ADVERTISEMENT

ಉದ್ಯೋಗ ಖಾತ್ರಿ ಅಕ್ರಮ: ತನಿಖೆಗೆ ಸಮಿತಿ

​ಪ್ರಜಾವಾಣಿ ವಾರ್ತೆ
Published 1 ಮೇ 2011, 10:55 IST
Last Updated 1 ಮೇ 2011, 10:55 IST

ತುಮಕೂರು: ಜಿಲ್ಲೆಯಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಅನುಷ್ಠಾನದಲ್ಲಾಗಿರುವ ಅಕ್ರಮಗಳ ಪತ್ತೆ, ಕಾಮಗಾರಿಗಳ ಗುಣಮಟ್ಟ ಪರಿಶೀಲನೆಗಾಗಿ ಜಿಲ್ಲಾ ಪಂಚಾಯಿತಿ ಸದಸ್ಯರನ್ನು ಒಳಗೊಂಡ ತನಿಖಾ ಸಮಿತಿ ರಚಿಸುವುದಾಗಿ ಜಿ.ಪಂ. ಅಧ್ಯಕ್ಷ ಡಾ.ರವಿ ಶನಿವಾರ ಪ್ರಕಟಿಸಿದರು.

ನೂತನ ಜಿ.ಪಂ. ಮೊಲದ ಸಾಮಾನ್ಯ ಸಭೆಯಲ್ಲೇ ಆಡಳಿತಾರೂಢ ಜೆಡಿಎಸ್‌ ಸದಸ್ಯರೇ ಉದ್ಯೋಗ ಖಾತರಿ ಯೋಜನೆ, ಕುಡಿಯುವ ನೀರಿನ ಫಿಲ್ಟರ್‌ ಯೋಜನೆ ಮತ್ತಿತರ ಅಕ್ರಮಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ಇದಕ್ಕೆ ಬಿಜೆಪಿ, ಕಾಂಗ್ರೆಸ್‌ ಸದಸ್ಯರು ದನಿಗೂಡಿಸಿದರು.

ಉದ್ಯೋಗ ಖಾತರಿ ಅಕ್ರಮ ಪ್ರಸ್ತಾಪಿಸಿದ ಜೆಡಿಎಸ್‌ನ ಸುಧಾಕರ್‌ಲಾಲ್‌, ಯೋಜನೆಯ ಮಾರ್ಗದರ್ಶನ ಅನುಸರಿಸಿದರೆ ಕೂಲಿಕಾರರು ಇಂಥ ಸಂಕಷ್ಟಕ್ಕೆ ಸಿಲುಕುತ್ತಿರಲಿಲ್ಲ. ಕಾಮಗಾರಿ ಮುಗಿದಿದ್ದರೂ ಕೂಲಿ ಹಣ ನೀಡಿಲ್ಲ ಎಂದರು. ಇದಕ್ಕೆ ದನಿಗೂಡಿಸಿದ ಸದಸ್ಯೆ ಜಾನಮ್ಮ, ಮಲ್ಲಿಗೆರೆ ಗ್ರಾ.ಪಂ.ನಲ್ಲಿ ಶಾಲಾ ಆವರಣ ಕಾಮಗಾರಿ ಪೂರ್ಣಗೊಂಡಿದ್ದರೂ ಪಿಡಿಒ ಚೆಕ್‌ ನೀಡದೆ ಸತಾಯಿಸುತ್ತಿದ್ದಾರೆ ಎಂದರು. ಪಾವಗಡಲ್ಲಾಗಿರುವ ಅವ್ಯವಹಾರಗಳ ಬಗ್ಗೆ ಸದಸ್ಯ ಆಂಜಿನಪ್ಪ ಗಮನ ಸೆಳೆದರು.

`ಉದ್ಯೋಗಕ್ಕೆ ಕತ್ತರಿ, ಗುತ್ತಿಗೆಗೆ ಖಾತರಿ~ ಎಂದು ಚುಚ್ಚಿದ ಹಿರಿಯ ಸದಸ್ಯ ವೈ.ಎಚ್‌.ಹುಚ್ಚಯ್ಯ, ಯೋಜನೆಯಲ್ಲಿ ಭಾರೀ ಅವ್ಯವಹಾರ ನಡೆದಿದೆ. ಎಂಐಎಸ್‌ ಫೀಡ್‌ ಮಾಡುವವರು ಸಾವಿರಗಟ್ಟಲೆ ಲಂಚ ಪಡೆಯುತ್ತಿದ್ದಾರೆ, ಅಧಿಕಾರಿಗಳು, ಗುತ್ತಿಗೆದಾರರು ಶಾಮೀಲಾಗಿ ಹಣ ಲೂಟಿ ಹೊಡೆಯುತ್ತಿದ್ದಾರೆ. ಎಲ್ಲ ಕಾಮಗಾರಿಗಳನ್ನು `ಮೂರನೇ ವ್ಯಕ್ತಿ~ ಪರಿಶೀಲನೆಗೆ ಒಪ್ಪಿಸಬೇಕು ಎಂದು ಪಟ್ಟುಹಿಡಿದರು.

