ADVERTISEMENT

ಕಾಲೇಜು ಸಮೀಪ ದೇವಾಲಯ; ವಿವಾದ

​ಪ್ರಜಾವಾಣಿ ವಾರ್ತೆ
Published 17 ಜೂನ್ 2011, 7:05 IST
Last Updated 17 ಜೂನ್ 2011, 7:05 IST
ಕಾಲೇಜು ಸಮೀಪ ದೇವಾಲಯ; ವಿವಾದ
ಕಾಲೇಜು ಸಮೀಪ ದೇವಾಲಯ; ವಿವಾದ   

ಕುಣಿಗಲ್: ಪಟ್ಟಣದ ಕೆಆರ್‌ಎಸ್ ಅಗ್ರಹಾರದಲ್ಲಿ ವಿನಾಯಕ ಯುವಕ ಸಂಘ ನಿರ್ಮಿಸಲು ಉದ್ದೇಶಿಸಿರುವ ಗಣಪತಿ ದೇವಾಲಯ ವಿವಾದ ಜಿಲ್ಲಾಧಿಕಾರಿ ಕಚೇರಿ ಮೆಟ್ಟಲೇರಿದೆ.

ವಿನಾಯಕ ಯುವಕ ಸಂಘದಿಂದ ಪಟ್ಟಣದ ಮಹಾತ್ಮಗಾಂಧಿ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಹೊಂದಿಕೊಂಡಂತಿರುವ ಜಾಗದಲ್ಲಿ ಸುಮಾರು 40 ವರ್ಷಗಳಿಂದ ಗಣೇಶನ ಹಬ್ಬದಂದು ಮೂರ್ತಿ ಇಟ್ಟು ಉತ್ಸವ ನಡೆಸಲಾಗುತ್ತಿತ್ತು. 2006ರಲ್ಲಿ ಗಣಪತಿ ದೇವಾಲಯ ಕಟ್ಟಲು ಮುಂದಾದಾಗ ಅಂದಿನ ಪ್ರಾಂಶುಪಾಲರು ತಡೆಯೊಡ್ಡಿ ಕಾನೂನಿನ ಮೊರೆಹೋಗಿದ್ದರಿಂದ ನಿರ್ಮಾಣ ಕಾರ್ಯವನ್ನು ತಾತ್ಕಾಲಿಕವಾಗಿ ಕೈಬಿಡಲಾಗಿತ್ತು.

ಪ್ರಾಂಶುಪಾಲರು ಬದಲಾದ ನಂತರ ಪುನಃ ದೇವಾಲಯ ನಿರ್ಮಾಣಕ್ಕೆ ಸಂಘದವರು ಮುಂದಾಗಿ ಪುರಸಭೆ ಮಾಜಿ ಅಧ್ಯಕ್ಷ ಕೆ.ಎಲ್.ಹರೀಶ್, ರಾಜಣ್ಣ, ಮಾಜಿ ಉಪಾಧ್ಯಕ್ಷ ಎಸ್‌ಟಿಡಿ ಶ್ರೀನಿವಾಸ್, ಮುಖಂಡರಾದ ಹುಚ್ಚೇಗೌಡ, ಜೆಸಿಬಿ ಭೈರಪ್ಪ, ನಂಜುಂಡಪ್ಪ, ಲಕ್ಷ್ಮಣ ಇತರರು ಶಾಸಕ ಬಿ.ಬಿ.ರಾಮಸ್ವಾಮಿಗೌಡ, ಮಾಜಿ ಸಚಿವ ಡಿ.ನಾಗರಾಜಯ್ಯ, ಬಿಜೆಪಿ ಮುಖಂಡ ಡಿ.ಕೃಷ್ಣಕುಮಾರ್ ಸೇರಿದಂತೆ ಎಲ್ಲರ ಮನವೊಲಿಸಿ ಜೂನ್ 17ರಂದು ಭೂಮಿ ಪೂಜೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದರು.

ಪ್ರಾಂಶುಪಾಲರಾದ ಲಲಿತಕುಮಾರಿ ಅವರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಕಾಲೇಜಿನ ಆವರಣದಲ್ಲಿ ದೇವಾಲಯ ನಿರ್ಮಾಣಕ್ಕೆ ಮುಂದಾಗಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸಮಸ್ಯೆಯಾಗುತ್ತದೆ ಎಂದು ದೂರು ನೀಡಿದರು.

ಡಿವೈಎಸ್‌ಪಿ ಶಿವರುದ್ರಸ್ವಾಮಿ, ಸಿಪಿಐ ಬಿ.ಕೆ.ಶೇಖರ್, ಪಿಎಸ್‌ಐ ಚನ್ನಯ್ಯಹಿರೇಮಠ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ, ಸಂಬಂಧಪಟ್ಟ ಅಧಿಕಾರಿಗಳಿಂದ ಪರವಾನಗಿ ಪಡೆದು ದೇವಾಲಯ ನಿರ್ಮಾಣಕ್ಕೆ ಮುಂದಾಗಬೇಕೆಂದು ವಿನಾಯಕ ಸಂಘದ ಪದಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT