ತುಮಕೂರು: ಬುಧವಾರ ರಾತ್ರಿ ಸಮೀಪದ ಹಿರೇಹಳ್ಳಿ ಕೈಗಾರಿಕಾ ಪ್ರದೇಶದ ಹತ್ತಿರ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಎಸ್ಬಿಐ ಎಟಿಎಂ ಒಡೆದು ₹ 30 ಲಕ್ಷ ದರೋಡೆ ಮಾಡಲಾಗಿದೆ.
ಬ್ಯಾಂಕಿನ ಒಳಗಡೆ ಎಟಿಎಂ ಇದ್ದು ಗೋಡೆ ಕೊರೆದು ದರೋಡೆಕೋರರು ಎಟಿಎಂ ಒಡೆದಿದ್ದಾರೆ. ಸಿ.ಸಿ.ಟಿವಿ ಕ್ಯಾಮೆರಾ ಮತ್ತು ದೃಶ್ಯ ಸಂಗ್ರಹವಾಗುವ ಉಪಕರಣವನ್ನು ಹೊತ್ತೊಯ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಟಿಎಂಗೆ ಭದ್ರತಾ ಸಿಬ್ಬಂದಿ ಇರಲಿಲ್ಲ. ಬೆಳಿಗ್ಗೆ ಎಟಿಎಂಗೆ ಗ್ರಾಹಕರು ಹಣ ತೆಗೆದುಕೊಳ್ಳಲು ಬಂದಾಗ ವಿಷಯ ಗೊತ್ತಾಗಿದೆ. ಬಳಿಕ ಬ್ಯಾಂಕ್ ವ್ಯವಸ್ಥಾಪಕರಿಗೆ ತಿಳಿಸಿದ್ದಾರೆ. ಬ್ಯಾಂಕಿನ ಎಂದು ಕ್ಯಾತ್ಸಂದ್ರ ಠಾಣೆ ಪೊಲೀಸರು ತಿಳಿಸಿದ್ದಾರೆ.
‘ಈ ಹಿಂದೆ ಸಮೀಪದ ಮಂಚಲಕುಪ್ಪೆಯಲ್ಲಿ ಎಟಿಎಂ ದರೋಡೆ ನಡೆದಿತ್ತು. ಆಗ ಎಟಿಎಂ ಮತ್ತು ಬ್ಯಾಂಕ್ ಗೆ ಭದ್ರತಾ ಸಿಬ್ಬಂದಿ ನೇಮಿಸಿಕೊಳ್ಳಬೇಕು. ಸೂಕ್ತ ಬೆಳಕಿನ ವ್ಯವಸ್ಥೆ ಮಾಡಬೇಕು ಎಂದು ನೋಟಿಸ್ ನೀಡಲಾಗಿತ್ತು. ಅದನ್ನು ಬ್ಯಾಂಕಿನವರೂ ಸ್ವೀಕರಿಸಿದ್ದರು. ಆದರೆ, ಭದ್ರತಾ ವ್ಯವಸ್ಥೆ ಮಾಡಿರಲಿಲ್ಲ’ ಎಂದು ಕ್ಯಾತ್ಸಂದ್ರ ಠಾಣೆ ಸಬ್ ಇನ್ಸ್ಪೆಕ್ಟರ್ ರಾಜು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಬ್ಯಾಂಕಿನ ಸಹಾಯಕ ವ್ಯವಸ್ಥಾಪಕ ಮಹದೇಶ್ವರ್ ದೂರು ನೀಡಿದ್ದಾರೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ದಿವ್ಯಾ ಗೋಪಿನಾಥ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ, ತುಮಕೂರು ನಗರ ಡಿವೈಎಸ್ಪಿ ಕೆ.ಎಸ್.ನಾಗರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶ್ವಾನ ದಳ ತಂಡವೂ ಪರಿಶೀಲನೆ ನಡೆಸಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.