಿನ್ನುವ ಬಡತನವಿದ್ದು, 3 ವರ್ಷಗಳ ಹಿಂದೆ ಸರ್ಕಾರದ ವತಿಯಿಂದ ಅಂಗವಿಕಲ ವೇತನ ಮುಂಜೂರಾಯಿತು.
ಈತ ಅಪ್ರಾಪ್ತನಾದ ಕಾರಣ ಮೈನರ್ ಗಾರ್ಡಿಯನ್ ಆಗಿ ತಂದೆ ಶಿವರುದ್ರಯ್ಯ ಹಣ ಪಡೆಯುತ್ತಿದ್ದರು. ಶೇ. 80ಕ್ಕೂ ಹೆಚ್ಚು ಅಂಗವಿಕಲತೆ ಇರುವ ಕಾರಣ 2010 ರಿಂದ ರೂ. 1 ಸಾವಿರ ವೇತನ ಬರುತಿತ್ತು.
ಅನಾರೋಗ್ಯಕ್ಕೆ ತುತ್ತಾಗಿ ಶಿವರುದ್ರಯ್ಯ ಆಗಸ್ಟ್ 2011ರಲ್ಲಿ ಮರಣಕ್ಕೆ ತುತ್ತಾದರು. ಮಗನ ಅಂಗವಿಕಲ ವೇತನ ಪಡೆಯುತ್ತಿದ್ದ ತಂದೆ ನಿಧನರಾದ ತಾಂತ್ರಿಕ ಕಾರಣ ನೀಡಿದ ಅಧಿಕಾರಿಗಳು ವೇತನ ನಿಲ್ಲಿಸಿದ್ದಾರೆ. ತಾಯಿ ಸಿದ್ದಗಂಗಮ್ಮ ತನ್ನ ಪತಿಯ ಮರಣ ಪ್ರಮಾಣ ಪತ್ರ ಸಮೇತ ಅರ್ಜಿ ನೀಡಿ ನಿರಂತರವಾಗಿ ಅಧಿಕಾರಿಗಳ ಬಳಿಗೆ ಅಲೆಯುತ್ತಿದ್ದಾರೆ.
`ಹಲವು ಬಾರಿ ಅಧಿಕಾರಿಗಳನ್ನು ಭೇಟಿ ಮಾಡಿದ್ದೇನೆ. ಬರೀ ಭರವಸೆ ನೀಡುತ್ತಾರೆ. ನ್ಯಾಯ ಸಿಕ್ಕಿಲ್ಲ~ ಎನ್ನುತ್ತಾರೆ ತಾಯಿ ಸಿದ್ದಗಂಗಮ್ಮ. ಇದು ಬರೀ ರಾಘವೇಂದ್ರನ ಕಥೆಯಲ್ಲ. ಇಂತಹ ಸಾಕಷ್ಟು ಮಂದಿ ಅಂಗವಿಕಲರಿಗೆ ಅಧಿಕಾರಿ ವರ್ಗ ಸ್ಪಂದಿಸುತ್ತಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.