ಕುಣಿಗಲ್: ಪಟ್ಟಣದ ಕೆ.ಆರ್.ಎಸ್.ಅಗ್ರಹಾರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇರುವ ಒಂದು ಕೊಠಡಿಯಲ್ಲಿ ಐದು ತರಗತಿಗಳ 50 ವಿದ್ಯಾರ್ಥಿಗಳು ಕಲಿಯಬೇಕಾದ ಪರಿಸ್ಥಿತಿ ಇದೆ.
1999ರಲ್ಲಿ ಪ್ರಾರಂಭವಾದ ಶಾಲೆಯಲ್ಲಿ ಮೊದಲು 10-15 ಇದ್ದ ವಿದ್ಯಾರ್ಥಿಗಳ ಸಂಖ್ಯೆ ಈಗ 50ಕ್ಕೇರಿದೆ. ಪ್ರತಿ ವರ್ಷ ವಿದ್ಯಾರ್ಥಿಗಳ ಸಂಖ್ಯೆ ಏರುತ್ತಲೇ ಇದೆ. ಆದರೂ ಕೇವಲ ಒಂದು ಚದರದ ಶಾಲೆಯಲ್ಲಿ 1ರಿಂದ 5ನೇ ತರಗತಿಗಳು ನಡೆಯುತ್ತಿವೆ. ಇಬ್ಬರು ಶಿಕ್ಷಕಿಯರು ಕಾರ್ಯನಿರ್ವಹಿಸುತ್ತಿದ್ದಾರೆ. ಒಂದೇ ಕೊಠಡಿಯಲ್ಲಿ 5 ತರಗತಿಗಳನ್ನು ನಡೆಸುವುದು ಅಸಾಧ್ಯವಾಗಿದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಆದರೆ ಪ್ರಯೋಜನವಾಗಿಲ್ಲ ಎಂಬುದು ಶಿಕ್ಷಕಿಯರ ಅಳಲು.
ಸರ್ಕಾರಿ ಶಾಲೆಗಳು ಉಳಿಯಬೇಕು. ಬಡವರು, ಹಿಂದುಳಿದವರು ಮತ್ತು ಅಲ್ಪ ಸಂಖ್ಯಾತರ ಮಕ್ಕಳು ದಾಖಲಾಗುತ್ತಿರುವ ಈ ಶಾಲೆಗೆ ಕೊಠಡಿಗಳಿಲ್ಲದೆ ಪರದಾಡುವಂತಾಗಿದೆ. ಕಾರಣ ಈ ಭಾಗದ ಸರ್ಕಾರಿ ಶಾಲೆಗೆ ಸೂಕ್ತ ಕೊಠಡಿಗಳ ವ್ಯವಸ್ಥೆ ಮಾಡಲು ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಗಮನ ಹರಿಸಬೇಕು ಎಂದು ಪೋಷಕರಾದ ಕವಿತಾ ಒತ್ತಾಯಿಸಿದರು.
ಈ ಭಾಗದ ಮಕ್ಕಳು 6ನೇ ತರಗತಿ ಓದಲು ದೂರದ ಜಿಕೆಬಿಎಂಎಸ್ ಶಾಲೆಗೆ ಸೇರಬೇಕಾಗಿದೆ. ಅಧಿಕಾರಿಗಳು ಮನಸು ಮಾಡಿದರೆ ಕಿರಿಯ ಪ್ರಾಥಮಿಕ ಶಾಲೆಯನ್ನು ಹಿರಿಯ ಪ್ರಾಥಮಿಕ ಶಾಲೆಯಾಗಿ ಮೇಲ್ದರ್ಜೆಗೇರಿಸಿದರೆ ಮಕ್ಕಳಿಗೆ ಅನುಕೂಲವಾಗುತ್ತದೆ. ಅದಕ್ಕೂ ಮೊದಲು ಸೂಕ್ತ ಕೊಠಡಿಗಳ ವ್ಯವಸ್ಥೆ ಮಾಡಬೇಕು ಎಂಬುದು ದಲಿತ ಮುಖಂಡ ರಾಜು ಅಭಿಪ್ರಾಯ.
ಸಮಸ್ಯೆ ಗಮನಕ್ಕೆ ಬಂದಿಲ್ಲ
ಶಿಕ್ಷಕರು ಶಾಲೆಗೆ ನೀರಿನ ವ್ಯವಸ್ಥೆಗೆ ಮನವಿ ಮಾಡಿದ್ದರು. ಅದನ್ನು ಪೂರೈಸಲಾಗಿದೆ. ಕೊಠಡಿಗಳ ಸಮಸ್ಯೆ ಬಗ್ಗೆ ಅಧಿಕಾರಿಗಳು ತಿಳಿಸಿಲ್ಲ. ಈ ಬಗ್ಗೆ ನೂತನ ಶಾಸಕರೊಂದಿಗೆ ಚರ್ಚಿಸಿ ಕ್ರಮ ತೆಗೆದುಕೊಳ್ಳುವುದಾಗಿ ಪುರಸಭೆ ಅಧ್ಯಕ್ಷೆ ನಳಿನಾ ತಿಳಿಸಿದರು.
-ಟಿ.ಎಚ್.ಗುರುಚರಣ್ಸಿಂಗ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.