ಪಾವಗಡದ ರಾಯಲುಚೆರ್ಲು ಗ್ರಾ.ಪಂ. ವ್ಯಾಪ್ತಿಯಲ್ಲಿ ಕಾಮಗಾರಿ ಮಾಡದೇ ಬಿಲ್‌ ಪಾಸ್‌ ಮಾಡಲಾಗಿದೆ. ತಿರುಮಣಿಯಲ್ಲಿ ರಸ್ತೆ, ಚೆಕ್‌ಡ್ಯಾಂ ಮಾಡಿರುವುದಾಗಿ ತೋರಿಸಿ ಲಕ್ಷಾಂತರ ಹಣ ಪಡೆಯಲಾಗಿದೆ. ಆದರೆ ಇಲ್ಲಿ ರಸ್ತೆ, ಚೆಕ್‌ಡ್ಯಾಂ ನಿರ್ಮಿಸಿಲ್ಲ. ಇದೇ ಗ್ರಾಮದಲ್ಲಿ ಒಂದೇ ಚೆಕ್‌ಡ್ಯಾಂಗೆ ಎರಡು ಬಾರಿ ಹಣ ಪಡೆದಿರುವುದನ್ನು ದಾಖಲೆಗಳ ಸಮೇತ ಸಭೆಯ ಮುಂದಿಟ್ಟರು. ಇದಕ್ಕೆಲ್ಲ ಅಧಿಕಾರಿಗಳೇ ಕಾರಣ ಎಂದು ಆರೋಪಿಸಿದರು. ಇದಕ್ಕೆ ಕಾಂಗ್ರೆಸ್‌ನ ಶಾಂತಲಾ ರಾಜಣ್ಣ ಕೂಡ ದನಿಗೂಡಿಸಿದರು.

ಸದಸ್ಯರ ಆರೋಪಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ಯೋಜನೆ ಕಾಮಗಾರಿಗಳ ತಪಾಸಣೆ, ಮೇಲ್ವಿಚಾರಣೆಗಾಗಿ ಜಿ.ಪಂ. ಸದಸ್ಯರನ್ನೊಳಗೊಂಡ ಸಮಿತಿ ರಚಿಸಲು ಹಾಗೂ ಪಾವಗಡದಲ್ಲಿ ನಡೆದಿರುವ ಅವ್ಯವಹಾರಗಳ ತನಿಖೆಗೆ ಪ್ರತ್ಯೇಕ ತಂಡ ಕಳುಹಿಸುವುದಾಗಿ ಪ್ರಕಟಿಸಿದರು.

ಬಿಪಿಎಲ್‌ ಪಟ್ಟಿಯಲ್ಲಿರುವವರು ಉದ್ಯೋಗ ಖಾತರಿ ಯೋಜನೆಯಡಿ ಶೌಚಾಲಯ ನಿರ್ಮಿಸಿಕೊಳ್ಳಲು `ಮ್ಯಾಚಿಂಗ್‌ ಗ್ರಾಂಟ್‌~ ಕೊಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಉದ್ಯೋಗ ಇಳಿಮುಖ
ಕಳೆದ ಸಾಲಿಗೆ ಹೋಲಿಸಿದರೆ ಈ ವರ್ಷ ಉದ್ಯೋಗ ಖಾತರಿ ಯೋಜನೆಯ ಕಾರ್ಮಿಕ ಅಯವ್ಯಯ ಇಳಿಮುಖಗೊಂಡಿದೆ. ಮೊದಲಿಗೆ 160 ಕೋಟಿ ಹಂಚಿಕೆ ಮಾಡಿದ ಕೇಂದ್ರ ಸರ್ಕಾರವು ಕೊನೆಗೆ ಇದನ್ನು ಕೇವಲ 103.99 ಕೋಟಿಗೆ ಇಳಿಸಿದೆ ಎಂದು ಸಿಇಒ ಶಿವಯೋಗಿ ಕಳಸದ ಸಭೆಗೆ ತಿಳಿಸಿದರು.

