ADVERTISEMENT

ಎಸ್‌ಐಗೆ ಕಾನ್‌ಸ್ಟೆಬಲ್ ಕೊಲೆ ಬೆದರಿಕೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2012, 7:30 IST
Last Updated 22 ಫೆಬ್ರುವರಿ 2012, 7:30 IST

ತುಮಕೂರು: ಕಾನ್‌ಸ್ಟೆಬಲ್ ಒಬ್ಬರು ತನ್ನದೇ ಠಾಣೆಯ ಸಬ್‌ಇನ್ಸ್‌ಪೆಕ್ಟರ್‌ಗೆ ಕೊಲೆ ಬೆದರಿಕೆ ಹಾಕಿರುವ ಘಟನೆ ಶಿರಾ ನಗರ ಠಾಣೆಯಲ್ಲಿ ಈಚೆಗೆ ನಡೆದಿದ್ದು, ಹಲವು ಅನುಮಾಗಳಿಗೆ ಕಾರಣವಾಗಿದೆ. ಈ ಘಟನೆ ಹಿಂದೆ ಇಲಾಖೆಯ ಇನ್ಸ್‌ಪೆಕ್ಟರ್ ಪಾತ್ರ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಶಿರಾ ನಗರ ಠಾಣೆ ಸಬ್‌ಇನ್ಸ್‌ಪೆಕ್ಟರ್ ಸಿ.ಎನ್.ರಮೇಶ್ ಅವರಿಗೆ ಕಾನ್‌ಸ್ಟೆಬಲ್ ಕುಮಾರ್ ಲಾರಿ ಹತ್ತಿಸಿ ಸಾಯಿಸುವುದಾಗಿ ಕೊಲೆ ಬೆದರಿಕೆ ಹಾಕಿರುವ ಕುರಿತು ಅದೇ ಠಾಣೆಯಲ್ಲಿ ದೂರು ದಾಖಲಾಗಿದೆ. ಅಷ್ಟೇ ಅಲ್ಲದೇ ಅವಾಚ್ಯ ಶಬ್ದಗಳಿಂದ ನಿಂದಿಸಿ ಪೌರುಷ ತೋರಿದ್ದಾರೆ ಎಂದು ದೂರಿನಲ್ಲಿ ನಮೂದಿಸಲಾಗಿದೆ.

ಘಟನೆ ಹಿನ್ನೆಲೆ: ಫೆ. 16ರಂದು ರಾತ್ರಿ ಸಬ್‌ಇನ್ಸ್‌ಪೆಕ್ಟರ್ ರಮೇಶ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದಾಗ ಕುಡಿದು ಬಂದ ಕುಮಾರ್ ಬಾಯಿಗೆ ಬಂದಂತೆ ಅಶ್ಲೀಲವಾಗಿ ಮಾತನಾಡಿದರು ಎನ್ನಲಾಗಿದೆ. ಲಾರಿ ಹತ್ತಿಸಿ ಕೊಲೆ ಮಾಡುವುದಾಗಿ ಹೇಳಿದ್ದಾರೆ. ಇದರಿಂದ ಕಂಗಾಲಾದ ರಮೇಶ್ ಗ್ರಾಮಾಂತರ ಡಿವೈಎಸ್‌ಪಿಗೆ ಕರೆ ಮಾಡಿ ಠಾಣೆಯಲ್ಲಿ ನಡೆಯುತ್ತಿರುವ ಘಟನೆ ಕುರಿತು ಗಮನ ಸೆಳೆದಿದ್ದಾರೆ.

ಕೂಡಲೇ ಕುಮಾರ್ ಅವರನ್ನು ಬಂಧಿಸುವಂತೆ ಆದೇಶಿಸಿದ್ದಾರೆ. ಆದರೆ ಕುಮಾರ್ ಸಿಗದೆ ಪರಾರಿಯಾಗಿದ್ದಾರೆ. ಉನ್ನತ ಪೊಲೀಸರ ಸಲಹೆಯಂತೆ ರಮೇಶ್ ಕೊಲೆ ಬೆದರಿಕೆ ಹಾಕಿದ ಕುಮಾರ್ ವಿರುದ್ಧ ದೂರು ದಾಖಲಿಸಿದ್ದಾರೆ.

ವಿಪರ್ಯಾಸವೆಂದರೆ ಕುಮಾರ್ ವಿರುದ್ಧ ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಎರಡು ದಿವಸ ತಲೆಮರೆಸಿಕೊಂಡಿದ್ದ ಕುಮಾರ್ ಈಗ ಶಿರಾ ಠಾಣೆಯಲ್ಲೆ ಕೆಲಸ ಮುಂದುವರಿಸಿದ್ದಾರೆ. ಕೊಲೆ ಬೆದರಿಕೆ ಹಾಕಿದ ಕಾನ್‌ಸ್ಟೆಬಲ್‌ಗೆ ಏನನ್ನು ಹೇಳಲಾಗದೆ ತೊಳಲಾಡುವ ಸ್ಥಿತಿ ರಮೇಶ್ ಅವರದ್ದಾಗಿದೆ ಎಂದು ಠಾಣೆಯ ಮೂಲಗಳು ತಿಳಿಸಿವೆ. ಪ್ರಕರಣ ಇದೀಗ ಇಲಾಖಾ ವಿಚಾರಣೆ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.