ADVERTISEMENT

ಎಪಿಎಂಸಿಗಳಿಂದ ಕೃಷಿ ವಲಯ ತಲ್ಲಣ: ಶೋಭಾ

​ಪ್ರಜಾವಾಣಿ ವಾರ್ತೆ
Published 27 ಜನವರಿ 2012, 11:05 IST
Last Updated 27 ಜನವರಿ 2012, 11:05 IST
ಎಪಿಎಂಸಿಗಳಿಂದ ಕೃಷಿ ವಲಯ ತಲ್ಲಣ: ಶೋಭಾ
ಎಪಿಎಂಸಿಗಳಿಂದ ಕೃಷಿ ವಲಯ ತಲ್ಲಣ: ಶೋಭಾ   

ತುಮಕೂರು: ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿನ ನ್ಯೂನ್ಯತೆಗಳು ಕೃಷಿ ವಲಯದ ತಲ್ಲಣಕ್ಕೆ ಕಾರಣವಾಗಿದೆ ಎಂದು ಸಚಿವ ಶೋಭಾ ಕರಂದ್ಲಾಜೆ ಅಭಿಪ್ರಾಯಪಟ್ಟರು.

ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ನಗರದ ಮಹಾತ್ಮಾಗಾಂಧಿ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ನಮ್ಮದು ಕೃಷಿ ಪ್ರಧಾನ ದೇಶವಾಗಿದ್ದರೂ ಕೃಷಿಗೆ ಹೆಚ್ಚು ಆದ್ಯತೆ ಸಿಕ್ಕಿಲ್ಲ. ಅತಿ ಯಾಂತ್ರೀಕರಣದಿಂದಾಗಿ ಕೃಷಿ ವಲಯ ತನ್ನ ಮೂಲ ಜೀವಸತ್ವವನ್ನೇ ಕಳೆದುಕೊಂಡಿದೆ. ಸ್ವಾತಂತ್ರ್ಯಾನಂತರ ಪಂಚವಾರ್ಷಿಕ ಯೋಜನೆಗಳಲ್ಲಿ ಕೈಗಾರಿಕೆ, ವಾಣಿಜ್ಯ, ತಂತ್ರಜ್ಞಾನ, ರಕ್ಷಣಾ ಕ್ಷೇತ್ರಗಳಿಗೆ ಹೆಚ್ಚು ಆದ್ಯತೆ ದೊರೆಯಿತು ಎಂದು ನುಡಿದರು.

ನಿರೀಕ್ಷಿತ ಪ್ರಗತಿ, ಅಗತ್ಯ ಸೌಲಭ್ಯ ದೊರೆಯದೆ ರೈತರು ಹತಾಶನಾಗುತ್ತಿದ್ದಾರೆ. ನಿರೀಕ್ಷಿತ ಪ್ರಗತಿ, ಅಗತ್ಯ ಸೌಲಭ್ಯ ದೊರೆಯದೆ ನಗರ ಪ್ರದೇಶಕ್ಕೆ ವಲಸೆ ಬರುತ್ತಿದ್ದಾರೆ. ಇಂಥ ಬೆಳವಣಿಗೆಗಳಿಂದ ಗ್ರಾಮೀಣ ಭಾಗಗಳು ಸೊರಗುತ್ತಿವೆ. ಬೇಸಾಯಕ್ಕೆ ಮಾನವ ಶ್ರಮ ಅಲಭ್ಯವಾಗುತ್ತಿದೆ. ಮತ್ತೊಂದೆಡೆ ನಗರ ಪ್ರದೇಶದಲ್ಲಿ ನಿರುದ್ಯೋಗ, ಕೊಳಚೆ ಪ್ರದೇಶಗಳು ಹೆಚ್ಚುತ್ತಿವೆ. ನಗರ ಪ್ರದೇಶದ ಕಾರ್ಮಿಕರ ಮಕ್ಕಳಲ್ಲಿ ಶೇ. 38ಕ್ಕೂ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಜಿಲ್ಲೆ ಅಭಿವೃದ್ಧಿ, ನೀರಾವರಿ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಜಿಲ್ಲೆಯ 11 ರಾಜ್ಯ ಹೆದ್ದಾರಿಗಳು, 304 ಜಿಲ್ಲಾ ಮುಖ್ಯರಸ್ತೆಗಳ ನಿರ್ವಹಣೆಗೆ ಸರ್ಕಾರ ರೂ. 200 ಕೋಟಿಗೂ ಹೆಚ್ಚು ಅನುದಾನ ನೀಡಿದೆ. ಹೇಮಾವತಿ ನಾಲಾ ವಲಯದಿಂದ 1.15 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಜಿಲ್ಲೆಯ 254 ಕೆರೆಗಳನ್ನು ರೂ. 50 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಿದರು.

