ADVERTISEMENT

ಇವರಿಗೆ ಬೀದಿ ಪಾಲಾಗುವ ಭೀತಿ !

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2011, 7:25 IST
Last Updated 5 ಮಾರ್ಚ್ 2011, 7:25 IST
ಇವರಿಗೆ ಬೀದಿ ಪಾಲಾಗುವ ಭೀತಿ !
ಇವರಿಗೆ ಬೀದಿ ಪಾಲಾಗುವ ಭೀತಿ !   

ತುರುವೇಕೆರೆ: ಪಟ್ಟಣದ ಹೊರವಲಯದಲ್ಲಿ ಕೊಡಗೀಹಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಾಣವಾಗುತ್ತಿರುವ ಪಾಲಿಟೆಕ್ನಿಕ್ ಕಾಲೇಜು ಕಟ್ಟಡದ ಮುಂದಿರುವ ಗುಡಿಸಲುಗಳು ಎತ್ತಗಂಡಿಯಾಗಲಿದ್ದು ಇಲ್ಲಿರುವ 4 ಕುಟುಂಬಗಳು ಬೀದಿಗೆ ಬೀಳುವ ಭೀತಿಯಲ್ಲಿವೆ.

ಕೊಡಗೀಹಳ್ಳಿ ಸರ್ಕಾರಿ ಶಾಲೆ ಹಿಂಭಾಗದಲ್ಲಿ ಪಾಲಿಟೆಕ್ನಿಕ್ ಕಾಲೇಜಿನ ನಿರ್ಮಾಣ ಕಾಮಗಾರಿ ತ್ವರಿತ ಗತಿಯಿಂದ ಸಾಗಿದೆ. ಕಾಲೇಜಿಗೆ ಎಂದು ಗುರುತಿಸಿರುವ ಜಾಗದಲ್ಲಿ 4 ಕುಟುಂಬಗಳು 2-3 ದಶಕಗಳಿಂದ ಗುಡಿಸಲು ಹಾಕಿಕೊಂಡು ವಾಸಿಸುತ್ತಿವೆ. ಒಟ್ಟಾರೆ 4 ಕುಟುಂಬಗಳಿಂದ 12 ಜನರಿದ್ದಾರೆ.

ಕೂಲಿ ಕಾರ್ಮಿಕರಾಗಿರುವ ಇವರಿಗೆ ಗುರುತಿನ ಚೀಟಿ, ಪಡಿತರ ಚೀಟಿ ಸೌಲಭ್ಯ ನೀಡಲಾಗಿದೆ. ಈಗ ಕೆಲವು ಅಧಿಕಾರಿಗಳು ಗುಡಿಸಲು ತೆರವು ಮಾಡಬೇಕು ಎಂದು ಹೇಳುತ್ತಿದ್ದು ಈ ನಿವಾಸಿಗಳನ್ನು ಚಿಂತೆಗೀಡು ಮಾಡಿದೆ. ಮಗುವಾಗಿದ್ದಾಗಿನಿಂದ ನಾನು ಇಲ್ಲೇ ಆಡಿ ಬೆಳೆದಿದ್ದೇನೆ. ಈಗ ಇಲ್ಲಿಂದ ನಮ್ಮನ್ನು ಖಾಲಿ ಮಾಡಿಸಿದರೆ ನಾವು ಎಲ್ಲಿ ಹೋಗುವುದು? ಬೇರೆ ಜಾಗ ಕೊಡುತ್ತೇವೆ ಎಂದು ಹೇಳುತ್ತಾರೆ. ಆದರೆ ಈವರೆಗೆ ನಮಗೆ ಜಾಗ ಕೊಟ್ಟಿಲ್ಲ, ತಲೆ ಮೇಲೆ ಸೂರು ಕಳೆದುಕೊಂಡು ಏನು ಮಾಡುವುದು? ಎಂದು ಇಲ್ಲಿನ ನಿವಾಸಿ ಸುಜಾತ ಕಣ್ಣೀರು  ಹಾಕುತ್ತಾರೆ.

ಓಟು ಕೇಳಲು ಬರುವ ಮಂದಿಯೆಲ್ಲಾ ಬೇರೆ ಜಾಗ ಕೊಡಿಸುವ ಮಾತಾಡುತ್ತಾರೆ, ಆದರೆ ಈವರೆಗೆ ಯಾರೊಬ್ಬರೂ ನಮ ಬಗ್ಗೆ ಗಮನ ಹರಿಸಿಲ್ಲ ಎಂದು ತುಳಸಮ ಆಕ್ರೊಶ ವ್ಯಕ್ತಪಡಿಸುತ್ತಾರೆ. ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ತಹಸೀಲ್ದಾರ್ ಟಿ.ಆರ್.ಶೋಭಾ ಈ ವಿಷಯ ನನ್ನ ಗಮನಕ್ಕೆ ಬಂದಿಲ್ಲ. ಕಾನೂನು ಚೌಕಟ್ಟಿನಲ್ಲಿ ಅಗತ್ಯ ಸಹಾಯ ನೀಡುವ ಬಗ್ಗೆ ಪರಿಶೀಲಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.