ಹುಳಿಯಾರು: ಹೋಬಳಿಯ ಗಾಣಧಾಳು ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕದ ಕಾಮಗಾರಿ ನನೆಗುದಿಗೆ ಬಿದ್ದಿದೆ ಎಂದು ಕೆಲ ಗ್ರಾಮಸ್ಥರು ಆರೋಪಿಸಿದ್ದಾರೆ. ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನವಾಗಿದ್ದರೂ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣವಾಗಿರಲಿಲ್ಲ.
ಗಾಣಧಾಳು ಸೇರಿದಂತೆ ಸುತ್ತಮುತ್ತಲ ಜನರು ಇದೇ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗರುವಾಪುರ ಅಥವಾ ಮೇಲನಹಳ್ಳಿ ಗ್ರಾಮದಿಂದ ಶುದ್ಧ ಕುಡಿಯುವ ನೀರನ್ನು ತರುವ ಸ್ಥಿತಿಯಿತ್ತು. ಇದನ್ನು ತಪ್ಪಿಸಲು ಕಳೆದ ಒಂದೂವರೇ ವರ್ಷದ ಹಿಂದೆ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಚಾಲನೆ ದೊರೆಯಿತಾದರೂ ಕಾಮಗಾರಿ ಕುಂಟುತ್ತಾ ಸಾಗಿ ನನೆಗುದಿಗೆ ಬಿದ್ದಿದೆ ಎಂದು ಗ್ರಾಮದ ಜಿ.ಜೆ.ಚರಿತ್ಕುಮಾರ್ ದೂರಿದ್ದಾರೆ.
ಈಗಾಗಲೇ ಘಟಕದ ಕಟ್ಟಡ ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದೆ. ಶುದ್ಧೀಕರಣ ಯಂತ್ರವೂ ಬಂದಿದೆ. ಆದರೆ ಕಾಮಗಾರಿ ಮಾತ್ರ ನಡೆಯದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಇತ್ತ ಗಮನಹರಿಸಿ ಕಾಮಗಾರಿಗೆ ಚಾಲನೆ ನೀಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.