ಸಿಗದ ಬೆಂಬಲ
ಜಿ.ಪಂ.ನಲ್ಲಿ ಕೆಲಸ ನಿರ್ವಹಿಸುತ್ತಿರುವ ದಿನಗೂಲಿ ಡಿ ದರ್ಜೆ ಕೆಲಸಗಾರರ ಕಾಯಂಗೆ ಬಹುತೇಕ ಸದಸ್ಯರು ಒತ್ತಾಯಿಸಿದರು. ತಾಂತ್ರಿಕ ಕಾರಣಗಳಿಂದಾಗಿ ಕಾಯಂ ಮಾಡಲು ಸಾಧ್ಯವಿಲ್ಲ ಎಂದು ಉಪ ಕಾರ್ಯದರ್ಶಿ ಯಾಲಕ್ಕಿಗೌಡ ತಿಳಿಸಿದರು.

ನೀರಿನ ಫಿಲ್ಟರ್‌ ಗೋಲ್‌ಮಾಲ್‌!
ಸರ್ಕಾರಿ ಆಸ್ಪತ್ರೆಗಳು, ಶಾಲೆಗಳಿಗೆ ನೀಡಲಾಗುತ್ತಿರುವ ಕುಡಿಯುವ ನೀರಿನ ಫಿಲ್ಟರ್‌ ಯೋಜನೆಯಲ್ಲಿ ಗೋಲ್‌ಮಾಲ್‌ ನಡೆದಿದೆ ಎಂದು ಸದಸ್ಯ ಆನಂದ ರವಿ ಆರೋಪಿಸಿದರು. ಈ ವಿಷಯದಲ್ಲಿ ಜಿಲ್ಲಾ ಆರೋಗ್ಯಧಿಕಾರಿ ಹಾಗೂ ಸದಸ್ಯರ ನಡುವೆ ಮಾತಿನ ಚಕಮಕಿಯೂ ನಡೆಯಿತು. ಅಧಿಕಾರಿಗಳು ಕಮೀಷನ್‌ ಪಡೆದು ಕಳಪೆ ಗುಣಮಟ್ಟ ಫಿಲ್ಟರ್‌ ನೀಡುತ್ತಿದ್ದಾರೆ ಎಂದು ದೂರಿದರು.

ಯುರೇಕಾ ಕಂಪೆನಿಗೆ ಫಿಲ್ಟರ್‌ ಗುತ್ತಿಗೆ ನೀಡಿದ್ದು, ಐದು ವರ್ಷ ಕಾಲ ನಿರ್ವಹಣೆಯ ಅನುದಾನವನ್ನು ಆ ಕಂಪೆನಿಗೆ ಭರಿಸಲಾಗುತ್ತಿದೆ. ಕೆಲವು ಕಡೆಗಳಲ್ಲಿ ಫಿಲ್ಟರ್‌ ಸರಿಯಾಗಿಲ್ಲ ಎಂಬ ದೂರುಗಳು ಬಂದಿವೆ ಎಂದು ಡಿಡಿಪಿಐ ಹುಚ್ಚಯ್ಯ ಸಭೆಗೆ ತಿಳಿಸಿದರು. ಫಿಲ್ಟರ್‌ ನೀಡಿರುವ ಆಸ್ಪತ್ರೆ, ಶಾಲೆಗಳಿಗೆ ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರು ಇನ್ನೆರಡು ದಿನಗಳಲ್ಲಿ ಭೇಟಿ ನೀಡಿ ವರದಿ ನೀಡುವಂತೆ ಅಧ್ಯಕ್ಷರು ಸೂಚಿಸಿದರು.

 ಶೌಚ ಹಗರಣ ಗದ್ದಲ
112 ಗ್ರಾ.ಪಂ.ಗಳಲ್ಲಿ ಸಂಪೂರ್ಣ ಸ್ವಚ್ಛತಾ ಯೋಜನೆ ಜಾರಿಯಲ್ಲಾಗಿರುವ ಹಗರಣ ತೀವ್ರ ಚರ್ಚೆಗೆ ಗ್ರಾಸವಾಯಿತು. ರೂ. 1 ಕೋಟಿ ವೆಚ್ಚದ ಯೋಜನೆಯಲ್ಲಿ 42 ಲಕ್ಷ ಹಣ ದುರುಪಯೋಗವಾಗಿದೆ. ಅಕ್ರಮಕ್ಕೆ ಕಾರಣರಾದ ಅಧಿಕಾರಿಗಳು, ಗುತ್ತಿಗೆ ಪಡೆದ ಟಿಎಸ್‌ಎಂಎಸ್‌ ಏಜೆನ್ಸಿ ವಿರುದ್ಧ ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಸದಸ್ಯರಾದ ಆನಂದ ರವಿ. ಸುಧಾಕರ್‌ ಲಾಲ್‌, ಶಾಂತಲಾ ರಾಜಣ್ಣ, ಹೆಬ್ಬಾಕ ರವಿ ಮುಂತಾದವರು ಪ್ರಶ್ನಿಸಿದರು.

