ತಿಪಟೂರು: ತಾಲ್ಲೂಕಿನ ಹಾಲ್ಕುರಿಕೆ ಸಮೀಪ ಬಸವರಾಜಪುರ ಬಳಿಯ ಎವಿಟಿ ನ್ಯಾಚುರಲ್ ಪ್ರಾಡಕ್ಟ್ ಕಾರ್ಖಾನೆಯ ಕಾರ್ಮಿಕರೊಬ್ಬರು ಕರ್ತವ್ಯದಲ್ಲಿದ್ದಾಗ ಮುಂಗೈ ಕಳೆದುಕೊಂಡಿದ್ದರೂ ಮಾಲೀಕರು ನಿರ್ಲಕ್ಷ್ಯ ತಾಳಿದ್ದಾರೆಂದು ಆರೋಪಿಸಿ ಸುತ್ತಲಿನ ಗ್ರಾಮಸ್ಥರು ಕಂಪೆನಿ ಎದುರು ಆಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಚೆಂಡು ಹೂವಿನಿಂದ ಪುಡಿ ತಯಾರಿಸುವ ಕಾರ್ಖಾನೆ ಆಡಳಿತ ಮಂಡಳಿಯ ಧೋರಣೆ ಖಂಡಿಸಿರುವ ಜನತೆ ಬಾಗಿಲಲ್ಲಿ ಧರಣಿ ಕುಳಿತಿದ್ದಾರೆ. ಕಾರ್ಮಿಕ ಹಾಲ್ಕುರಿಕೆ ಗೊಲ್ಲರಹಟ್ಟಿ ಗ್ರಾಮದ ರೇಣುಕಸ್ವಾಮಿ (21) ಶನಿವಾರ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಅನಿರೀಕ್ಷಿತವಾಗಿ ಯಂತ್ರಕ್ಕೆ ಕೈ ಸಿಲುಕಿ ಅಂಗೈ ತುಂಡಾಗಿತ್ತು.
ತಕ್ಷಣ ಆತನನ್ನು ಗ್ರಾಮಸ್ಥರೇ ಬೆಂಗಳೂರು ಆಸ್ಪತ್ರೆಗೆ ಒಯ್ದಿದ್ದರು. ಇಷ್ಟಾದರೂ ಕಾರ್ಖಾನೆ ಮಾಲೀಕ ಅಥವಾ ವ್ಯವಸ್ಥಾಪಕ ಆ ಕಾರ್ಮಿಕನ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಚಿಕಿತ್ಸೆಗೂ ಹಣ ನೀಡಿರಲಿಲ್ಲ. ಇದರಿಂದ ರೊಚ್ಚಿಗೆದ್ದ ಗೊಲ್ಲರಹಟ್ಟಿ ಗ್ರಾಮಸ್ಥರು ಭಾನುವಾರ ಕಾರ್ಖಾನೆ ಬಳಿ ನೆರೆದು ಮಾಲೀಕರಿಂದ ನ್ಯಾಯ ಕೇಳಲು ಮುಂದಾಗಿದ್ದರು.
ಅಷ್ಟರಲ್ಲಿ ವ್ಯವಸ್ಥಾಪಕ ಲಕ್ಷ್ಮೀನಾರಾಯಣ ಕಾರ್ಖಾನೆ ಬಾಗಿಲಿಗೆ ಬೀಗ ಹಾಕಿ ನಾಪತ್ತೆಯಾಗಿದ್ದರು. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಅಲ್ಲಿಯೇ ಧರಣಿ ಆರಂಭಿಸಿದರು. ಸೋಮವಾರವೂ ಧರಣಿ ಮುಂದುವರಿದಿತ್ತು. ಆದರೆ ಕಾರ್ಖಾನೆಯಲ್ಲಿ ಭದ್ರತಾ ಸಿಬ್ಬಂದಿ ಹೊರತುಪಡಿಸಿ ಯಾರೂ ಇರಲಿಲ್ಲ.
ಫ್ಯಾಕ್ಟರಿಗೆ ಚೆಂಡು ಹೂ ಹೊತ್ತು ತಂದ ಲಾರಿಗಳನ್ನು ಒಳ ಬಿಡದೆ ಗ್ರಾಮಸ್ಥರು ಹಿಂದಕ್ಕೆ ಕಳುಹಿಸಿದರು. ಕೈ ಕಳೆದುಕೊಂಡ ಕಾರ್ಮಿಕನಿಗೆ ತಕ್ಷಣ ಸೂಕ್ತ ಪರಿಹಾರ ಮತ್ತು ಕಾರ್ಖಾನೆಯಲ್ಲಿ ಕಾಯಂ ಕೆಲಸ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು. ನ್ಯಾಯ ಸಿಗುವವರೆಗೆ ಹೋರಾಟ ಮುಂದುವರಿಸುವುದಾಗಿ ತಿಳಿಸಿದರು. ಕನ್ನಡ ರಕ್ಷಣಾ ವೇದಿಕೆಯ ಅಯ್ಯಣ್ಣ ಮತ್ತಿತರರು ಇದ್ದರು. ಜಿಡಿಎಸ್ ಮುಖಂಡ ಮೈಲಾರಪ್ಪ ಯುವಕನ ಪೋಷಕರಿಗೆ ರೂ 5 ಸಾವಿರ ನೆರವು ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.