ನಗರದ ಅಮಾನಿಕೆರೆಯನ್ನು ಪ್ರವಾಸೋದ್ಯಮ ತಾಣವಾಗಿ ರೂಪಿಸಲು ಹೇಮಾವತಿ ನೀರು ತುಂಬಿಸಲಾಗುತ್ತಿದೆ. ಅಮಾನಿಕೆರೆ ಉದ್ಯಾನವನ್ನು ನಗರಾಭಿವೃದ್ಧಿ ಪ್ರಾಧಿಕಾರ ರೂ. 1.40 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸುತ್ತಿದೆ. ದೇವರಾಯನದುರ್ಗ, ಸಿದ್ದರಬೆಟ್ಟದಲ್ಲಿ ಯಾತ್ರಿ ನಿವಾಸ ನಿರ್ಮಾಣ, ಎಡೆಯೂರು ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ ಎಂದರು.

ಶಾಸಕ ಎಸ್.ಶಿವಣ್ಣ, ನಗರಸಭೆ ಅಧ್ಯಕ್ಷೆ ಯಶೋಧ, ಜಿಲ್ಲಾಧಿಕಾರಿ ಡಾ.ರಾಜು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಆರ್.ಸುರೇಶ್ ಉಪಸ್ಥಿತರಿದ್ದರು.

ಗಣರಾಜ್ಯೋತ್ಸವ ಪ್ರಶಸ್ತಿ:
ನಗರದ ವಿವಿಧ ಸಂಸ್ಥೆಗಳು ಹಾಗೂ ಪ್ರಮುಖರಿಗೆ ಗಣರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕೆ.ಎಸ್.ಕೋಮಲಾ, ರಾಯತ್ರಿ ರವೀಶ್, ಆರ್.ಅವಿನಾಶ್, ಮುಬಾರಕ್‌ಅಲಿ, ಡಾ.ಎಂ.ಎನ್.ಸಂಜಯ್ಯ, ಮಹಮದ್ ಅಪ್ಸರ್ ಅಲಿ, ಡಾ.ಜೇಕಬ್ ಚೆರಿಯನ್, ತಿಲಕಗೌಡ, ಮಹಾಲಕ್ಷ್ಮಿ (ಶಿಕ್ಷಣ), ಶಿವಣ್ಣ (ಸಮಾಜ ಸೇವೆ), ಆಂಜನೇಯಸ್ವಾಮಿ ಕೆರೆ ಅಭಿವೃದ್ಧಿ ಸಂಘ.

ವಿವಿಧೆಡೆ ಗಣರಾಜ್ಯೋತ್ಸವ
ಅಶೋಕ ನಗರದ ಕ್ಲಾರೆನ್ಸ್ ಶಾಲೆಯಲ್ಲಿ ಗುರುವಾರ ಗಣರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣವನ್ನು ಹಿಂದೂಸ್ತಾನಿ ಗಾಯಕ ವಿದ್ವಾನ್ ಎನ್.ಬಿ.ಸವಣೂರ್ ನೆರವೇರಿಸಿದರು
.
ಶಾಲೆ ಕಾರ್ಯದರ್ಶಿ ಎಂ.ಕೆ.ಮುಸ್ತಫಾಖಾನ್, ಮುಖ್ಯ ಶಿಕ್ಷಕಿ ಎಸ್.ಎಸ್.ಭಾರತಾಂಬ, ಶಿಕ್ಷಕರಾದ ಎಂ.ಎಸ್. ಹೇಮಲತಾ, ಸಿ.ಶೋಭಾ, ಟಿ.ರೂಪಾ, ಬಿ.ಕೆ.ಸುವರ್ಣಾ ಮತ್ತಿತರರು ಉಪಸ್ಥಿತರಿದ್ದರು.

ಸೋಫಿಯಾ ಶಾಲೆ: ಉಪ್ಪಾರಹಳ್ಳಿ ಬಡಾವಣೆ ಸೋಫಿಯಾ ಶಾಲೆಯಲ್ಲಿ ಗಣರಾಜ್ಯೋತ್ಸವ ಸಮಾರಂಭವನ್ನು ಸಂಸ್ಥೆಯ ಅಧ್ಯಕ್ಷ ಅಬ್ದುಲ್ ವಾಜಿದ್ ಉದ್ಘಾಟಿಸಿದರು. ಮುಖ್ಯ ಶಿಕ್ಷಕಿ ಶ್ರೀದೇವಿ, ದೈಹಿಕ ಶಿಕ್ಷಣ ಶಿಕ್ಷಕ ಜಗದೀಶ್‌ನಾಯಕ್, ಶಿಕ್ಷಕರಾದ ಷಂಶಾದ್, ವಸುಧಾ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.