ಆರ್‌ಡಿಪಿಆರ್‌ ಇಲಾಖೆಯ ಕಾರ್ಯದರ್ಶಿ ಒಳಗೊಂಡ ತಂಡವು ಹಗರಣದ ತನಿಖೆ ನಡೆಸುತ್ತಿದೆ. ಇನ್ನೊಂದು ತಿಂಗಳಲ್ಲಿ ತನಿಖಾ ತಂಡ ವರದಿ ನೀಡುವ ಸಾಧ್ಯತೆ ಇದೆ ಎಂದು ಸಿಇಒ ತಿಳಿಸಿದರು.

ಕೆರಳಿಸಿದ `ಗಂಗಾ ಕಲ್ಯಾಣ~
ಗಂಗಾ ಕಲ್ಯಾಣ ಯೋಜನೆಯ ಕೊಳವೆ ಬಾವಿಗಳಿಗೆ ವಿದ್ಯುದ್ದೀಕರಣ ನಿಧಾನವಾಗುತ್ತಿರುವ ಬಗ್ಗೆ ಸದಸ್ಯರು ಗಂಭೀರವಾಗಿ ಪ್ರಶ್ನಿಸಿದರು. ರಾಜ್ಯ ಮಟ್ಟದಲ್ಲಿ ಯೋಜನೆ ಅನುಷ್ಠಾನ, ರೂಪುರೇಷೆ ನಿರ್ಣಯವಾಗುತ್ತದೆ.

ಬೆಸ್ಕಾಂಗೆ ಗುರಿ ನೀಡಿದ್ದರೂ ಅದು ಕಾರ್ಯಗತ ಆಗುತ್ತಿಲ್ಲ ಎಂದು ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಅಧಿಕಾರಿ ಉತ್ತರ ಸದಸ್ಯರನ್ನು ಕೆರಳಿಸಿತು. ಸಭೆಗೆ ಅಧಿಕಾರಿಗಳು ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ವೈ.ಎಚ್‌.ಹುಚ್ಚಯ್ಯ ದೂರಿದರು. ಪ್ರತಿ ಹದಿನೈದು ದಿನಕ್ಕೆ ಒಮ್ಮೆ ಯೋಜನೆಯ ಪ್ರಗತಿ ಬಗ್ಗೆ ಜಿ.ಪಂ.ಗೆ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಅಧ್ಯಕ್ಷರು ಸೂಚಿಸಿದರು.

ಕರುಣಾ ಟ್ರಸ್ಟ್‌ನಿಂದ ವಾಪಸ್‌
ಪಟ್ಟನಾಯಕನಹಳ್ಳಿ ಸರ್ಕಾರಿ ಆಸ್ಪತ್ರೆಯನ್ನು ಕರುಣಾ ಟ್ರಸ್ಟ್‌ಗೆ ನಿರ್ವಹಣೆಗೆ ನೀಡಲಾಗಿದ್ದು. ಎಂಬಿಬಿಎಸ್‌ ವೈದ್ಯರನ್ನು ತಿಂಗಳು ಕಳೆದರೂ ನೇಮಿಸಿಲ್ಲ. ಇದರಿಂದ ಜನರಿಗೆ ತೊಂದರೆಯಾಗುತ್ತಿದೆ ಎಂದು ಸದಸ್ಯ ಸಿ.ಆರ್‌.ಉಮೇಶ್‌ ದೂರಿದರು. ಹದಿನೈದು ದಿನದಲ್ಲಿ ವೈದ್ಯರನ್ನು ನೇಮಿಸದಿದ್ದರೆ ಟ್ರಸ್ಟ್‌ ನಿರ್ವಹಣೆಯಿಂದ ಆಸ್ಪತ್ರೆಯನ್ನು ವಾಪಸ್‌ ಪಡೆಯಲು ಸಭೆಯಲ್ಲಿ ನಿರ್ಣಯಿಸಲಾಯಿತು.

ಮುದಿಗೆರೆ ಕಾವಲ್‌ ಭೂ ಸ್ವಾಧೀನ ಪ್ರಕ್ರಿಯೆ ಆರಂಭಗೊಂಡ ನಂತರ ಪ್ರಭಾವಿ ವ್ಯಕ್ತಿಗಳು ಭೂ ಖರೀದಿ ಮಾಡುತ್ತಿದ್ದು, ನಿಯಮ ಮೀರಿ ಆಸ್ತಿ ನೋಂದಣಿ ಮಾಡಲಾಗುತ್ತಿದೆ ಎಂದು ಉಮೇಶ್‌ ದೂರಿದರು.ಕೈಗಾರಿಕಾ ಷೆಡ್‌ಗಳು ಖಾಲಿ ಬಿದ್ದಿರುವಾಗ ಮತ್ತೆ ಭೂ ಸ್ವಾಧೀನದ ಅಗತ್ಯವೇನಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.